‘ಪೇಜಾವರ ವಿಶ್ವೇಶತೀರ್ಥ ನಮನ-2023’, ಪ್ರಶಸ್ತಿ ಪ್ರದಾನ ಸಮಾರಂಭ

KannadaprabhaNewsNetwork | Published : Dec 30, 2023 1:15 AM

ಸಾರಾಂಶ

ಕಲ್ಕೂರ ಪ್ರತಿಷ್ಠಾನ ವತಿಯಿಂದ ಕದ್ರಿ ಕಂಬಳ ರಸ್ತೆ ಮಲ್ಲಿಕಾ ಬಡಾವಣೆಯ ಮಂಜು ಪ್ರಾಸಾದದಲ್ಲಿ ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಸಂಸ್ಮರಣಾರ್ಥ ಶುಕ್ರವಾರ ನಡೆದ ‘ಪೇಜಾವರ ವಿಶ್ವೇಶತೀರ್ಥ ನಮನ-2023’ರಲ್ಲಿ ವಿವಿಧ ಕ್ಷೇತ್ರದ ಸಾಧಕರಿಗೆ ‘ಪೇಜಾವರ ಶ್ರೀ ವಿಶ್ವೇಶತೀರ್ಥ ಜೀವಮಾನ ಸಾಧನಾ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ವಿಶ್ವೇಶತೀರ್ಥರ ಚಿತ್ರ ರಚನಾ ಸ್ಪರ್ಧೆ ಹಾಗೂ ಅವರ ಕುರಿತಾದ ಪ್ರಬಂಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಕನ್ನಡಪ್ರಭ ವಾರ್ತೆ ಮಂಗಳೂರು

ಹರಿಪಾದ ಸೇರಿದ ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಎಲ್ಲರನ್ನೂ ಮುನ್ನಡೆಸಿಕೊಂಡು ಸಮಾಜದಲ್ಲಿ ಸುಧಾರಣೆ, ಸಾಧನೆ ಮಾಡಿದ ಶ್ರೇಷ್ಠ ಯತಿಗಳು ಎಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.ಕಲ್ಕೂರ ಪ್ರತಿಷ್ಠಾನ ವತಿಯಿಂದ ನಗರದ ಕದ್ರಿ ಕಂಬಳ ರಸ್ತೆ ಮಲ್ಲಿಕಾ ಬಡಾವಣೆಯ ಮಂಜು ಪ್ರಾಸಾದದಲ್ಲಿ ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಸಂಸ್ಮರಣಾರ್ಥ ಶುಕ್ರವಾರ ನಡೆದ ‘ಪೇಜಾವರ ವಿಶ್ವೇಶತೀರ್ಥ ನಮನ-2023’ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಗುರುವಂದನಾ ಸಂಸ್ಮರಣೆ ಮಾಡಿದರು.

ಸಮಾಜದ ಸರ್ವರನ್ನೂ ಜೋಡಿಸಿಕೊಂಡು ಸಾಮಾಜಿಕ ಕಾರ್ಯಗಳನ್ನು ಪ್ರೀತಿಯಿಂದ ನಿರ್ವಹಿಸಿದ ವಿಶ್ವೇಶತೀರ್ಥ ಸ್ವಾಮೀಜಿ ಅವರು ತನ್ನ ಬಗೆಗಿನ ಹೊಗಳಿಕೆಯನ್ನು ಎಲ್ಲರಿಗೂ ಹಂಚಿದವರು. ಗುರುಗಳ ಗುಣಗಳನ್ನು ನೆನಪಿಸಿಕೊಳ್ಳುವುದು ಶ್ರೇಷ್ಠ ಕಾರ್ಯ. ಅವರ ಹೆಸರಿನಲ್ಲಿ ನಾವೂ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಳ್ಳೋಣ ಎಂದರು.

