ಕನ್ನಡಪ್ರಭ ವಾರ್ತೆ ಕೊರಟಗೆರೆ
ಆರ್ಸಿಬಿ ವಿಜಯೋತ್ಸವದ ವೇಳೆ ನಡೆದ ಕಾಲ್ತುಳಿತದಲ್ಲಿ 11 ಜನ ಬಲಿಯಾಗಿದ್ದು, ಗೃಹ ಸಚಿವ ಡಾ। ಜಿ.ಪರಮೇಶ್ವರ್ ಅವರ ಅಸಹಾಯಕತೆ ಎದ್ದು ಕಾಣಿಸುತ್ತದೆ ಎಂದು ಯುವ ಜೆಡಿಎಸ್ ಪಕ್ಷದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದರು.ತಾಲೂಕು ಜೆಡಿಎಸ್ ಏರ್ಪಡಿಸಿದ್ದ ಕಾರ್ಯಕರ್ತರ ಸಭೆ ಹಾಗೂ ಸದಸ್ವ ನೋಂದಣಿ ಅಭಿಯಾನ ಉದ್ಘಾಟಿಸಿ ಮಾತನಾಡಿ, ಪೊಲೀಸ್ ಇಲಾಖೆ ಬೇಡ ಎಂದರೂ ಸಹ ಸಿಎಂ, ಡಿಸಿಎಂ ಹಠಕ್ಕೆ ಬಿದ್ದು ವಿಧಾನಸೌಧದ ಮುಂದೆ ಕಾರ್ಯಕ್ರಮ ಮಾಡಿದ್ದಾರೆ. ಆದರೆ, ಅದಕ್ಕೆ ನಾವು ಹೊಣೆಯಲ್ಲವೆಂದು ಕಾರಣ ನೀಡಿ ನಿಷ್ಠಾವಂತ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿದ್ದಾರೆ. ಇಷ್ಟೇಲ್ಲಾ ಆದರೂ ಗೃಹ ಸಚಿವರು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಅಲ್ಲದೆ ಅಧಿಕಾರಿಗಳನ್ನು ಸಹ ಉಳಿಸಿಕೊಳ್ಳುವ ಪ್ರಯತ್ನ ಮಾಡಲಿಲ್ಲ. ಇದು ಅವರ ಅಸಹಾಯಕತೆಯನ್ನು ಎದ್ದು ತೋರಿಸಿದೆ ಎಂದು ತಿವಿದರು.ರಾಷ್ಟ್ರೀಯ ಪಕ್ಷಗಳು ಪ್ರಾದೇಶಿಕ ಸಮಸ್ಯೆಗಳ ಬಗ್ಗೆ ಗಮನ ನೀಡದೆ ಎಲ್ಲವೂ ದೆಹಲಿ ಸೂಚನೆ ಆಡಳಿತ ನೀಡುತ್ತವೆ. ಕರ್ನಾಟಕದಲ್ಲಿ ಜೆಡಿಎಸ್ ಕಾರ್ಯಕರ್ತರ ಬಲಿಷ್ಠ ಪಡೆ ಇದೆ. ಜೆಡಿಎಸ್ ಕಾರ್ಯಕರ್ತರು ಎಲ್ಲಾ ಬೂತ್ಗಳಲ್ಲೂ ಹೆಚ್ಚಿನ ಸದಸ್ಯತ್ವ ನೋಂದಣಿ ಮಾಡಿ ಮುಂಬರುವ ದಿನಗಳಲ್ಲಿ ಗ್ರಾಮ ಪಂಚಾಯತಿ ಹಾಗೂ ಜಿಲ್ಲಾ, ತಾಲೂಕು ಪಂಚಾಯಿತಿ ಚುನಾವಣೆಗಳಿಗೆ ಸಿದ್ಧರಾಗಿ ಎಂದು ಕರೆ ನೀಡಿದರು.ವೈಜಾಕ್ನಲ್ಲಿರುವ 1 ಲಕ್ಷ ಕೋಟಿ ಬೆಲೆ ಬಾಳುವಂತ ಸ್ಟೀಲ್ ಕಾರ್ಖಾನೆ ಮುಚ್ಚಲಾಗಿತ್ತು. ಕೇವಲ 10 ಸಾವಿರ ಕೋಟಿಗೆ ಮಾರಬೇಕು ಎನ್ನಲಾಗಿತ್ತು. ಆದರೆ, ಕುಮಾರಸ್ವಾಮಿ ಅವರು ಕೇಂದ್ರ ಸಚಿವರಾದ ಮೇಲೆ ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಅವರಿಂದ ₹11,440 ಕೋಟಿ ಅನುದಾನ ತಂದು ಮತ್ತೆ ಆರಂಭ ಮಾಡುತ್ತಿದ್ದು, ಮತ್ತೆ ಸಾವಿರಾರು ಜನರಿಗೆ ಉದ್ಯೋಗ ದೊರೆಯುತ್ತಿದೆ ಎಂದರು.
+++