ಜೂನ್‌ನಲ್ಲಿ ಪ್ರಧಾನಿ ಮೋದಿಯಿಂದ ಮೆಗಾ ಡೇರಿ ಉದ್ಘಾಟನೆ

KannadaprabhaNewsNetwork |  
Published : May 13, 2026, 12:45 AM IST
12ಎಚ್ಎಸ್ಎನ್15 :  | Kannada Prabha

ಸಾರಾಂಶ

900 ಕೋಟಿ ವೆಚ್ಚದ ಬಹು ದೊಡ್ಡ ಯೋಜನೆ. ಇಡೀ ದೇಶದಲ್ಲೇ ಮಾದರಿಯಾಗುವ ಡೇರಿಯಾಗಿ ಇದನ್ನು ರೂಪಿಸಲಾಗುತ್ತಿದೆ. ರಾಜ್ಯ ಸರ್ಕಾರದಿಂದ ಯಾವುದೇ ಆರ್ಥಿಕ ನೆರವು ಬಂದಿಲ್ಲ. ಹಿಂದೆ ನೀಡಿದ್ದ ಹಣವನ್ನೂ ವಾಪಸ್ ಪಾವತಿಸಲಾಗಿದೆ. ಈ ಸಂಸ್ಥೆಗೂ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ. ಕೇಂದ್ರ ಸರ್ಕಾರ ಮಾತ್ರ ಸುಮಾರು ೨೮೦ ಕೋಟಿ ನೆರವು ನೀಡಿದೆ ಎಂದು ಸ್ಪಷ್ಟಪಡಿಸಿದರು. ಹಾಸನ ಜಿಲ್ಲೆ ಹಾಲು ಉತ್ಪಾದನೆಯಲ್ಲಿ ರಾಜ್ಯದಲ್ಲೇ ಪ್ರಮುಖ ಸ್ಥಾನದಲ್ಲಿದ್ದು, ಜಿಲ್ಲೆಯಿಂದಲೇ ಪ್ರತಿದಿನ ಸುಮಾರು ೧೧ ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದೆ ಎಂದು ದೇವೇಗೌಡರು ಹೇಳಿದರು.

ಕನ್ನಡಪ್ರಭ ವಾರ್ತೆ ಹಾಸನ

ಜಿಲ್ಲೆಯ ಹೊಳೆನರಸೀಪುರ ರಸ್ತೆಯ ಕೈಗಾರಿಕಾ ಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ ಅತ್ಯಾಧುನಿಕ ಮೆಗಾ ಡೇರಿ ಘಟಕ ಜೂನ್ ತಿಂಗಳಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆಗೊಳ್ಳುವ ಸಾಧ್ಯತೆ ಇದೆ ಎಂದು ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ತಿಳಿಸಿದರು

ನಗರದ ಹೊರ ವಲಯದ ಕೈಗಾರಿಕಾ ಪ್ರದೇಶದಲ್ಲಿರುವ ಮೆಗಾ ಡೇರಿ ಕಾಮಗಾರಿಯನ್ನು ಮಂಗಳವಾರ ಪರಿಶೀಲಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇದು 900 ಕೋಟಿ ವೆಚ್ಚದ ಬಹು ದೊಡ್ಡ ಯೋಜನೆ. ಇಡೀ ದೇಶದಲ್ಲೇ ಮಾದರಿಯಾಗುವ ಡೇರಿಯಾಗಿ ಇದನ್ನು ರೂಪಿಸಲಾಗುತ್ತಿದೆ. ರಾಜ್ಯ ಸರ್ಕಾರದಿಂದ ಯಾವುದೇ ಆರ್ಥಿಕ ನೆರವು ಬಂದಿಲ್ಲ. ಹಿಂದೆ ನೀಡಿದ್ದ ಹಣವನ್ನೂ ವಾಪಸ್ ಪಾವತಿಸಲಾಗಿದೆ. ಈ ಸಂಸ್ಥೆಗೂ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ. ಕೇಂದ್ರ ಸರ್ಕಾರ ಮಾತ್ರ ಸುಮಾರು ೨೮೦ ಕೋಟಿ ನೆರವು ನೀಡಿದೆ ಎಂದು ಸ್ಪಷ್ಟಪಡಿಸಿದರು.

ಹೊಸ ದಾರಿ ತೋರಿಸುವ ಯೋಜನೆ:

ಹಾಸನ ಜಿಲ್ಲೆ ಹಾಲು ಉತ್ಪಾದನೆಯಲ್ಲಿ ರಾಜ್ಯದಲ್ಲೇ ಪ್ರಮುಖ ಸ್ಥಾನದಲ್ಲಿದ್ದು, ಜಿಲ್ಲೆಯಿಂದಲೇ ಪ್ರತಿದಿನ ಸುಮಾರು ೧೧ ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದೆ ಎಂದು ದೇವೇಗೌಡರು ಹೇಳಿದರು. ಕೊಡಗು ಜಿಲ್ಲೆಯಿಂದ ೩೦ ರಿಂದ ೪೦ ಸಾವಿರ ಲೀಟರ್ ಹಾಗೂ ಚಿಕ್ಕಮಗಳೂರಿನಿಂದ ಒಂದು ಲಕ್ಷಕ್ಕೂ ಅಧಿಕ ಲೀಟರ್ ಹಾಲು ಪ್ರತಿದಿನ ಬರುತ್ತಿದೆ ಎಂದು ಮಾಹಿತಿ ನೀಡಿದರು. ಇದು ಕೇವಲ ಡೈರಿ ಯೋಜನೆ ಮಾತ್ರವಲ್ಲ, ರೈತರ ಆರ್ಥಿಕ ಶಕ್ತಿಯನ್ನು ಹೆಚ್ಚಿಸುವ ಮಹತ್ವದ ಕೇಂದ್ರವಾಗಲಿದೆ. ಲಕ್ಷಾಂತರ ಹಾಲು

