ಜಾಗೃತಿ ಕಾರ್ಯಕ್ರಮ । ಆಲಯಗಳಲ್ಲಿ ವಸ್ತ್ರ ಸಂಹಿತೆ ಜಾರಿಗೊಳಿಸಲು ದೇವಸ್ಥಾನ ವಿಶ್ವಸ್ಥರ ನಿರ್ಧಾರಕನ್ನಡಪ್ರಭ ವಾರ್ತೆ ಹಾಸನ
ಸನಾತನ ಧರ್ಮದಲ್ಲಿ ದೇವಸ್ಥಾನಗಳು ಅತ್ಯಂತ ಪವಿತ್ರ ಸ್ಥಳಗಳು. ದೇವಸ್ಥಾನಗಳು ಎಂದರೆ ದೇವರ ಅಸ್ತಿತ್ವ ಮತ್ತು ಚೈತನ್ಯ ಇರುವ ಕ್ಷೇತ್ರವಾಗಿದೆ. ದೇವಸ್ಥಾನಗಳಿಂದಲೇ ಹಿಂದೂ ಧರ್ಮದ ಸಂಸ್ಕೃತಿಯು ಉಳಿದುಕೊಂಡಿದೆ ಎಂದು ಕರ್ನಾಟಕ ದೇವಸ್ಥಾನ ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ಚಂದ್ರ ಮೊಗವೀರ ಹೇಳಿದರು.ಶ್ರೀ ಸಪ್ತಪಧಿ ಸೌಧಾಮಿನಿ ಸಭಾಂಗಣದಲ್ಲಿ ಮಂಗಳವಾರ ಕರ್ನಾಟಕ ದೇವಸ್ಥಾನ ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘ ಮತ್ತು ಹಿಂದೂ ಜನಜಾಗೃತಿ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೇವಸ್ಥಾನವನ್ನು ಆದರ್ಶ ರೀತಿಯಲ್ಲಿ ಹೇಗೆ ನಡೆಸಬೇಕು. ನಮ್ಮ ದೇವಸ್ಥಾನವನ್ನು ಯಾವ ರೀತಿ ಧಾರ್ಮಿಕ ಕೇಂದ್ರ ಬಿಂದುವಾಗಿ ಮಾಡಬೇಕು. ದೇವಸ್ಥಾನದಲ್ಲಿ ಸಾತ್ವಿಕ ಉಡುಪು ಧರಿಸುವುದರಿಂದ ಯಾವ ರೀತಿ ದೇವರ ಚೈತನ್ಯ ಪಡೆಯಬಹುದು ಎಂದು ವಸ್ತ್ರ ಸಂಹಿತೆ ಬಗ್ಗೆ ತಿಳಿಸಿದರು.ಮಹಾಸಂಘದ ಮೋಹನ್ ಗೌಡ ಮಾತನಾಡಿ, ಕರ್ನಾಟಕದಲ್ಲಿ 34,000 ದೇವಸ್ಥಾನಗಳನ್ನು ಸರ್ಕಾರ ನಿಯಂತ್ರಣ ಮಾಡುತ್ತಿದೆ. ಇದರಲ್ಲಿ ಹೆಚ್ಚಿನ ದೇವಸ್ಥಾನಗಳು ಅವ್ಯವಹಾರದ ಆಗರವಾಗಿವೆ. ಈ ದೇವಸ್ಥಾನಗಳನ್ನು ಸರ್ಕಾರದ ಮುಷ್ಟಿಯಿಂದ ಹೊರ ತರಲು ಎಲ್ಲರೂ ಒಟ್ಟಾಗಿ ಹೋರಾಟ ಮಾಡಬೇಕಿದೆ. ಕರ್ನಾಟಕ ದೇವಸ್ಥಾನ ಮಹಾಸಂಘವು ಈ ಕಾರ್ಯಕ್ಕೆ ಮುಂದಾಗಿದೆ ಎಂದು ಹೇಳಿದರು.
