ಕನ್ನಡಪ್ರಭ ವಾರ್ತೆ ಹಳೇಬೀಡು
ಮಹಿಳೆಯರು ಇತ್ತೀಚಿನ ದಿನಗಳಲ್ಲಿ ಬಹುತೇಕ ಎಲ್ಲಾ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ಮಾಡುತ್ತಾ ಬಂದಿದ್ದಾರೆ. ದೇಶದ ಸಮಗ್ರ ಅಭಿವೃದ್ಧಿ ಮಹಿಳಾ ಸಬಲೀಕರಣದಿಂದ ಸಾಧ್ಯವೆಂದು ಪುಷ್ಪಗಿರಿ ಮಹಾಸಂಸ್ಥಾನದ ಶ್ರೀ ಸೋಮಶೇಖರ ಶಿವಾಚಾರ್ಯ ಸ್ವಾಮಿಗಳು ತಿಳಿಸಿದರು.ಹಳೇಬೀಡು ಸಮೀಪದಲ್ಲಿರುವ ಪುಷ್ಪಗಿರಿ ಕ್ಷೇತ್ರದಲ್ಲಿ ಪುಷ್ಪಗಿರಿ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಮಹಿಳಾ ಸ್ವಸಹಾಯ ಸಂಘದ ಪದಾಧಿಕಾರಿಗಳಿಗೆ ಹಮ್ಮಿಕೊಂಡ ೫ನೇ ಕಾರ್ಯಾಗಾರ ಸಮಾರಂಭದ ಉದ್ಘಾಟನೆ ನಡೆಸಿ ಮಾತನಾಡಿದ ಅವರು, ಪುಷ್ಪಗಿರಿ ಕ್ಷೇತ್ರ ಎಲ್ಲಾ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಾ ಬಂದಿದೆ. ಮಹಿಳಾ ಸಬಲೀಕರಣಕ್ಕೆ ಮುನ್ನುಡಿ ಬರೆಯಬೇಕು ಎಂಬ ಹಿನ್ನೆಲೆಯಲ್ಲಿ ೨೦೨೦ರಲ್ಲಿ ಪುಷ್ಪಗಿರಿ ಗ್ರಾಮೀಣಾಭಿವೃದ್ಧಿ ಸಂಸ್ಥೆ ಆರಂಭಿಸಿದ್ದು, ಇಂದು ರಾಜ್ಯ ನಾನಾ ಜಿಲ್ಲೆಯಲ್ಲಿ ಸಾವಿರಾರು ಮಹಿಳಾ ಸ್ವಸಹಾಯ ಸಂಘ ಸ್ಥಾಪಿಸಿ, ಸಂಘದ ಸದಸ್ಯರಿಗೆ ಕೌಶಲ್ಯಾಭಿವೃದ್ಧಿ ಮತ್ತು ಸ್ವ ಉದ್ಯೋಗ ಪರಿಕಲ್ಪನೆಯಲ್ಲಿ ಕಾರ್ಯಕ್ರಮಗಳನ್ನು ರಾಜ್ಯದ ನಾನಾ ಕಡೆ ನಡೆಸುತ್ತಾ ಬಂದಿದೆ. ಕರ್ನಾಟಕ ಮಠ ಪರಂಪರೆಯಲ್ಲಿ ಪುಷ್ಪಗಿರಿ ಮಹಿಳಾ ಸಂಘದ ಬಲವರ್ಧನೆ ಬಗ್ಗೆ ಜನ ಮೆಚ್ಚುಗೆ ಪಡೆದಿದೆ ನಮಗೂ ಕೂಡ ಖುಷಿ ತಂದಿದೆ. ಅದರೂ ಮಹಿಳಾ ಸಂಘದ ಸದಸ್ಯರು ಕೇವಲ ಹಣಕಾಸು ವಹಿವಾಟು ಹೊರತುಪಡಿಸಿ ಅವರಿಗೆ ಕೌಟುಂಬಿಕ ಬದುಕಿನಲ್ಲಿ ಸುಗಮವಾಗಿ ನಡೆಸಲು ಮತ್ತು ಸಮಾಜದ ವಿವಿಧಸ್ತರದಲ್ಲಿ ಸಾಧನೆಗೆ ಮುಂದಾಗಬೇಕಿದೆ ಎಂಬ ನಿಟ್ಟಿನಲ್ಲಿ ಇಂತಹ ಕಾರ್ಯಾಗಾರ ನಡೆಸಲಾಗುತ್ತದೆ. ಇಂದಿನ ಕಾರ್ಯಾಗಾರದಲ್ಲಿ ವಿಶೇಷ ಉಪನ್ಯಾಸ, ಯೋಗ, ಇನ್ನಿತರ ಚಟುವಟಿಕೆಗಳನ್ನು ನಡೆಸುವ ಜೊತೆಗೆ ನಾಯಕತ್ವ ರೂಪಿಸಲು ಇಂತಹ ಕಾರ್ಯಕ್ರಮ ಪೂರಕವಾಗಲಿದೆ ಎಂದರು. ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ರಘುನಾಥ್ ಮಾತನಾಡಿ, ಪುಷ್ಪಗಿರಿ ಕ್ಷೇತ್ರ ಪ್ರಸ್ತುತ ದಿನದಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆಯಲು ಪುಷ್ಪಗಿರಿ ಜಗದ್ಗುರುಗಳ ಅವಿರತ ಶ್ರಮ ನಿಜಕ್ಕೂ ಅಗಮ್ಯ, ಚಿಕ್ಕ ವಯಸ್ಸಿನಲ್ಲೇ ಮಠದ ಜವಾಬ್ದಾರಿ ಹೊತ್ತ ಶ್ರೀ, ಟೀಕೆ ಟಿಪ್ಪಣಿಗಳಿಗೆ ಬೆನ್ನು ಮಾಡದೆ ಕ್ಷೇತ್ರದ ಸಮಗ್ರ ಅಭಿವೃದ್ಧಿ ಮುನ್ನುಡಿ ಬರೆದಿದ್ದಾರೆ. ಇತ್ತೀಚಿಗೆ ಆರೋಗ್ಯ ಕ್ಷೇತ್ರಕ್ಕೂ ಪಾದಾರ್ಪಣೆ ಮಾಡಿದ ಜಗದ್ಗುರುಗಳ ಶ್ರಮ ಅಧಿಕವಾಗಿದೆ. ಪುಷ್ಪಗಿರಿ ಜಗದ್ಗುರುಗಳು ಈ ಹಿಂದೆ ತಾಲೂಕಿನ ಬಯಲುಸೀಮೆಗೆ ನೀರಾವರಿಗೆ ನಡೆಸಿದ ಹೋರಾಟದ ಫಲದಿಂದಲೇ ಇಂದು ರಣಘಟ್ಟ ಯೋಜನೆ ಕಾಮಗಾರಿ ಪ್ರಗತಿಯಲ್ಲಿದೆ. ಅಲ್ಲದೆ ಪರಿಸರದ ಉಳಿವಿಗೆ ಕೂಡ ಸೇವೆ ನೀಡಿದ್ದಾರೆ. ಮುಂದಿನ ದಿನದಂದು ಪುಷ್ಪಗಿರಿ ಮಹಿಳಾ ಸ್ವಸಹಾಯ ಸಂಘ ಇಡೀ ರಾಜ್ಯಾದ್ಯಂತ ಖ್ಯಾತಿ ಪಡೆದು ಮಹಿಳೆಯರು ಸದ್ಬಳಕೆ ಪಡೆಯಲಿ ಎಂದು ಹೇಳಿದರು. ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸಹ ಕಾರ್ಯದರ್ಶಿ ಡಾ. ಎಂ.ಸಿ.ಕುಮಾರ್ ಮಾತನಾಡುತ್ತ, ಮನುಷನಿಗೆ ಯಾವುದೇ ಗುರಿಯನ್ನು ಸಾಧನೆ ಮಾಡಬೇಕಾದರೆ ಗುರುಗಳ ಸಹಾಯ ಅತಿ ಮುಖ್ಯ(ಗುರಿ ಹಿಂದೆ ಗುರು ಇರುತ್ತಾರೆ) ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಪೂಜ್ಯ ಗೋಕಾಕ್ ಪಾಲ್ಸ್ ಮಹಾಲಿಂಗೇಶ್ವರ ಮಠದ ಡಾ.ಶ್ರೀ ರವಿಶಂಕರ್ ಶಿವಾಚಾರ್ಯ ಮಹಾಸ್ವಾಮಿಗಳು, ಸಮಾಜದ ಮುಖಂಡರಾದ ರಾಜಣ್ಣ, ಗುರುವಣ್ಣ, ರಾಜಣ್ಣ, ಮಲ್ಲೇಶಣ್ಣ, ಹುಲಿಕೆರೆ ಮೋಹನ್, ಕುಮಾರ್, ಯೋಗೀಶ್, ಪುಷ್ಪಗಿರಿ ಕಲಾತಂಡದ ಚಂದನ್ ಕುಮಾರ್, ಪುಷ್ಪಗಿರಿ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ನಾಗಯ್ಯ, ಹಾಸನ ಜಿಲ್ಲಾ ಯೋಜನಾಧಿಕಾರಿ ವಿನುತ ಧನಂಜಯ ಇನ್ನೂ ಮುಂತಾದವರು ಹಾಜರಿದ್ದರು. ಸಮಾರಂಭದ ನಿರೂಪಣೆಯನ್ನು ಬೇಲೂರು ತಾಲೂಕು ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಹೆಬ್ಬಾಳು ಹಾಲಪ್ಪ ನಡೆಸಿಕೊಟ್ಟರು.