ಕನ್ನಡಪ್ರಭ ವಾರ್ತೆ ಹಾಸನ
ಮಕ್ಕಳ ದಿನಾಚರಣೆ ಅಂಗವಾಗಿ ಭಾನುವಾರ ನಗರದಲ್ಲಿರುವ ಮಹಾರಾಜ ಪಾರ್ಕ್ನಲ್ಲಿ ಜಿಲ್ಲಾ ಅಮೆಚೂರ್ ಬಾಡಿ ಬಿಲ್ಡರ್ ಸಂಸ್ಥೆಯ ವತಿಯಿಂದ ಕರಾಟೆ, ಜೂಡೋ, ಮಲ್ಲಕಂಬ ಸೇರಿದಂತೆ ವಿವಿಧ ಕ್ರೀಡಾಕ್ಷೇತ್ರಗಳಲ್ಲಿ ತರಬೇತಿ ಪಡೆಯುತ್ತಿರುವ ಮಕ್ಕಳಿಗಾಗಿ ಆಟೋಟ ಸ್ಪರ್ಧೆಗಳನ್ನು ವಿಜೃಂಭಣೆಯಿಂದ ಆಯೋಜಿಸಲಾಗಿತ್ತು.ಸಾಂಸ್ಕೃತಿಕ ಕ್ರೀಡಾ ಸಂಭ್ರಮದಲ್ಲಿ ಮಕ್ಕಳ ಪ್ರತಿಭೆ, ಉತ್ಸಾಹ ಮತ್ತು ಕೌಶಲ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಕಾರ್ಯಕ್ರಮಕ್ಕೆ ದಿಲ್ಲಿಯ ಮಾಜಿ ನಗರಸಭಾಧ್ಯಕ್ಷ ಹಾಗೂ ಹಿರಿಯ ಕ್ರೀಡಾಪಟು ಚನ್ನವೀರಪ್ಪ ಮುಖ್ಯ ಅತಿಥಿಗಳಾಗಿ ಆಗಮಿಸಿ, ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಿದರು. ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಪೋಷಕರು ಮಕ್ಕಳಿಗೆ ಕೇವಲ ಶಿಕ್ಷಣವಷ್ಟೇ ಅಲ್ಲ, ಕ್ರೀಡೆಯಲ್ಲಿಯೂ ಪ್ರೋತ್ಸಾಹ ನೀಡುವುದು ಅತ್ಯಂತ ಅಗತ್ಯ. ಕ್ರೀಡೆ ಮಕ್ಕಳು ಶಿಸ್ತಿನ ಜೀವನಕ್ಕೆ, ಆರೋಗ್ಯಕರ ಬೆಳವಣಿಗೆಗೆ ಮತ್ತು ಉಜ್ವಲ ಭವಿಷ್ಯಕ್ಕೆ ದಾರಿ ಮಾಡಿಕೊಡುತ್ತದೆ ಎಂದು ಸಲಹೆ ನೀಡಿದರು. ಜೆಮ್ ತರಬೇತಿದಾರ ಹಾಗೂ ಹಾಸನದ ಕ್ರೀಡಾ ರಂಗದ ಸಕ್ರಿಯ ಮಾರ್ಗದರ್ಶಕರಾದ ಜೆ.ಐ. ನಿರಂಜನ್ ರಾಜ್, ಹಿರಿಯ ಅಂತಾರಾಷ್ಟ್ರೀಯ ಅತ್ಲೀಟ್ ಪುರುಷೋತ್ತಮ್, ರಾಷ್ಟ್ರೀಯ ಕೇರಂ ಪಟು ಶ್ರೀ ಮಂಜುನಾಥ್ ಹಾಗೂ ಅನೇಕ ಕ್ರೀಡಾ ಅಭಿಮಾನಿಗಳು ಕಾರ್ಯಕ್ರಮಕ್ಕೆ ಸಾನಿಧ್ಯ ನೀಡಿದರು. ಕರಾಟೆ ತರಬೇತಿದಾರ ಮಹದೇವ ಅವರ ಮಾರ್ಗದರ್ಶನದಲ್ಲಿ ಮಕ್ಕಳು ನೀಡಿದ ಮಲ್ಲಖಂಬ ಪ್ರದರ್ಶನ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು. ಮಕ್ಕಳ ಚುರುಕುತನ, ಶಿಸ್ತಿನ ಪ್ರದರ್ಶನ ಹಾಗೂ ಶಾರೀರಿಕ ಸಾಮರ್ಥ್ಯವನ್ನು ನೋಡುವುದಕ್ಕಾಗಿ ಪ್ರೇಕ್ಷಕರು ದೊಡ್ಡ ಸಂಖ್ಯೆಯಲ್ಲಿ ಆಗಮಿಸಿದ್ದರು.ಕಾರ್ಯಕ್ರಮದಲ್ಲಿ ಚಂದ್ರಕಲಾ ಸ್ವಾಗತ ನುಡಿಗಳನ್ನು ನೀಡಿದರು ಹಾಗೂ ಸಮಾರಂಭವನ್ನು ಸುಂದರವಾಗಿ ನಿರೂಪಿಸಿದರು. ಮಕ್ಕಳ ಕ್ರೀಡಾ ಸಾಮರ್ಥ್ಯವನ್ನು ಉತ್ತೇಜಿಸುವ ಮತ್ತು ಆರೋಗ್ಯಕರ ಸಮಾಜ ನಿರ್ಮಾಣದ ದಿಸೆಯಲ್ಲಿ ನಡೆದ ಈ ಕಾರ್ಯಕ್ರಮ, ಹಾಸನದ ಕ್ರೀಡಾಕ್ಷೇತ್ರಕ್ಕೆ ಮತ್ತೊಂದು ಸ್ಮರಣೀಯ ಅಧ್ಯಾಯ ಸೇರಿಸಿತು.