ಸರ್ಕಾರಿ ಶಾಲೆಗಳ ಬಗ್ಗೆ ಕೀಳರಿಮೆ ಬೇಡ

KannadaprabhaNewsNetwork | Published : May 30, 2025 11:47 PM
ಸರ್ಕಾರಿ ಶಾಲೆಗಳಲ್ಲಿ ನುರಿತ ಹಾಗೂ ಅನುಭವಿ ಶಿಕ್ಷಕರು ಬೋಧನೆ ಮಾಡುತ್ತಾರೆ. ಗುಣಮಟ್ಟದ ಶಿಕ್ಷಣ ಕೊಡುತ್ತಾರೆ. ಎಲ್ಲರೂ ಸರ್ಕಾರದ ನಿಯಮಗಳಂತೆ ನೇಮಕಗೊಂಡ ಶಿಕ್ಷಕರಾಗಿರುತ್ತಾರೆ. ಇದರ ಜೊತೆಗೆ ಸರ್ಕಾರಿ ಸೌಲಭ್ಯಗಳಾದ ಬಿಸಿಯೂಟ, ವಿದ್ಯಾರ್ಥಿ ವೇತನ ಸೇರಿದಂತೆ ಹಲವು ಸೌಲಭ್ಯಗಳು ಸಿಗಲಿದೆ.
Follow Us

ಕನ್ನಡಪ್ರಭ ವಾರ್ತೆ ಗುಡಿಬಂಡೆ

ಅನೇಕರಿಗೆ ಸರ್ಕಾರಿ ಶಾಲೆಗಳು ಎಂದರೇ ಕೀಳರಿಮೆ ಇರುತ್ತದೆ. ಆದರೆ ಸರ್ಕಾರಿ ಶಾಲೆಗಳಲ್ಲಿ ಉಚಿತ ಶಿಕ್ಷಣದ ಜೊತೆಗೆ ಗುಣಮಟ್ಟದ ಶಿಕ್ಷಣ ಸಹ ನೀಡಲಾಗುತ್ತಿದೆ. ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲು ಮಾಡುವಂತೆ ಬಿಇಒ ಕೃಷ್ಣಕುಮಾರಿ ಪೋಷಕರಲ್ಲಿ ಮನವಿ ಮಾಡಿದರು.

ಪಟ್ಟಣದ ಪಿಎಂ ಶ್ರೀ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ತರಗತಿಗಳ ಪ್ರಾರಂಭೋತ್ಸವ, ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ಹಾಗೂ ಸಮವಸ್ತ್ರ ವಿತರಣೆ ಮಾಡಿ ಮಾತನಾಡಿದ ಅವರು, ಖಾಸಗಿ ಶಾಲೆಗಳ ಮೇಲಿನ ವ್ಯಾಮೋಹದಿಂದ ಅನೇಕರು ಸರ್ಕಾರಿ ಶಾಲೆಗಳ ಬಗ್ಗೆ ಕೀಳರಿಮೆ ಹೊಂದಿದ್ದಾರೆ ಎಂದರು.

ಸರ್ಕಾರಿ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ

ಆದರೆ ಇದು ತಪ್ಪು. ಸರ್ಕಾರಿ ಶಾಲೆಗಳಲ್ಲಿ ನುರಿತ ಹಾಗೂ ಅನುಭವಿ ಶಿಕ್ಷಕರು ಬೋಧನೆ ಮಾಡುತ್ತಾರೆ. ಗುಣಮಟ್ಟದ ಶಿಕ್ಷಣ ಕೊಡುತ್ತಾರೆ. ಎಲ್ಲರೂ ಸರ್ಕಾರದ ನಿಯಮಗಳಂತೆ ನೇಮಕಗೊಂಡ ಶಿಕ್ಷಕರಾಗಿರುತ್ತಾರೆ. ಇದರ ಜೊತೆಗೆ ಸರ್ಕಾರಿ ಸೌಲಭ್ಯಗಳಾದ ಬಿಸಿಯೂಟ, ವಿದ್ಯಾರ್ಥಿ ವೇತನ ಸೇರಿದಂತೆ ಹಲವು ಸೌಲಭ್ಯಗಳು ಸಿಗಲಿದೆ. ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಸರ್ಕಾರ ಹಾಗೂ ಶಿಕ್ಷಣ ಇಲಾಖೆ ಅವಿರಥವಾಗಿ ಶ್ರಮಿಸುತ್ತಿದೆ. ಆದ್ದರಿಂದ ಪೋಷಕರು ಖಾಸಗಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ದಾಖಲು ಮಾಡುವುದರ ಬದಲಿಗೆ ಸರ್ಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ದಾಖಲು ಮಾಡಿ ಎಂದು ಸಲಹೆ ನೀಡಿದರು.

