ಕನ್ನಡಪ್ರಭ ವಾರ್ತೆ ದಾವಣಗೆರೆ
ದುರ್ಗಾಂಬಿಕ ಜಾತ್ರೆಗೆ ಜಿಲ್ಲೆಯ ವಿವಿಧ ಗ್ರಾಮಗಳಿಂದ ಹಾಗೂ ನೆರೆಯ ಜಿಲ್ಲೆಗಳಿಂದ ಬರುವ ನೆಂಟರು, ಸಂಬಂಧಿಕರು ಒಂದು ವಾರದವರೆಗೆ ನಡೆವ ಜಾತ್ರೆಯಲ್ಲಿ ಸಂಭ್ರಮದಿಂದ ಪಾಲ್ಗೊಳ್ಳುವ ಸಂದರ್ಭದಲ್ಲಿ ಸಿರಿಧಾನ್ಯ ಹಬ್ಬ ಕಾರ್ಯಕ್ರಮ ಆಯೋಜಿಸಿರುವುದು ಮಕ್ಕಳು ಹಾಗೂ ನಾಗರಿಕರಿಗೆ ಹಿತವಾದ ಅನುಭವದೊಂದಿಗೆ ಪೌಷ್ಟಿಕ ಆಹಾರದ ಸಂದೇಶ ನೀಡುವ ವಿವಿಧ ಸಿರಿಧಾನ್ಯಗಳಾದ ಬರಗು, ನವಣೆ, ಕೊರಲೆ, ಹಾರಕ, ಸಾಮೆ, ಊದಲು, ಜೋಳ, ರಾಗಿ ಬೆಳೆಗಳನ್ನು ಬಳಸಿ ನಗರ ಶಕ್ತಿ ದೇವತೆಯ ಸುಂದರ ಮೂರ್ತಿಯ ರಂಗೋಲಿ ಜನಾಕರ್ಷಣೆ ಗಳಿಸಿದೆ.
ರಂಗೋಲಿಯಲ್ಲಿ ಬಳಸಿದ ಸಿರಿಧಾನ್ಯಗಳಲ್ಲಿ ಅಧಿಕ ನಾರಿನ ಅಂಶ ಇರುವುದರಿಂದ ಇವುಗಳನ್ನು ನಿಯಮಿತವಾಗಿ ಆಹಾರ ಪದ್ಧತಿಯಲ್ಲಿ ಬಳಸುವುದರಿಂದ ಆರೋಗ್ಯ ವೃದ್ಧಿಯಾಗುವುದಲ್ಲದೇ, ಮಧುಮೇಹ/ಸಕ್ಕರೆ ಕಾಯಿಲೆ ನಿಯಂತ್ರಿಸಲು ಸಾಧ್ಯವಾಗುತ್ತವೆ. ಸಿರಿಧಾನ್ಯಗಳಲ್ಲಿ ಖನಿಜಾಂಶಗಳು, ಐರನ್ ಹೇರಳವಾಗಿರುವುದರಿಂದ, ಮಕ್ಕಳಲ್ಲಿ ಮಹಿಳೆಯರಲ್ಲಿ ಮೂಳೆಗಳ ಸಾಂದ್ರತೆ ಹೆಚ್ಚಿಸಲು ಸಾಧ್ಯವಾಗುತ್ತದೆ ಎಂಬ ಆರೋಗ್ಯದ ಸಂದೇಶವನ್ನು ರಂಗೋಲಿ ಮೂಲಕ ಸಾರಲಾಗಿದೆ.ಈಗಾಗಲೇ ಕೃಷಿ ಇಲಾಖೆಯಿಂದ ಸಿರಿಧಾನ್ಯಗಳನ್ನು ಬೆಳೆಯಲು ವ್ಯಾಪಕ ಪ್ರಚಾರದಿಂದಾಗಿ ವಿರಳವಾಗಿದ್ದ ಸಿರಿಧಾನ್ಯಗಳು ಇಂದು ಸುಲಭವಾಗಿ ಮತ್ತು ಹೇರಳವಾಗಿ ಜನಸಾಮಾನ್ಯರಿಗೆ ಮಾರುಕಟ್ಟೆಯಲ್ಲಿ ಎಲ್ಲಾ ಅಂಗಡಿಗಳಲ್ಲಿ ಸಂಸ್ಕರಿಸಿದ ಸಿರಿಧಾನ್ಯಗಳು ಕೈಗೆಟುಕುವ ಬೆಲೆಯಲ್ಲಿ ಸಿಗುವಂತಾಗಿವೆ. ಕೃಷಿ ಇಲಾಖೆಯ ವಿವಿಧ ಯೋಜನೆಗಳಿಂದ ನೀಡಲಾದ ಸಂಸ್ಕರಣಾ ಘಟಕಗಳ ಮೂಲಕ ಸಿರಿಧಾನ್ಯಗಳನ್ನು ಬಳಸಿ ತಯಾರಿಸಿದ ಚಿಕ್ಕಿ, ಚಕ್ಕುಲಿ, ನಿಪ್ಪಟ್ಟು, ದೋಸೆ, ಉಪ್ಪಿಟ್ಟು, ಇಡ್ಲಿ ಹಾಗೂ ಮುಂತಾದ ವಿವಿಧ ಖಾಧ್ಯಗಳನ್ನು ಜನರು ಬಳಸುತ್ತಿದ್ದು, ಆರೋಗ್ಯದಲ್ಲಿ ಸುಧಾರಣೆ ಕಂಡುಕೊಳ್ಳುತ್ತಿದ್ದಾರೆ.
ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರ ಸ್ವಾಮಿ, ಜಿಪಂ ಸಿಇಒ ಗಿತ್ತೆ ಮಾಧವ ವಿಠಲ ರಾವ್, ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಶಾಮನೂರು ಬಸವರಾಜಪ್ಪ, ತೋಟಗಾರಿಕೆ ಜಂಟಿ ನಿರ್ದೇಶಕ ರಾಘವೇಂದ್ರ ಪ್ರಸಾದ್ ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಹಾಜರಿದ್ದರು.