ಕನ್ನಡಪ್ರಭ ವಾರ್ತೆ ಲೋಕಾಪುರ
ಸ್ತ್ರೀ ಕುಲಕ್ಕೆ ಮಾದರಿಯಾಗಿ ಸಮಾಜದ ಉದ್ಧಾರಕ್ಕಾಗಿ, ಭಕ್ತಿಯ ಸಾಕಾರಮೂರ್ತಿಯಾಗಿ ಮಲ್ಲಮ್ಮಳ ಜೀವನ ಎಂದಿಗೂ ಆದರ್ಶಪ್ರಾಯವಾಗಿದೆ ಎಂದು ಅನಗವಾಡಿ ಪೂರ್ಣಾನಂದ ಆಶ್ರಮದ ಮಾತ್ರೋಶ್ರೀ ಅನುಸುಯಾ ತಾಯಿ ಹೇಳಿದರು.ಸಮೀಪದ ವರ್ಚಗಲ್ ಗ್ರಾಮದ ಶ್ರದ್ಧಾನಂದ ಆಶ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರ, ಶ್ರೀ ಅನ್ನಪೂಣೇಶ್ವರಿ ವೀರಗಾಸೆ ಹಾಗೂ ಸಾಂಸ್ಕೃತಿಕ ಸಂಘ ಲೋಕಾಪುರ ಇವರ ಆಶ್ರಯದಲ್ಲಿ ಭಾನುವಾರ ಸುಗಮ ಸಂಗೀತ, ಪ್ರವಚನ ಹಾಗೂ ಹೇಮರಡ್ಡಿ ಮಲ್ಲಮ್ಮನ ಬೈಲಾಟ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಶಿವಶರಣೆ ಹೇಮರಡ್ಡಿ ಮಲ್ಲಮ್ಮನ ಧರ್ಮ ನಿಷ್ಠೆ, ಧಾರ್ಮಿಕ ಭಾವನೆ ಎಲ್ಲರೂ ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಚಿಕ್ಕ ಶೆಲ್ಲಿಕೇರಿ ಗ್ರಾಮದ ಅಡಿವೇಶ ಶಾಸ್ತ್ರಿಗಳು ಮಾತನಾಡಿ, ಶಿವಶರಣರ ಬೈಲಾಟ, ವಚನಗಳ ಸಾರವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ನಾವೆಲ್ಲ ಸಿದ್ಧರಾಗಬೇಕು. ಪತಿ ಭಕ್ತಿಗೆ ಹೇಮರಡ್ಡಿ ಮಲ್ಲಮ್ಮ ಉತ್ತಮ ಉದಾಹರಣೆಯಾಗಿದ್ದಾಳೆ. ಜೀವನದಲ್ಲಿ ಹಲವು ಕಷ್ಟ ನಷ್ಟ ಅನುಭವಿಸಿದ ಮಲ್ಲಮ್ಮ ಇಂದಿನ ಪೀಳಿಗೆಗೆ ಆದರ್ಶವಾಗಿದ್ದಾಳೆ ಎಂದು ಹೇಳಿದರು.ಕಮಕೇರಿ ಗ್ರಾಮದ ಪಾಂಡುರಂಗ ಬಡಿಗೇರ ಸುಗಮ ಸಂಗೀತ ಕಾರ್ಯಕ್ರಮ, ಚಿಕ್ಕಶೇಲ್ಲಿಕೇರಿ ಗ್ರಾಮದ ಶಿವಜ್ಞಾನ ಪ್ರಕಾಶ ಗುರುಕುಲದ ಅಡವೇಶ ಶಾಸ್ತ್ರಿಗಳಿಂದ ಪ್ರವಚನ ಹಾಗೂ ಕೀರ್ತನ, ಯಂಡಿಗೇರಿ ಗ್ರಾಮದ ಮಲ್ಲಿಕಾರ್ಜುನ ನಾಟ್ಯ ಸಂಘ ವತಿಯಿಂದ ಸಂಪೂರ್ಣ ಹೇಮರಡ್ಡಿ ಮಲ್ಲಮ್ಮ ಬೈಲಾಟ ಕಾರ್ಯಕ್ರಮ ಜರುಗಿದವು.
ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ಜ್ಞಾನೇಶ್ವರ ಮಠದ ಬ್ರಹ್ಮಾನಂದ ಶ್ರೀಗಳು, ಸಾನ್ನಿಧ್ಯ ವರ್ಚಗಲ್ ಗ್ರಾಮದ ಜಗದೀಶಾನಂದ ಸ್ವಾಮಿಗಳು, ಹಿರೇಮಠದ ಡಾ. ಚಂದ್ರಶೇಖರ ಸ್ವಾಮಿಗಳು, ಅಂತಾಪುರದ ದಯಾನಂದ ಸರಸ್ವತಿ ಸ್ವಾಮಿಗಳು, ಉದ್ಘಾಟಕರಾಗಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹೊಳಬಸಯ್ಯ ಸಂಬಾಳದ, ಹಿರಿಯ ಪಾರಿಜಾತ ಕಲಾವಿದ ಮಲ್ಲಿಕಾರ್ಜುನ ಕುಂದರಗಿ, ಬಸಲಿಂಗಪ್ಪ ಪಾನಶೆಟ್ಟಿ, ಅನ್ನಪೂಣೇಶ್ವರಿ ವೀರಗಾಸೆ ಹಾಗೂ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಮಲ್ಲಯ್ಯಾ ಸಂಬಾಳದ, ಎಂ.ಬಿ.ಮುದ್ನೂರ, ಪಾಂಡುರಂಗ ಬಡಿಗೇರ, ಛಾಯಪ್ಪಗೌಡ ಪಾಟೀಲ, ತಿಮ್ಮಣ್ಣ ತುಳಸಿಗೇರಿ, ನಿಂಗಪ್ಪ ಪೂಜಾರ, ಕಲಾವಿದೆ ಮಂಜುಳಾ ಸಂಬಾಳದ ಹಾಗೂ ವರ್ಚಗಲ್ ಗ್ರಾಮಸ್ಥರು ಇದ್ದರು.