ಹಾಸನ ಶಂಕರಮಠದ ಧರ್ಮದರ್ಶಿ ಎಂ.ಎಸ್.ಶ್ರೀಕಂಠಯ್ಯ ಮಾತನಾಡಿ, ದೇವಸ್ಥಾನದ ಗರ್ಭಗುಡಿಯ ರಕ್ಷಣೆ, ಸುತ್ತಮುತ್ತಲಿನ ಪರಿಸರದ ರಕ್ಷಣೆ ಹಾಗೂ ದೇವಸ್ಥಾನದ ಜಮೀನಿನ ರಕ್ಷಣೆಯನ್ನು ಕೇವಲ ಸ್ಥಳೀಯ ಸಂಘಟನೆಯಿಂದ ಮಾತ್ರ ರಕ್ಷಣೆ ಮಾಡಲು ಸಾಧ್ಯವಿದೆ. ಹಾಗಾಗಿ ನಾವೆಲ್ಲರೂ ಈ ಕಾರ್ಯದಲ್ಲಿ ಕೈಜೋಡಿಸಿ ಸಂಘಟಿತರಾಗೋಣ. ನಮ್ಮಲ್ಲಿ ಇರುವ ಭಿನ್ನಾಭಿಪ್ರಾಯವನ್ನು ಮರೆತು ಎಲ್ಲರೂ ಕೈಜೋಡಿಸಿ ಸಂಘಟಿತರಾಗಿ. ಸರ್ಕಾರಕ್ಕೆ ಒತ್ತಡ ಹೇರಿದರೆ ನಮ್ಮ ದೇವಸ್ಥಾನಗಳನ್ನು ಸರ್ಕಾರೀಕರಣದಿಂದ ರಕ್ಷಣೆ ಮಾಡಿಕೊಳ್ಳಬಹುದು ಎಂದರು.ಈ ಕಾರ್ಯಕ್ರಮವನ್ನು ಶಂಕರ ಮಠದ ಧರ್ಮದರ್ಶಿಗಳಾದ ಎಂ. ಎಸ್ ಶ್ರೀಕಂಠಯ್ಯ, ಹೊಳೆ ಮಲ್ಲೇಶ್ವರ ದೇವಸ್ಥಾನದ ಕಾರ್ಯದರ್ಶಿಗಳಾದ ಮಂಜುನಾಥ್, ಉತ್ತರಮುಖಿ ಉತ್ತಿಷ್ಟ ಗಣಪತಿ ದೇವಸ್ಥಾನದ ಅಧ್ಯಕ್ಷ ರಾಘವೇಂದ್ರ ಹಾಗೂ ಕರ್ನಾಟಕ ದೇವಸ್ಥಾನ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ಸಂಯೋಜಕರಾದ ಮೋಹನ್ ಗೌಡ ದೀಪ ಬೆಳಗಿ ಉದ್ಘಾಟನೆ ಮಾಡಿದರು.
ಹೊಳೆ ಮಲ್ಲೇಶ್ವರ ದೇಸ್ಥಾನದ ಕಾರ್ಯದರ್ಶಿ ಮಂಜುನಾಥ್ ಮಾತನಾಡಿ, ಉತ್ತಮ ನಿರ್ವಹಣೆಯ ಮುಖಾಂತರ ಹಿಂದೂ ಸಂಘಟನೆಯನ್ನು ಹೇಗೆ ಬಲಪಡಿಸಬಹುದು. ದೇವರ ಪೂಜೆ ಮತ್ತು ವಿಧಿಗಳನ್ನು ಮಾಡುವುದರ ಬಗ್ಗೆ ವಿವರವಾಗಿ ನಾವು ತಿಳಿದು ಬರುವ ಭಕ್ತಾದಿಗಳಿಗೆ ತಿಳಿಸಿ ಅವರಲ್ಲಿ ಭಕ್ತಿ ವೃದ್ಧಿ ಮಾಡುವುದು, ಅವರನ್ನು ಸಂಘಟಿತರಾಗಿಸುವುದು ನಮ್ಮೆಲ್ಲರ ಅರ್ಚಕರ ಕರ್ತವ್ಯವಾಗಿದೆ ಎಂದರು.ದೇವಾಲಯವನ್ನು ಶುಚಿಯಾಗಿ ಇಟ್ಟುಕೊಳ್ಳುವುದರಿಂದ ದೇವರ ಮೂರ್ತಿಯಿಂದ ಪ್ರಸರಣವಾಗುವ ಚೈತನ್ಯ ಶಕ್ತಿಯಿಂದ ಋಣಾತ್ಮಕ ಶಕ್ತಿ ಗಳಿಂದ ರಕ್ಷಣೆ ಪಡೆಯಬಹುದು ಅರ್ಚಕರ ಪೂಜೆ ಮಾಡುವಾಗ ಏಕಾಗ್ರತೆಯಿಂದ ಸ್ಥಿರವಾದ ಮನಸ್ಸಿನಿಂದ ಸ್ಪಷ್ಟ ಶ್ಲೋಕ ಉಚ್ಚಾರಣೆಯಿಂದ ವಿಧಿವತ್ತಾಗಿ ಪೂಜೆ ಮಾಡಬೇಕು ಎಂದು ಡಾ. ಪಾಂಡುರಂಗ ಹೇಳಿದರು.ಹಾಸನದಲ್ಲಿ ಧಾರ್ಮಿಕ ಕಾರ್ಯಕ್ರಮವನ್ನು (ಎಡದಿಂದ) ಶ್ರೀ ಶಂಕರ ಮಠದ ಧರ್ಮದರ್ಶಿ ಎಂ.ಎಸ್. ಶ್ರೀಕಂಠಯ್ಯ ಉದ್ಘಾಟಿಸಿದರು. ಹೊಳೆಮಲ್ಲೇಶ್ವರ ದೇವಸ್ಥಾನದ ಕಾರ್ಯದರ್ಶಿ ಮಂಜುನಾಥ್, ಇತರರು ಇದ್ದರು.