ಕನ್ನಡಪ್ರಭ ವಾರ್ತೆ ಕುಂದಾಪುರ
ತಮಿಳುನಾಡು ಸಿಎಂ ಆದ ಬಳಿಕ ಇದೇ ಮೊದಲ ಬಾರಿಗೆ ಕೊಲ್ಲೂರಿಗೆ ಆಗಮಿಸಿದ ವಿಜಯ್ಗೆ ದೇವಸ್ಥಾನದ ಅರ್ಚಕರು ಪೂರ್ಣಕುಂಭ ಸ್ವಾಗತ ನೀಡಿ ಸ್ತಂಭ ಗಣಪತಿ ಪೂಜೆ ನೆರವೇರಿಸಿದರು. ಬಳಿಕ ಗರ್ಭಗುಡಿಯಲ್ಲಿ ದೇವಿಯ ದರ್ಶನ ಮಾಡಿಸಿ ಫಲ ಸಮರ್ಪಿಸಲಾಯಿತು. ಈ ವೇಳೆ, ವಿಜಯ್ ಅವರು ದೇವಿಗೆ ಬೆಳ್ಳಿಯ ಖಡ್ಗವನ್ನು ಕೊಡುಗೆಯಾಗಿ ಸಮರ್ಪಿಸಿದರು. ಸುಮಾರು 30 ನಿಮಿಷ ದೇವಸ್ಥಾನದಲ್ಲಿ ಕಳೆದ ಅವರು ಯಾವುದೇ ವಿಶೇಷ ಸಂಕಲ್ಪ ಮಾಡದೆ ದೇವಿಯ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಿದರು. ನಂತರ, ವಿಜಯ್ ಅವರ ಕೈಗೆ ಶ್ರೀರಕ್ಷೆಯ ದಾರ ಕಟ್ಟಿ, ಅವರಿಗೆ ಪ್ರಸಾದ ನೀಡಿ ಆಶೀರ್ವದಿಸಲಾಯಿತು.
ಬಳಿಕ, ದೇವಸ್ಥಾನದ ವತಿಯಿಂದ ಅವರನ್ನು ಗೌರವಿಸಲಾಯಿತು. ವಿಜಯ್ ಅವರನ್ನು ಗೌರವಿಸಲು ದೇವಸ್ಥಾನದ ವತಿಯಿಂದ ಆಸನಗಳನ್ನು ಸಿದ್ಧಪಡಿಸಲಾಗಿತ್ತು. ಆದರೆ, ಅವುಗಳನ್ನು ಬದಿಗಿರಿಸಿ, ನಿಂತುಕೊಂಡೇ ಗೌರವ ಸ್ವೀಕರಿಸಿ, ಸರಳತೆ ಮೆರೆದರು. ಬಳಿಕ, ಅವರು ಗರ್ಭಗುಡಿ ಸುತ್ತ ಪ್ರದಕ್ಷಿಣೆ ಬಂದು ಆದಿ ಶಂಕರಾಚಾರ್ಯ ಪೀಠ, ಚಿನ್ನದ ರಥ, ಶ್ರೀ ವೀರಭದ್ರ ಹಾಗೂ ಪರಿಹಾರ ದೇವತೆಗಳ ದರ್ಶನ ಪಡೆದರು.ಸ್ವತಃ ಕಾರು ಚಲಾಯಿಸಿದ ವಿಜಯ್:ಕೊಲ್ಲೂರಿನಲ್ಲಿ ದೇವಿಯ ದರ್ಶನ ಪಡೆದ ಬಳಿಕ ದೇವಸ್ಥಾನದ ಮುಖ್ಯದ್ವಾರದಿಂದ ಹೊರ ಬಂದ ವಿಜಯ್, ಬೆಳಗ್ಗೆಯಿಂದಲೇ ಕಾದು ನಿಂತಿದ್ದ ಅಭಿಮಾನಿಗಳತ್ತ ಕೈ ಬೀಸಿ ಅವರ ಹರ್ಷೋದ್ಗಾರಕ್ಕೆ ಸ್ಪಂದಿಸಿದರು. ಬಳಿಕ ತಮ್ಮ ಕಾರಿನ ಚಾಲಕನ ಸ್ಥಾನದಲ್ಲಿ ತಾವೇ ಕುಳಿತು ವಾಹನ ಚಲಾಯಿಸುತ್ತಾ ಸುಮಾರು 130 ಕಿ.ಮೀ. ದೂರದ ಮಂಗಳೂರು ವಿಮಾನ ನಿಲ್ದಾಣದ ಕಡೆಗೆ ಪ್ರಯಾಣ ಬೆಳೆಸಿದರು. ಸುರಿವ ಮಳೆಯನ್ನೂ ಲೆಕ್ಕಿಸದೆ ಕೊಲ್ಲೂರಿನಿಂದ ಕುಂದಾಪುರದವರೆಗೆ ರಸ್ತೆ ಬದಿಯಲ್ಲಿ ನೆರೆದಿದ್ದ ಅಭಿಮಾನಿಗಳು ನೆಚ್ಚಿನ ನಟ ಹಾಗೂ ಮುಖ್ಯಮಂತ್ರಿಗೆ ಜಯಘೋಷ ಮೊಳಗಿಸಿದರು.
ಎಂಜಿಆರ್ರಿಂದ ಚಿನ್ನದ ಖಡ್ಗ: