ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಮಧುಮೇಹ, ಬಿ.ಪಿ, ಸಂಧಿವಾತ, ನರಗಳ ಸೆಳೆತ, ಸ್ಪಾಂಡಿಲೈಟೀಸ್, ನಿದ್ರಾಹೀನತೆ, ಥೈರಾಯ್ಡ್, ಲಕ್ವಾ, ಬೆನ್ನು ನೋವು ಮುಂತಾದ ಸುದೀರ್ಘ ನೋವುಗಳಿಗೆ ಫೂಟ್ ಥೆರಪಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎಂದು ಡಾ.ರತ್ನಾಕರ ಶೆಟ್ಟಿ ತಿಳಿಸಿದರು.ಪಟ್ಟಣದ ಹೇಮಾವತಿ ಸಭಾಂಗಣದಲ್ಲಿ ರೋಟರಿ ಕ್ಲಬ್ ಹಾಗೂ ಕಂಪಾನಿಯೋ ಸಹಯೋಗದಲ್ಲಿ ಆಯೋಜಿಸಿದ್ದ ಉಚಿತ ಫೂಟ್ ಪಲ್ಸ್ ಥೆರಪಿ ಚಿಕಿತ್ಸಾ ಶಿಬಿರ ಆರೋಗ್ಯ ಮಾಹಿತಿ ಕಾರ್ಯಾಗಾರದಲ್ಲಿ ಮಾತನಾಡಿ, ಮನುಷ್ಯನ ದೇಹದಲ್ಲಿ ರಕ್ತ ಸಂಚಾರ ಸರಾಗವಾಗಿ ನಡೆಯಲು ಈ ಚಿಕಿತ್ಸೆ ಅತ್ಯಂತ ಅತ್ಯಂತ ಪರಿಣಾಮಕಾರಿ. ಕೇವಲ ೧೫ ದಿನಗಳ ಚಿಕಿತ್ಸೆ ಪಡೆದರೆ ಶುಗರ್, ಬಿಪಿ, ಸ್ನಾಯುಸೆಳೆತ, ಸಂಧಿವಾತ, ನಿದ್ರಾಹೀನತೆ, ಬೆನ್ನುನೋವು, ಮಂಡಿನೋವು, ಪಾರ್ಶ್ವವಾಯು, ಥೈರಾಯ್ಡ್ ಸೇರಿದಂತೆ ನರಗಳಿಗೆ ಸಂಬಂಧಿಸಿದ ಹಲವು ರೋಗಗಳಿಂದ ಗುಣಮುಖರಾಗಬಹುದು ಎಂದರು.
ನರ ರೋಗಗಳಿಗೆ ಸಂಬಂಧಿಸಿ ಸಣ್ಣ ಮತ್ತು ದೀರ್ಘಕಾಲಿಕ ಸಮಸ್ಯೆಗಳನ್ನು ಔಷಧ ರಹಿತವಾಗಿ ಹಾಗೂ ಯಾವುದೇ ಅಡ್ಡ ಪರಿಣಾಮಗಳಿಲ್ಲದೆ ಪರಿಹರಿಸಬಹುದು. ಪ್ರತಿಯೊಬ್ಬರೂ ಉಚಿತವಾಗಿ ಚಿಕಿತ್ಸೆ ಪಡೆಯಬೇಕು ಎಂಬುದು ಸಂಸ್ಥೆ ಮುಖ್ಯ ಉದ್ದೇಶ ಆಗಿದೆ ಎಂದರು.ಇತರರ ಒಳಿತಿಗಾಗಿ ಬದುಕುವುದೇ ಜೀವನ ಕಲೆ. ಇದನ್ನು ರೋಟರಿ ಕ್ಲಬ್ನ ಸದಸ್ಯರು ಸಮರ್ಪಕವಾಗಿ ಅಳವಡಿಸಿಕೊಳ್ಳುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ. ಸಮಾಜದಲ್ಲಿರುವ ಬಡವರು, ದೀನದಲಿತರ ಶ್ರೇಯೋಭಿವೃದ್ಧಿಗಾಗಿ ಗುಣಮಟ್ಟದ ಶಿಕ್ಷಣ ಹಾಗೂ ವೈದ್ಯಕೀಯ ಸೇವೆ ನೀಡುವಲ್ಲಿ ರೋಟರಿ ಮುಂದಿದೆ. ನಿರ್ದಿಷ್ಟ ಯೋಜನೆಗಳನ್ನು ರೂಪಿಸಿ ಜನರಿಗೆ ಸೇವೆಗಳನ್ನು ತಲುಪಿಸುತ್ತಿರುವ ರೋಟರಿ ನಡೆಯನ್ನು ಸರ್ಕಾರವೂ ಅನುಸರಿಸಬೇಕಿದೆ ರೋಟರಿ ಕ್ಲಬ್ ಆಯೋಜಿಸಿದ ಉಚಿತ ಫೂಟ್ ಪಲ್ಸ್ ಥೆರಪಿ ಚಿಕಿತ್ಸಾ ಶಿಬಿರದಲ್ಲಿ ಇದುವರೆಗೂ ೨೫೦೦ ಜನ ಚಿಕಿತ್ಸೆಯನ್ನು ಪಡೆದಿದ್ದಾರೆ ಎಂದು ತಿಳಿಸಿದರು.
ರೋಟರಿ ಕ್ಲಬ್ ಚನ್ನರಾಯಪಟ್ಟಣ ವಿಷನ್ ಅಧ್ಯಕ್ಷ ಬಿ.ವಿ. ವಿಜಯ್ ಕುಮಾರ್ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ರೋಟರಿ ಕ್ಲಬ್ ಸಮಾಜಮುಖಿ ಕಾರ್ಯದಲ್ಲಿ ನಿರಂತರವಾಗಿ ತೊಡಗುತ್ತಿದೆ. ಇಲ್ಲಿ ಸೇವೆ ಮಾಡುವುದು ಮುಖ್ಯವಾಗಿದೆ. ರೋಟರಿ ಸಂಸ್ಥೆಯ ಬೆಳೆದಿದ್ದೆ ಸಮಾಜಮುಖಿ ಕಾರ್ಯಕ್ಕಾಗಿ, ಸಮಾಜ ಸೇವೆಯನ್ನೇ ಮುಖ್ಯ ಗುರಿಯನ್ನಾಗಿಸಿ ಕೊಂಡಿರುವ ರೋಟರಿ ಕ್ಲಬ್ ರಕ್ತದಾನ, ಕೃಷಿ, ಹಲವಾರು ಬಡಮಕ್ಕಳ ಶೈಕ್ಷಣಿಕ ಚಟುವಟಿಕೆಗೆ ಶ್ರಮಿಸುತ್ತಿದೆ. ಕಂಪಾನಿಯೋ ಸಂಸ್ಥೆ ಸಹಕಾರದಿಂದ ಆರೋಗ್ಯ ರಕ್ಷಣೆಗೆ ಸಂಬಂಧಿಸಿ ಹಲವು ಕಾರ್ಯಕ್ರಮಗಳನ್ನು ರೋಟರಿ ಸಂಸ್ಥೆ ರೂಪಿಸುತ್ತಿದೆ. ಆರೋಗ್ಯ, ರಕ್ತದಾನ, ನೇತ್ರ ಚಿಕಿತ್ಸೆ ಮತ್ತಿತರ ಆರೋಗ್ಯ ಶಿಬಿರಗಳನ್ನು ಗ್ರಾಮೀಣ ಪ್ರದೇಶಗಳಿಗೆ ವಿಸ್ತರಿಸುವ ಉದ್ದೇಶ ಹೊಂದಿದೆ ಎಂದರು.ರೋಟರಿ ಕ್ಲಬ್ ಚನ್ನರಾಯಪಟ್ಟಣ ವಿಷನ್ನ ವಲಯಸೇನಾನಿ ಜಯ ರಾಘವೇಂದ್ರ, ಖಜಾಂಚಿ ನಟರಾಜ್, ಕಾರ್ಯದರ್ಶಿ ಡಾ.ಎಸ್. ಎಸ್. ಕುಮುದಾ, ಮಾಜಿ ಸಹಾಯಕ ಗವರ್ನರ್ ಪದ್ಮನಾಭ, ಸದಸ್ಯರಾದ ಜ್ಯೋತಿ, ಪರಮೇಶ್, ಫಿಜಿಯೋ ಥೆರಪಿಸ್ಟ್ ಮೇಘನಾ ಸೇರಿದಂತೆ ಇತರರು ಉಪಸ್ಥಿತರಿದ್ದರು.