+ಉತ್ಪಾದಕರ ಬದುಕಿಗೆ ಹೊಸ ದಾರಿ ತೋರಿಸುವ ಯೋಜನೆ ಇದು ಎಂದರು.ಇದು ರೇವಣ್ಣ ಕನಸಿನ ಯೋಜನೆ: ಈ ಯೋಜನೆಯ ಹಿಂದೆ ಶಾಸಕ ಎಚ್‌ ಡಿ ರೇವಣ್ಣ ಅವರ ದೂರದೃಷ್ಟಿ ಮತ್ತು ಶ್ರಮವಿದೆ ಎಂದು ದೇವೇಗೌಡರು ಹೇಳಿದರು. ಕೆಲಸ ಮಾಡಬೇಕು ಅನ್ನೋದೇ ರೇವಣ್ಣ ಅವರ ಸ್ವಭಾವ. ಕರ್ನಾಟಕದಲ್ಲಿ ಹಾಲು ಒಕ್ಕೂಟದ ಬೆಳವಣಿಗೆಯಲ್ಲೂ ಅವರ ಕೊಡುಗೆ ಇದೆ. ಈ ಮೆಗಾ ಡೇರಿ ಅವರ ಮನಸ್ಸಿನ ಕಲ್ಪನೆ. ಇದರಲ್ಲಿ ಯಾವುದೇ ರಾಜಕೀಯ ಇಲ್ಲ. ಯಾರದ್ದೂ ಹಂಗಿಲ್ಲ. ರೇವಣ್ಣ ಮತ್ತು ಈ ಸಂಸ್ಥೆಯ ಶ್ರಮದಿಂದ ಈ ಮಟ್ಟಕ್ಕೆ ಬಂದಿದೆ ಎಂದು ಹೇಳಿದರು. ಪ್ರಧಾನಿ ಮೋದಿ ಅವರನ್ನು ಆಹ್ವಾನಿಸುತ್ತೇನೆ:ಪ್ರಧಾನಿ ಮೋದಿ ಅವರು ಈ ಯೋಜನೆಯನ್ನು ಉದ್ಘಾಟಿಸಬೇಕು ಎಂಬುದು ತಮ್ಮ ಆಸೆ ಎಂದು ಹೇಳಿದ ದೇವೇಗೌಡರು, “ಆದಿಚುಂಚನಗಿರಿ ಕಾರ್ಯಕ್ರಮದ ದಿನವೇ ಉದ್ಘಾಟನೆ ಆಗಬೇಕಿತ್ತು. ಆದರೆ ಕೆಲವು ಕಾಮಗಾರಿಗಳು ಬಾಕಿ ಉಳಿದಿದ್ದರಿಂದ ಸಾಧ್ಯವಾಗಲಿಲ್ಲ. ಜೂನ್ ವೇಳೆಗೆ ಎಲ್ಲಾ ಕಾಮಗಾರಿ ಪೂರ್ಣಗೊಂಡರೆ ಮೋದಿಯವರನ್ನೇ ಕರೆತರುತ್ತೇನೆ” ಎಂದರು. ಮೇ ೧೮ರಂದು ನನಗೆ ೯೩ ವರ್ಷ ಪೂರ್ಣಗೊಳ್ಳುತ್ತದೆ. ಮೇ ೨೬ರಂದು ನಡೆಯುವ ಕಾರ್ಯಕ್ರಮದಲ್ಲಿ ಮೋದಿಯವರನ್ನು ಭೇಟಿ ಮಾಡಿ ಈ ಬಗ್ಗೆ ಮಾತುಕತೆ ನಡೆಸುತ್ತೇನೆ. ಕೇಂದ್ರ ಕೃಷಿ ಸಚಿವರು ಮೋದಿಯವರ ಕುರಿತು ಒಂದು ಪುಸ್ತಕ ಬರೆದಿದ್ದಾರೆ. ಆ ಪುಸ್ತಕವನ್ನು ದೇವೇಗೌಡರೇ ಬಿಡುಗಡೆ ಮಾಡಬೇಕು ಎಂದು ಮೋದಿಯವರು ಹೇಳಿರುವುದು ಸಂತೋಷದ ವಿಷಯ. ಮೆಗಾ ಡೇರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಕೂಡ ಭಾಗವಹಿಸಲಿದ್ದಾರೆ. “ಹಾಲು ಹಾಕುವ ಸುಮಾರು ಎರಡು ಲಕ್ಷ ಜನರನ್ನು ಕಾರ್ಯಕ್ರಮದಲ್ಲಿ ಸೇರಿಸುವ ಉದ್ದೇಶವಿದೆ” ಎಂದರು.ಅಧಿಕಾರಿಗಳಿಗೆ ಖಡಕ್ ಸೂಚನೆಕಾಮಗಾರಿ ಪರಿಶೀಲನೆ ವೇಳೆ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ ದೇವೇಗೌಡರು, ಒಂದು ಸುಂದರ ಹುಡುಗಿಗೆ ಮೂಗು ನತ್ತು ಇಲ್ಲದಿದ್ದರೆ ಆಕೆ ಸಂಪೂರ್ಣ ಸುಂದರ ಕಾಣುವುದಿಲ್ಲ. ಅದೇ ರೀತಿ ಈ ಡೇರಿಯಲ್ಲೂ ಯಾವುದೇ ಕೆಲಸ ಬಾಕಿ ಉಳಿಯಬಾರದು ಎಂದು ಎಚ್ಚರಿಸಿದರು. ಮಕ್ಕಳಿಗಾಗಿ ಚಿನ್ನಾರಿ ರೈಲು, ಬೋಟಿಂಗ್ ಸೇರಿದಂತೆ ಎಲ್ಲ ಸೌಲಭ್ಯಗಳ ಕಾಮಗಾರಿ ಸಂಪೂರ್ಣ ಮುಗಿಯಬೇಕು. “ಮೋದಿಯವರು ಬಂದ ಮೇಲೆ ಮಾಡ್ತೇವೆ ಎಂದು ಹೇಳಬೇಡಿ. ಎಲ್ಲಾ ಸಿದ್ಧವಾದಾಗ ಮಾತ್ರ ಪ್ರಧಾನಿಯನ್ನು ಕರೆತರುತ್ತೇನೆ” ಎಂದು ಅಧಿಕಾರಿಗಳಿಗೆ ಸೂಚಿಸಿದರು. ಗ್ರಾಮೀಣ ಭಾಗದಲ್ಲಿ ಶಿಕ್ಷಣ ಕ್ರಾಂತಿಈ ವೇಳೆ ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿಯ ಬಗ್ಗೆಯೂ ದೇವೇಗೌಡರು ಮಾತನಾಡಿದರು. ಗ್ರಾಮೀಣ ಪ್ರದೇಶದಲ್ಲಿ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಶಿಕ್ಷಣ ಸಂಸ್ಥೆಗಳು ಬೆಳೆದಿರುವುದು ಅಪರೂಪ ಎಂದ ಅವರು, ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಸಾವಿರಾರು ವಿದ್ಯಾರ್ಥಿಗಳು ಇಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ ಎಂದು ಹೇಳಿದರು. ಪಾಲಿಟೆಕ್ನಿಕ್‌ನಲ್ಲಿ ೯೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಓದುತ್ತಿದ್ದು, ಹೊಸ ಹಾಸ್ಟೆಲ್ ನಿರ್ಮಾಣ ಅಂತಿಮ ಹಂತದಲ್ಲಿದೆ. ವಿದ್ಯಾರ್ಥಿಗಳಿಗೆ ವಸತಿ, ಊಟ, ಕುಡಿಯುವ ನೀರು ಸೇರಿದಂತೆ ಎಲ್ಲ ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದು ಹೇಳಿದರು. ವಿದ್ಯಾರ್ಥಿನಿಯರ ಸುರಕ್ಷತೆಗೆ ವಿಶೇಷ ಒತ್ತು ನೀಡಲಾಗಿದ್ದು, “ಒಂದು ಸಣ್ಣ ಘಟನೆಗೂ ಅವಕಾಶ ಕೊಡದಂತೆ ಪ್ರಾಂಶುಪಾಲರು ಮತ್ತು ಉಪನ್ಯಾಸಕರು ಮಕ್ಕಳನ್ನು ತಮ್ಮ ಮಕ್ಕಳಂತೆ ನೋಡಿಕೊಳ್ಳುತ್ತಿದ್ದಾರೆ. ಅಲ್ಲಿ ಪೊಲೀಸ್ ವ್ಯವಸ್ಥೆ ಕೂಡ ಇಲ್ಲದಿದ್ದರೂ ಶಿಸ್ತು ಕಾಪಾಡಲಾಗಿದೆ. ಶೇ.೧೦೦ ಫಲಿತಾಂಶ ಬರುತ್ತಿರುವುದು ಸಂಸ್ಥೆಯ ಗುಣಮಟ್ಟಕ್ಕೆ ಸಾಕ್ಷಿ” ಎಂದು ಶ್ಲಾಘಿಸಿದರು.ಈ ವೇಳೆ ಮಾಜಿ ಸಚಿವ ಎಚ್.ಡಿ. ರೇವಣ್ಣ, ಶಾಸಕ ಎಚ್.ಪಿ. ಸ್ವರೂಪ್ ಹಾಗೂ ಡೇರಿ ವ್ಯವಸ್ಥಾಪಕರು ಸೇರಿದಂತೆ ಇತರರು ಇದ್ದರು.

