ಮಡಿಕೇರಿ: ರಾಜ್ಯದಲ್ಲಿ ಮೇ 15ಕ್ಕೆ ಮುಖ್ಯಮಂತ್ರಿ ಬದಲಾಗುತ್ತಾರೆ, ಸಚಿವ ಸಂಪುಟ ಬದಲಾಗುತ್ತದೆ ಎಂದು ಚರ್ಚೆಯಾಗುತ್ತಿರುವ ಬಗ್ಗೆ ಪ್ರತಿಕ್ರಿಯಿಸದಂತೆ ಸೂಚನೆಯಿದೆ ಎಂದು ಶಾಸಕ ಎ.ಎಸ್. ಪೊನ್ನಣ್ಣ ಹೇಳಿದ್ದಾರೆ.ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಹೈಕಮಾಂಡ್, ಎಐಸಿಸಿ ಅಧ್ಯಕ್ಷರು ಸ್ಪಷ್ಟಪಡಿಸಿದ್ದಾರೆ. ಇದರ ಬಗ್ಗೆ ಯಾರೂ ಮಾತನಾಡಬಾರದು ಎಂದು ಸೂಚಿಸಿದ್ದಾರೆ.ಹೀಗಾಗಿ ಕಿರಿಯರೇ ಆಗಿರಲಿ, ಯಾರು ಎಷ್ಟು ದೊಡ್ಡವರೇ ಆಗಿರಲಿ. ಅದರ ಬಗ್ಗೆ ಮಾತನಾಡಬಾರದು ಎಂದರು.ಕಾಂಗ್ರೆಸ್ ಪಕ್ಷ ಇದ್ದರೆ ನಾವೆಲ್ಲರೂ ಇರುತ್ತೇವೆ. ಪಕ್ಷ ಅಧಿಕಾರ ಕೊಟ್ಟಿದೆ, ಪಕ್ಷ ಇದ್ದರೆ ನಮಗೆ ಅಧಿಕಾರ. ವೈಯಕ್ತಿಕ ಶಿಸ್ತಿಗಿಂತ ಸಂಸ್ಥೆಯ ಶಿಸ್ತೇ ಮುಖ್ಯ. ಹೀಗಾಗಿ ಎಲ್ಲರೂ ಪಕ್ಷದ ಶಿಸ್ತನ್ನು ಕಾಪಾಡಬೇಕು ಎಂದರು.ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷ ಆಗಿದೆ. ಇನ್ನುಳಿದ ಎರಡು ವರ್ಷದಲ್ಲಿ ನಮಗೂ ಅಧಿಕಾರ ಕೊಡಿ ಎನ್ನುವ ಕೂಗು ಇರುತ್ತದೆ. ಸಹಜವಾಗಿ ಎಲ್ಲರಿಗೂ ಮಂತ್ರಿಯಾಗಬೇಕು ಅಧಿಕಾರಕ್ಕೆ ಏರಬೇಕು ಎನ್ನುವುದು ಇರುತ್ತದೆ. ಶಾಸಕರಾಗಬೇಕು ಅದಾದ ಮೇಲೆ ಮಂತ್ರಿಯಾಗಬೇಕು ಎನ್ನುವುದು ಇದ್ದೇ ಇರುತ್ತದೆ. ಸಚಿವರಾದರೆ ಸಾಕಷ್ಟು ಕೆಲಸ ಮಾಡಬಹುದು ಎನ್ನುವ ಆಸೆ ಇರುತ್ತದೆ. ಹೀಗಾಗಿ ಸಚಿವ ಸಂಪುಟದಲ್ಲಿ ಸೇರಬೇಕೆಂಬ ಕೂಗು ಇರುತ್ತದೆ ಎಂದು ಹೇಳಿದರು.
ಚುನಾವಣೆಗೋಸ್ಕರ ಕೆಲವು ನಿರ್ಧಾರಗಳನ್ನು ಹಿಡಿದಿಡುವುದು. ಚುನಾವಣೆ ಮುಗಿಯುತ್ತಿದ್ದಂತೆ ಎಲ್ಲದರ ದರ ಹೆಚ್ಚಿಸುತ್ತಾರೆ ಅಂತ ಸಾಮಾನ್ಯ ಜನರು ಹೇಳಿದ್ದರು. ಇನ್ನೊಂದೆರಡು ದಿನಗಳಲ್ಲಿ ಜನರಿಗೆ ಅದು ಕೂಡ ಆಶ್ಚರ್ಯವಾಗುತ್ತದೆ. ಕೇಂದ್ರ ತೆಗೆದುಕೊಳ್ಳುತ್ತಿರುವ ನಿರ್ಧಾರಗಳು ದೇಶಕ್ಕೆ ಮಾರಕ. ಇದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ ಎಂದರು.
ಕಳೆದ ಕೆಲವು ತಿಂಗಳಿನಿಂದ ಎನ್ ಡಿ ಎ ಸರ್ಕಾರದ ನಡೆಯ ಬಗ್ಗೆ ಸಾಕಷ್ಟು ಟೀಕೆ, ಚರ್ಚೆಗಳು ನಡೆಯುತ್ತಿವೆ. ಯಾವುದೇ ಸರ್ಕಾರದಲ್ಲಿ ನಿರ್ಧಾರಗಳು ತಪ್ಪು ಸರಿಯಾಗಬಹುದು.ತಪ್ಪಾದಾಗ ಅದನ್ನು ತಿದ್ದಿಕೊಳ್ಳುವುದು ಆಗಬೇಕು. ಆದರೆ ಇವರು ತಪ್ಪುಗಳನ್ನು ಮುಚ್ಚಿ ಹಾಕಲು ಇನ್ನಷ್ಟು ತಪ್ಪುಗಳನ್ನು ಮಾಡುತ್ತಿದ್ದಾರೆ ಎಂದರು.