ಚಿಕ್ಕಬಳ್ಳಾಪುರಕ್ಕೂ ಬರಲಿದೆ ಕುಸುಮ್‌ ಯೋಜನೆ

KannadaprabhaNewsNetwork |  
Published : Jul 21, 2025, 01:30 AM ISTUpdated : Jul 21, 2025, 01:03 PM IST
Dr sudhakar

ಸಾರಾಂಶ

ಕುಸುಮ್‌ ಯೋಜನೆಯಡಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ   8 ಉಪ ವಿದ್ಯುತ್‌ ಕೇಂದ್ರಗಳ ಬಳಿ 47 ಮೆಗಾ ವ್ಯಾಟ್‌ ಸಾಮರ್ಥ್ಯದ ಸೌರ ಘಟಕ ನಿರ್ಮಾಣಕ್ಕೆ 252 ಎಕರೆ ಮಂಜೂರಾಗಿದೆ.

  ಚಿಕ್ಕಬಳ್ಳಾಪುರ :  ಇನ್ನು ಮುಂದೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಅನ್ನದಾತ ರೈತರು ಪಂಪ್‌ಸೆಟ್‌ಗೆ ನೀಡುವ ವಿದ್ಯುತ್‌ಗಾಗಿ ಪರಿತಪಿಸಬೇಕಿಲ್ಲ. ಏಕೆಂದರೆ, 252 ಎಕರೆ ಜಾಗದಲ್ಲಿ 47 ಮೆಗಾ ವ್ಯಾಟ್‌ ಸಾಮರ್ಥ್ಯದ ಸೌರ ಘಟಕಗಳ ಅಳವಡಿಕೆ ಮೂಲಕ ರೈತರ ಪಂಪ್‌ಸೆಟ್‌ಗಳಿಗೆ ಸೌರ ವಿದ್ಯುತ್‌ನ ಪೂರೈಕೆ ಮಾಡಲು ಬೃಹತ್‌ ಯೋಜನೆ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಸಂಸದ ಡಾ,ಕೆ.ಸುಧಾಕರ್ ತಿಳಿಸಿದ್ದಾರೆ. 

ಕೃಷಿ ಕ್ಷೇತ್ರದಲ್ಲಿ ಸುಧಾರಣೆ ತಂದು ರೈತರ ಆಥಿಕ ಪರಿಸ್ಥಿತಿಯನ್ನು ಉತ್ತಮಪಡಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ಅವರು ತಿಳಿಸಿದ್ದಾರೆ. ವಿದ್ಯುತ್‌ ಸಮಸ್ಯೆಗೆ ಪರಿಹಾರ

ವಿದ್ಯುತ್‌ನ ವಿಷಯದಲ್ಲಿ ರೈತರು ಇನ್ನೂ ಹಲವು ಸವಾಲುಗಳನ್ನು ಎದುರಿಸುತ್ತಿದ್ದಾರೆ. ಅದರಲ್ಲೂ ಚಿಕ್ಕಬಳ್ಳಾಪುರದಂತೆ ಬಯಲುಸೀಮೆ ಪ್ರದೇಶದಲ್ಲಿ ರೈತರು ಕೃಷಿ ಕ್ಷೇತ್ರದಲ್ಲಿ ವಿಭಿನ್ನವಾದ ಸವಾಲುಗಳನ್ನು ಎದುರಿಸುತ್ತಿದ್ದಾರೆ. 

ಇದಕ್ಕಾಗಿಯೇ ಕೇಂದ್ರ ಸರ್ಕಾರ ಕುಸುಮ್‌ ಯೋಜನೆ ಜಾರಿ ಮಾಡಿದೆ. ಇಂಧನ ಉಳಿತಾಯದ ವಿಷಯದಲ್ಲಿ ಕೇಂದ್ರ ಸರ್ಕಾರ ಸಾಕಷ್ಟು ಮುನ್ನಡೆ ಸಾಧಿಸಿದೆ. ಪರಿಸರ ಸ್ನೇಹಿಯಾದ ಸೌರಶಕ್ತಿಯ ಬಳಕೆಯನ್ನು ಹೆಚ್ಚಿಸುವ ಯೋಜನೆಗಳಲ್ಲಿ ಕುಸುಮ್‌ ಕೂಡ ಒಂದು ಎಂದಿದ್ದಾರೆ.