============

ಬಾಕ್ಸ್‌ 1 :: ಬಡಕುಟುಂಬಗಳಿಗೆ ೨೦ ಸಾವಿರ ಹಸು ನೀಡುವ ಯೋಜನೆ ಮೆಗಾ ಡೇರಿ ಉದ್ಘಾಟನಾ ಕಾರ್ಯಕ್ರಮದ ಸಂದರ್ಭದಲ್ಲಿ ಸುಮಾರು ೨೦ ಸಾವಿರ ಹಸುಗಳನ್ನು ಬಡ ಕುಟುಂಬಗಳಿಗೆ ವಿತರಿಸುವ ಮಹತ್ವಾಕಾಂಕ್ಷಿ ಯೋಜನೆಯೂ ರೂಪಿಸಲಾಗಿದೆ ಎಂದು ದೇವೇಗೌಡರು ತಿಳಿಸಿದರು. ಇದರಿಂದ ಗ್ರಾಮೀಣ ಕುಟುಂಬಗಳ ಆರ್ಥಿಕ ಸ್ಥಿತಿ ಮತ್ತಷ್ಟು ಬಲ ಸಿಗಲಿದೆ ಎಂದು ಅಭಿಪ್ರಾಯಪಟ್ಟರು.ಬಾಕ್ಸ್‌2: ಜರ್ಮನಿಯ ತಾಂತ್ರಿಕ ಸಹಕಾರ: ಡೇರಿಯಲ್ಲಿ ಜರ್ಮನಿಯ ತಾಂತ್ರಿಕ ಸಹಕಾರದೊಂದಿಗೆ ಅತ್ಯಾಧುನಿಕ ಯಂತ್ರೋಪಕರಣಗಳನ್ನು ಅಳವಡಿಸಲಾಗುತ್ತಿದೆ. ಹಾಲು ಸಂಗ್ರಹ, ಸಂಸ್ಕರಣೆ, ಪ್ಯಾಕಿಂಗ್ ಸೇರಿದಂತೆ ಎಲ್ಲ ವ್ಯವಸ್ಥೆಗಳನ್ನೂ ಆಧುನಿಕ ರೀತಿಯಲ್ಲಿ ರೂಪಿಸಲಾಗುತ್ತಿದೆ. ೬೦ ಲಕ್ಷ ಲೀಟರ್‌ ಸಾಮರ್ಥ್ಯದ ಈ ಘಟಕ ದೇಶದ ಅತಿದೊಡ್ಡ ಹಾಲು ಸಂಗ್ರಹ ಮತ್ತು ಸಂಸ್ಕರಣಾ ಘಟಕಗಳಲ್ಲಿ ಒಂದಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮುಂದುವರೆದ ಚಿರತೆ ಉಪಟಳ: ಗ್ರಾಮಸ್ಥರಲ್ಲಿ ಮನೆಮಾಡಿದ ಆತಂಕ
ಸರ್ಕಾರಿ ಕಚರಿಗಳಲ್ಲಿ ಕಡತಗಳ ಪರಿಶೀಲನೆ, ಸಮಗ್ರ ತನಿಖೆ ನಡೆಯಲಿ: ಕಿರಂಗೂರು ಪಾಪು