ಕನ್ನಡಪ್ರಭ ವಾರ್ತೆ ಬೇಲೂರು
ಪೌರಾಣಿಕ ನಾಟಕಗಳಿಂದ ನಮ್ಮ ಗ್ರಾಮೀಣ ಸೊಗಡಿನ ಸಂಸ್ಕೃತಿ ಸಂಸ್ಕಾರಗಳು ಇಂದಿಗೂ ಜೀವಂತವಾಗಿರಿಸಿವೆ ಎಂದು ತಹಸೀಲ್ದಾರ್ ಎಂ ಮಮತಾ ಹೇಳಿದರು.ಶ್ರೀ ಚನ್ನಕೇಶವ ಕೃಪಾ ಪೋಷಿತ ನಾಟಕ ಮಂಡಳಿ ವತಿಯಿಂದ ೧೮ನೇ ವರ್ಷದ ಸಂಭ್ರಮದ ಅಂಗವಾಗಿ ಕುರುಕ್ಷೇತ್ರ ಧರ್ಮರಾಯ ಸ್ಥಾಪನೆ ನಾಟಕವನ್ನು ಶ್ರೀ ಚನ್ನಕೇಶವ ದೇವಾಲಯ ಮುಂಭಾಗದಲ್ಲಿ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಸಂಸ್ಕೃತಿ ಇನ್ನು ಜೀವಂತವಾಗಿದೆ ಎಂದರೆ ಅದು ಪೌರಾಣಿಕ ನಾಟಕಗಳಿಂದ ಮಾತ್ರ. ಆಧುನಿಕ ಯುಗದಲ್ಲಿ ಯುವ ಜನಾಂಗ ಮೊಬೈಲ್ ಟಿವಿ, ಸಿನಿಮಾಗಳಿಗೆ ಮಾರುಹೋಗಿ ರಂಗಭೂಮಿಯ ಅವನತಿಗೆ ಸಾಗುತ್ತಿದೆ ಎಂದಾಗ ಸುಮಾರು ೧೮ ವರ್ಷಗಳಿಂದ ಪೌರಾಣಿಕ ನಾಟಕಗಳಿಗೆ ಜೀವತುಂಬಿ ಇಂದಿಗೂ ಸಹ ಸಾವಿರಾರು ಕಲಾರಸಿಕರನ್ನು ಒಂದೆಡೆ ಕಲೆಹಾಕುವುದು ಸಾಧನೆಯಾಗಿದೆ. ರಂಗಭೂಮಿಯಲ್ಲಿ ನಿಜವಾದ ಕಲಾವಂತಿಕೆ ಇದೆ ಕಲಾವಿದರಿಗೆ ಉತ್ತೇಜನ ನೀಡುವುದು ನಮ್ಮೆಲ್ಲರ ಕರ್ತವ್ಯ. ಈ ಪೌರಾಣಿಕ ಕಲೆಯನ್ನು ಪ್ರತಿಯೊಬ್ಬರು ಉಳಿಸಿ ಬೆಳಸಬೇಕು ಎಂದರು.
ಪುರಸಭೆ ಅಧ್ಯಕ್ಷ ಎ ಆರ್ ಅಶೋಕ್ ಮಾತನಾಡಿ, ಪೌರಾಣಿಕ ನಾಟಕಗಳ ಕಾಲ ಮುಗಿಯಿತು ಎನ್ನುವ ಹಂತದಲ್ಲಿ ಅದನ್ನು ಇನ್ನು ಉಳಿಸಿ ಬೆಳೆಸುತ್ತಿರುವ ನಮ್ಮ ರಂಗಕಲಾವಿದರಿಗೆ ನಾವೆಲ್ಲರೂ ಕೃತಜ್ಞತೆ ಸಲ್ಲಿಸಬೇಕು. ಆಧುನಿಕ ರಂಗಭೂಮಿಗೆ ಪ್ರೇಕ್ಷಕರ ಕೊರತೆ ಇಲ್ಲ. ಪೌರಾಣಿಕ ರಂಗಭೂಮಿ ಎಂಬುವುದು ಮುಂದಿನ ಪರಂಪರೆಗೆ ಅಚ್ಚಳಿಯದೆ ಉಳಿಯುವ ಕ್ಷೇತ್ರವಾಗಿದೆ ಎಂದರು.ಕಸಾಪ ಮಾಜಿ ಗೌರವ ಅಧ್ಯಕ್ಷ ರವಿನಾಕಲಗೂಡು ಮಾತನಾಡಿ, ಈ ಪೌರಾಣಿಕ ಕಲೆ ಇನ್ನೂ ಜೀವಂತವಾಗಿದೆ ಎಂದರೆ ಅದು ಇಲ್ಲಿರುವ ಪ್ರೇಕ್ಷಕರನ್ನು ನೋಡಿದರೆ ತಿಳಿಯುತ್ತದೆ. ರಂಗಭೂಮಿ ನಟನೆ ಅಷ್ಟು ಸುಲಭವಾಗಿ ಯಾರಿಗೂ ದಕ್ಕುವುದಿಲ್ಲ. ಆ ಕಲೆ ಯಾರಲ್ಲಿ ಜೀವಂತವಾಗಿರುತ್ತದೊ ಅವರಿಗೆ ಮಾತ್ರ ಸರಸ್ವತಿ ಒಲಿಯುತ್ತಾಳೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡ ಗ್ರಾನೈಟ್ ರಾಜಶೇಖರ್, ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ, ಸಮಾಜ ಸೇವಕ ಬಿ ಎಂ ಸಂತೋಷ್ ಕಾರ್ಯಕ್ರಮದಲ್ಲಿ ಶುಭನುಡಿದರು.ಈ ಸಮಯದಲ್ಲಿ ಜಿಪಂ ಮಾಜಿ ಅಧ್ಯಕ್ಷೆ ಹೇಮಾವತಿ ಮಂಜುನಾಥ್, ಬಿಇಒ ರಾಜೇಗೌಡ,ರಂಗ ಕಲಾವಿದ ಹಾಗೂ ಅಯ್ಯಪ್ಪ ಸ್ವಾಮಿ ಗುರುಸ್ವಾಮಿ ದೇವರಾಜ್ ಇವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಕಸಾಪ ಅಧ್ಯಕ್ಷ ಮಾನ ಮಂಜೇಗೌಡ, ಕಾರ್ಯದರ್ಶಿ ಬಿಬಿ ಶಿವರಾಜ್, ಸತೀಶ್, ಸಿಪಿಐ ರೇವಣ್ಣ, ಯಮಸಂಧಿ ಪಾಪಣ್ಣ, ಮೋಹನ್, ಸಿದ್ದೇಗೌಡ, ಇತರರು ಹಾಜರಿದ್ದರು.