 ಪಂಪ್‌ಸೆಟ್‌ಗಳು ನೀರಾವರಿಯಲ್ಲಿ ಪ್ರಧಾನ ಪಾತ್ರ ವಹಿಸುತ್ತವೆ. ಒಂದು ದಿನ ವಿದ್ಯುತ್‌ ಇಲ್ಲವಾದರೆ ರೈತರು ಹೊಲ, ತೋಟಗಳಿಗೆ ನೀರು ಹರಿಸಲು ಪರದಾಡಬೇಕಾಗುತ್ತದೆ. ರಾಜ್ಯ ಸರ್ಕಾರದಿಂದ ನಿರಂತರ 7 ಗಂಟೆಗಳ ಕಾಲ 3 ಫೇಸ್‌ ವಿದ್ಯುತ್‌ ನೀಡಲಾಗುವುದು ಎಂದು ಹೇಳಿದ್ದರೂ, ಅದು ಜಾರಿಗೆ ಬಾರದೆ ರೈತರು ತೊಂದರೆಗೆ ಒಳಗಾಗಿದ್ದರು. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕುಸುಮ್‌ ಹೆಸರಿನಲ್ಲಿ ರೈತರ ನೆರವಿಗೆ ಧಾವಿಸಿದೆ. ವಿದ್ಯುತ್‌ ಪೂರೈಕೆಗೆ ಕ್ರಮಸೌರ ಪಂಪ್‌ಗಳು ನೀರಾವರಿಗೆ ಹೆಚ್ಚು ಅನುಕೂಲಕರವಾದ ವಾತಾವರಣವನ್ನು ಸೃಷ್ಟಿಸಿಕೊಡುತ್ತವೆ.

 ರೈತರಿಗೆ ಹೆಚ್ಚು ಪರಿಣಾಮಕಾರಿ ಮತ್ತು ಪರಿಸರ ಸ್ನೇಹಿ ವಿಧಾನದ ನೀರಾವರಿಗೆ ಇವು ಸಹಾಯ ಮಾಡುತ್ತವೆ. ಸೌರಶಕ್ತಿ ಆಧಾರಿತ ಪಂಪ್‌ಗಳು ಪರಿಸರ ಸ್ನೇಹಿಯಾದ ಹಾಗೂ ಸುರಕ್ಷಿತವಾದ ಶಕ್ತಿಯನ್ನು ನೀಡುವ ಸಾಮರ್ಥ್ಯವನ್ನು ಹೊಂದಿವೆ. 

ಡೀಸೆಲ್ ಚಾಲಿತ ಪಂಪ್‌ಗಳಿಗೆ ಹೋಲಿಸಿದರೆ, ಹೆಚ್ಚಿನ ಶಕ್ತಿಯನ್ನು ಉತ್ಪಾದಿಸುವ ಇಂಧನ ವಿದ್ಯುತ್ ಗ್ರಿಡ್, ಈ ಸೌರಶಕ್ತಿ ಚಾಲಿತ ಪಂಪ್‌ಸೆಟ್‌ಗಳಲ್ಲಿ ಇರುತ್ತದೆ.ಕುಸುಮ್‌ ಎಂದರೇನು?ಭಾರತ ಸರ್ಕಾರದ ನವ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದಿಂದ, ಕುಸುಮ್‌ ಯೋಜನೆ ಜಾರಿ ಮಾಡಿದ್ದು, ಹಗಲಿನ ವೇಳೆಯಲ್ಲಿ ರೈತರ ಪಂಪ್‌ಸೆಟ್‌ಗಳಿಗೆ ಸೌರಶಕ್ತಿಯನ್ನು ಪೂರೈಸುವ ಉದ್ದೇಶವನ್ನು ಹೊಂದಲಾಗಿದೆ. ರೈತರಿಗೆ ಸರಿಯಾದ ಸಮಯಕ್ಕೆ ಗುಣಮಟ್ಟದ ವಿದ್ಯುತ್‌ ನೀಡಲಾಗುತ್ತದೆ.