ಬಳಿಕ ಪಪಂ ನಾಮಿನಿ ಸದಸ್ಯ ಅಂಬರೀಶ್ ಮಾತನಾಡಿ, ಈ ಹಿಂದೆ ನಾವು ಓದುವ ಸಮಯದಲ್ಲಿ ಅಷ್ಟೊಂದು ಸೌಲಭ್ಯಗಳು ಇರಲಿಲ್ಲ. ಆದರೂ ಸಹ ನಾವೆಲ್ಲರೂ ಸರ್ಕಾರಿ ಶಾಲೆಗಳಲ್ಲಿಯೇ ಓದಿದ್ದೇವೆ. ಇಂದು ಯಾವುದೇ ಫಲಿತಾಂಶವಿರಲಿ ಅದರಲ್ಲಿ ಹೆಚ್ಚಿನ ಅಂಕಗಳನ್ನು ಪಡೆದಿರೋದು ಸರ್ಕಾರಿ ಶಾಲೆಯ ಮಕ್ಕಳು ಎಂದರೇ ತಪ್ಪಲ್ಲ ಎಂದು ಹೇಳಿದರು.

ಪಿಎಂಶ್ರೀ ಶಾಲೆಯಾಗಿ ಉನ್ನತೀಕರಣ

ಸರ್ಕಾರಿ ಶಾಲೆಗಳಲ್ಲಿ ಸಾಕಷ್ಟು ಸೌಲಭ್ಯಗಳನ್ನು ನೀಡಲಾಗುತ್ತಿದೆ. ಅವುಗಳನ್ನು ಮಕ್ಕಳು ಸದ್ಬಳಕೆ ಮಾಡಿಕೊಳ್ಳಬೇಕು. ಇದೀಗ ಈ ಶಾಲೆ ಪಿಎಂಶ್ರೀ ಶಾಲೆಯಾಗಿ ಉನ್ನತೀಕರಣಗೊಂಡಿದ್ದು, ಮತ್ತಷ್ಟು ಸೌಲಭ್ಯಗಳು ಮಕ್ಕಳಿಗೆ ಸಿಗಲಿದೆ. ಶಾಲೆಯ ಅಭಿವೃದ್ದಿಗೆ ನಮ್ಮ ಸಹಕಾರ ಸದಾ ಇರುತ್ತದೆ ಎಂದರು.

ಇದೇ ಸಮಯದಲ್ಲಿ ಶಾಲೆಯ ಮುಖ್ಯ ಶಿಕ್ಷಕ ಎಂ.ಶಂಕರ್ ಹಾಗೂ ಎಸ್.ಡಿ.ಎಂ.ಸಿ ಅಧ್ಯಕ್ಷ ನಾಗರಾಜು ಮಾತನಾಡಿದರು. ಶಾಲಾ ಪ್ರಾರಂಭೋತ್ಸವದ ಅಂಗವಾಗಿ ವಿದ್ಯಾರ್ಥಿಗಳಿಗೆ ಗುಲಾಬಿ ಹಾಗೂ ಸಿಹಿ ನೀಡುವ ಮೂಲಕ ಆಹ್ವಾನಿಸಿದರು. ಈ ವೇಳೆ ಶಿಕ್ಷಣ ಇಲಾಖೆಯ ಇಸಿಒಗಳಾದ ರಘು, ನಂಜುಂಡಪ್ಪ, ಟಿಪಿಒ ಮುರಳಿ, ಸ್ಥಳೀಯ ಮುಖಂಡ ಬುಲೆಟ್ ಶ್ರೀನಿವಾಸ್ ಸೇರಿದಂತೆ ಹಲವರು ಇದ್ದರು.