ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ಕೆಜಿಎಫ್ ಚಿನ್ನದ ಗಣಿ ಪ್ರದೇಶದಲ್ಲಿ ಕೆಜಿಎಫ್ ನಗರದ ಕಸವನ್ನು ಬಂಗಾರಪೇಟೆ ಸಮೀಪದ ದೊಡ್ಡವಲಗಮಾದಿ ಗ್ರಾಪಂ ವ್ಯಾಪ್ತಿಯಲ್ಲಿ ವಿಲೇವಾರಿ ಮಾಡಲು ಯತ್ನಿಸುತ್ತಿದ್ದು, ಯಾವುದೇ ಕಾರಣಕ್ಕೂ ಇದನ್ನು ಕಾರ್ಯಗತವಾಗಲು ಬಿಡುವುದಿಲ್ಲ ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.ದೊಡ್ಡವಲಗಮಾದಿ ಗ್ರಾಪಂ ಬಳಿ ಇರುವ ಗಣಿ ಪ್ರದೇಶದ ಸರ್ವೆ ನಂ೨ರಲ್ಲಿ ಕೆಜಿಎಫ್ ನಗರಸಭೆ ವ್ಯಾಪ್ತಿಯಲ್ಲಿ ಸಂಗ್ರಹವಾಗುವ ಕಸವನ್ನು ತಂದು ಇಲ್ಲಿ ವಿಲೇವಾರಿ ಮಾಡಲು ನಗರಸಭೆ ಮುಂದಾಗಿದೆ. ಈ ಹಿನ್ನೆಲೆ ಸ್ಥಳದಲ್ಲಿ ಕಸ ವಿಲೇವಾರಿ ಘಟಕವನ್ನು ಆರಂಭಿಸಲು ಪಾಯ ತೆಗೆಯಲಾಗಿದೆ.ಘಟಕಕ್ಕೆ ಗ್ರಾಮಸ್ಥರ ವಿರೋಧ
ಇದನ್ನು ಕಂಡ ದೊಡ್ಡವಲಗಮಾದಿ ಗ್ರಾಮದ ಗ್ರಾಮಸ್ಥರು, ಗ್ರಾಪಂ ಸದಸ್ಯರು ತೀವ್ರ ಆಕ್ಷೇಪವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಮಂಗಳವಾರ ಸ್ಥಳಕ್ಕೆ ಕೆಜಿಎಫ್ ನಗರಸಭೆ ಆಯುಕ್ತರು ಭೇಟಿ ನೀಡಿದಾಗ ಗ್ರಾಮಸ್ಥರು ತಮ್ಮ ವಿರೋಧ ವ್ಯಕ್ತಪಡಿಸಿದರು.ಕೆಜಿಎಫ್ ನಗರಸಭೆ ನಿಗದಿಪಡಿಸಿರುವ ಕಸ ವಿಲೇವಾರಿ ಘಟಕದಿಂದ ಕೇವಲ ೧೦೦ಮೀಟರ್ ದೂರದಲ್ಲೆ ಗ್ರಾಮಗಳಿವೆ, ಮತ್ತೊಂದು ಕಡೆ ಪೊಲೀಸ್ ಡಿಆರ್ ಕಚೇರಿಯಿದೆ, ಈಗ ಕೆಜಿಎಫ್ ನಗರಸಭೆ ನಿಗದಿಪಡಿಸಿರುವ ಕಸ ವಿಲೇವಾರಿ ಘಟಕ ಸ್ಥಳದಿಂದ ಕೇಲವೇ ಮೀಟರ್ ದೂರದ ಜಮೀನುಗಳಿವೆ. ಈಗ ಕೆಜಿಎಫ್ ನಗರಸಭೆ ಕಸವನ್ನು ಇಲ್ಲಿ ತಂದು ಎಸೆದರೆ ರೈತರು ಬೇಸಾಯ ಮಾಡಲು ಕಷ್ಟವಾಗುತ್ತದೆ, ದುರ್ನಾತ ಬೀರುತ್ತದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.ವಾನಹ ನಿಲುಗಡೆಗೆ ಶೆಡ್
ಇದಕ್ಕೆ ಉತ್ತರಿಸಿದ ಆಯುಕ್ತರು, ಇಲ್ಲಿ ಕಸವಿಲೇವಾರಿ ಘಟಕ ಆರಂಭಿಸುತ್ತಿಲ್ಲ ಬದಲಾಗಿ ನಗರಸಭೆಯಲ್ಲಿ ವಾಹನಗಳ ದಟ್ಟಣೆ ಹೆಚ್ಚಾಗಿದ್ದು ಅವುಗಳನ್ನು ಇಲ್ಲಿ ನಿಲುಗಡೆ ಮಾಡಲು ಶೆಡ್ ನಿರ್ಮಾಣ ಮಾಡಲಾಗುತ್ತಿದೆ ಎಂದು ಸ್ಪಷ್ಟನೆ ನೀಡಿದರು. ಆದರೂ ಇದಕ್ಕೆ ಒಪ್ಪದ ಗ್ರಾಮಸ್ಥರು ಲಿಖಿತವಾಗಿ ಮಾಹಿತಿ ನೀಡಿದರೆ ಮಾತ್ರ ಕಾಮಗಾರಿ ಮುಂದುವರೆಸಲು ಬಿಡುತ್ತೇವೆ, ಇಲ್ಲದಿದ್ದರೆ ಕಾಮಗಾರಿಗೆ ಬಿಡುವುದಿಲ್ಲ ಎಂದು ಗ್ರಾಮಸ್ಥರು ತಿಳಿಸಿದರು.ಈ ವೇಳೆ ಗ್ರಾಪಂ ಸದಸ್ಯರಾದ ಮುನಿರಾಜು, ರಾಮಕೃಷ್ಣಪ್ಪ, ಜೀವನರೆಡ್ಡಿ, ಸುಭ್ರಮಣಿ, ಮುಖಂಡರಾದ ನರೇಂದ್ರಬಾಬು, ಶಂಕರಪ್ಪ, ಅಮರೇಶ್, ನಾಗೇಶ್ ಇದ್ದರು.