ಗುರುವಂದನಾ ಸಂಸ್ಮರಣೆ ಮಾಡಿದ ಚಿತ್ರಾಪುರ ಮಠದ ಶ್ರೀ ವಿದ್ಯೇಂದ್ರತೀರ್ಥ ಶ್ರೀಪಾದರು, ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರ ಜೀವನ ಸಮಾಜಕ್ಕೆ ಮಾತ್ರವಲ್ಲದೆ ಯತಿಗಳಿಗೂ ಮಾರ್ಗದರ್ಶಕವಾಗಿದೆ. ಅವರ ಜೀವನವೇ ನಮಗೆಲ್ಲರಿಗೂ ಪಾಠ. ಸಮಾಜಕ್ಕೆ ತಮ್ಮನ್ನು ತಾವು ಅರ್ಪಿಸಿಕೊಂಡಿದ್ದ ಅವರು ಜನಸೇವೆಯಲ್ಲಿ ಭಗವಂತನನ್ನು ಕಂಡವರು. ಸಮಾಜದ ಬಡವರ, ದುರ್ಬಲರ ಬಗ್ಗೆ ಅಪಾರ ಕಳಕಳಿ ಹೊಂದಿದ್ದರು ಎಂದರು.

ಗುರುವಂದನಾ ಸಂಸ್ಮರಣೆ ಮಾಡಿದ ಶೀರೂರು ಮಠದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು, ದೇವರನ್ನು ಗುರುಗಳು ತೋರಿಸುತ್ತಾರೆ. ಆದ್ದರಿಂದ ಗುರುಗಳ ಮೂಲಕ ಪರಮಾತ್ಮನನ್ನು ಆರಾಧನೆ ಮಾಡಬೇಕು. ಪೇಜಾವರ ಶ್ರೀ ವಿಶ್ವೇಶತೀರ್ಥರ ಅನುಗ್ರಹ ಎಲ್ಲರಿಗೂ ಲಭಿಸಲಿ ಎಂದರು.

ಮೇಯರ್‌ ಸುಧೀರ್‌ ಶೆಟ್ಟಿಕಣ್ಣೂರು ಕಾರ್ಯಕ್ರಮ ಉದ್ಘಾಟಿಸಿದರು. ಶಾಸಕ ವೇದವ್ಯಾಸ ಕಾಮತ್‌ ಅಧ್ಯಕ್ಷತೆ ವಹಿಸಿದ್ದರು. ಆಳ್ವಾಸ್‌ ವಿದ್ಯಾಸಂಸ್ಥೆಗಳ ಅಧ್ಯಕ್ಷ ಡಾ. ಎಂ.ಮೋಹನ ಆಳ್ವ ಪುಷ್ಪನಮನ ಸಲ್ಲಿಸಿದರು. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಡಾ. ಲಕ್ಷ್ಮೀಶ ತೋಳ್ಪಾಡಿ, ಶೀರೂರು ಮಠದ ದಿವಾನ ಎಂ.ಉದಯ ಕುಮಾರ್‌ ಸರಳತ್ತಾಯ, ಕಟೀಲು ಶ್ರೀಹರಿನಾರಾಯಣದಾಸ ಆಸ್ರಣ್ಣ ಸಂಸ್ಮರಣಾ ನುಡಿನಮನ ಸಲ್ಲಿಸಿದರು.

ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್‌.ಪ್ರದೀಪ ಕುಮಾರ ಕಲ್ಕೂರ ಸ್ವಾಗತಿಸಿದರು. ವಿವಿಧ ಕ್ಷೇತ್ರದ ಸಾಧಕರಿಗೆ ‘ಪೇಜಾವರ ಶ್ರೀ ವಿಶ್ವೇಶತೀರ್ಥ ಜೀವಮಾನ ಸಾಧನಾ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ವಿಶ್ವೇಶತೀರ್ಥರ ಚಿತ್ರ ರಚನಾ ಸ್ಪರ್ಧೆ ಹಾಗೂ ಅವರ ಕುರಿತಾದ ಪ್ರಬಂಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಈ ಸಂದರ್ಭ ಕೃಷ್ಣ ಗೀತ ಗಾಯನ ಕಾರ್ಯಕ್ರಮ ನಡೆಯಿತು.

Share this article