 ಜೊತೆಗೆ ರಾಜ್ಯದಲ್ಲಿ ವಿದ್ಯುತ್‌ ಉಳಿತಾಯ ಮಾಡುವಲ್ಲೂ ಇದು ಪ್ರಧಾನ ಪಾತ್ರ ವಹಿಸುತ್ತದೆ. ರೈತರ ಪಂಪ್‌ಸೆಟ್‌ಗಳಿಗೆ ಸೌರಶಕ್ತಿ ದೊರೆಯುವುದರಿಂದ, ಇದಕ್ಕೆ ಪ್ರತ್ಯೇಕವಾದ ಸಾಮಾನ್ಯ ವಿದ್ಯುತ್‌ ಬೇಕಿರುವುದಿಲ್ಲ. ಇದರಿಂದ ವಿದ್ಯುತ್‌ ಕೊರತೆಯ ಸಮಸ್ಯೆ ಸುಲಭವಾಗಿ ನೀಗುತ್ತದೆ. ಚಿಕ್ಕಬಳ್ಳಾಪುರದಲ್ಲಿ ಯೋಜನೆಸಂಸದ ಡಾ.ಕೆ.ಸುಧಾಕರ್‌ ಅವರು ಕೇಂದ್ರ ಸರ್ಕಾರದ ಜೊತೆ ಮಾತುಕತೆ ನಡೆಸಿ ಹಾಗೂ ನಿರಂತರವಾಗಿ ಸಮನ್ವಯವನ್ನು ಸಾಧಿಸಿ ಈ ಯೋಜನೆಯ ಜಾರಿಗೆ ಶ್ರಮಿಸುತ್ತಿದ್ದಾರೆ. 

ಈ ಯೋಜನೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಒಟ್ಟು 24 ವಿದ್ಯುತ್‌ ಉಪಕೇಂದ್ರಗಳ ಬಳಿ, 174.20 ಮೆಗಾ ವ್ಯಾಟ್‌ ಸಾಮರ್ಥ್ಯದ ಸೌರ ಘಟಕಗಳನ್ನು ನಿರ್ಮಾಣ ಮಾಡಲು, ಒಟ್ಟು 871 ಎಕರೆ ಸರ್ಕಾರ ಜಾಗದ ಅಗತ್ಯವಿದೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ, 8 ಉಪ ವಿದ್ಯುತ್‌ ಕೇಂದ್ರಗಳ ಬಳಿ 47 ಮೆಗಾ ವ್ಯಾಟ್‌ ಸಾಮರ್ಥ್ಯದ ಸೌರ ಘಟಕಗಳನ್ನು ನಿರ್ಮಾಣ ಮಾಡಲು ಒಟ್ಟು 252 ಎಕರೆ, 35 ಗುಂಟೆ ಜಾಗವನ್ನು ಜಿಲ್ಲಾಡಳಿತದಿಂದ ಮಂಜೂರು ಮಾಡಲಾಗಿದೆ. ಈ ಯೋಜನೆಯ ಕಾಮಗಾರಿ ಈಗ ಪ್ರಗತಿಯಲ್ಲಿದೆ. ಕಾಮಗಾರಿ ಪೂರ್ಣಗೊಂಡ ನಂತರ ಚಿಕ್ಕಬಳ್ಳಾಪುರ ರೈತರ ಪಂಪ್‌ಸೆಟ್‌ಗಳಿಗೆ ಸೌರಶಕ್ತಿಯನ್ನು ಸರಬರಾಜು ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಸದೃಢ ಜೀವನ: ಕೆ ಪಿ ಚಂದ್ರಕಲಾ
7 ರಂದು ನಶಾ ಮುಕ್ತ ಭಾರತ ಜಾಗೃತಿ ಅಭಿಯಾನ ಸಹಕಾರಕ್ಕೆ ಡಾ.ಲೋಕೇಶ್ ಮನವಿ