ದೇಶದ ಅಭಿವೃದ್ಧಿ ಶಿಕ್ಷಣದಿಂದ ಮಾತ್ರ ಸಾಧ್ಯ

KannadaprabhaNewsNetwork | Published : Jun 28, 2025 12:18 AM

ಸಮಾಜದಲ್ಲಿ ಪ್ರತಿಯೊಬ್ಬರೂ ಅನಕ್ಷರತೆಯ ಕತ್ತಲಿಂದ ಹೊರಬಂದು ವಿದ್ಯಾವಂತರಾದರೆ ಮಾತ್ರವೇ ದೇಶ ಅಭಿವೃದ್ದಿ ಸಾಧ್ಯ. ಶಿಕ್ಷಣ ಒಂದು ರಾಷ್ಟ್ರದ ಶ್ರೀಮಂತಿಕೆ, ಅಭಿವೃದ್ಧಿಗೆ ಮೆಟ್ಟಿಲು ಇದ್ದಂತೆ. ಪ್ರಾಥಮಿಕ ಶಾಲಾ ಶಿಕ್ಷಕರಾಗಿ ನಿವೃತ್ತರಾದ ಸ.ರಘುನಾಥ ಅವರು ಮೊರಸುನಾಡು ಕನ್ನಡದ ನಿಘಂಟನ್ನು ರಚನೆ ಮಾಡಿದ್ದು ದೊಡ್ಡ ಕಾರ್ಯ

ಕನ್ನಡಪ್ರಭ ವಾರ್ತೆ ಕೋಲಾರಸ್ವಾತಂತ್ರೋತ್ತರದಲ್ಲಿ ಎಲ್ಲ ಸಮುದಾಯಗಳಿಗೂ ವಿದ್ಯಾಭ್ಯಾಸವು ವಿಸ್ತರಣೆಯಾಗಿ ಜನ ಮುಂದೆ ಬಂದಿದ್ದರಿಂದ ದೇಶವು ಮುಂದುವರಿಯಲು ಕಾರಣವಾಗಿದೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜ್ ಅಭಿಪ್ರಾಯಪಟ್ಟರು.

ತಾಲೂಕಿನ ಮಂಗಸಂದ್ರದ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರದಲ್ಲಿ ಹಮ್ಮಿಕೊಂಡಿದ ಪ್ರಸಾರಾಂಗದ ಉದ್ಘಾಟನೆ ಹಾಗೂ ಸ.ರಘುನಾಥ್ ಅವರ ‘ಮೊರಸುನಾಡು’ ಕನ್ನಡ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು.ದೇಶದ ಅಭಿವೃದ್ಧಿಗೆ ಶಿಕ್ಷಣ ಅಗತ್ಯ

ಸಮಾಜದಲ್ಲಿ ಪ್ರತಿಯೊಬ್ಬರೂ ಅನಕ್ಷರತೆಯ ಕತ್ತಲಿಂದ ಹೊರಬಂದು ವಿದ್ಯಾವಂತರಾದರೆ ಮಾತ್ರವೇ ದೇಶ ಅಭಿವೃದ್ದಿ ಸಾಧ್ಯ. ಶಿಕ್ಷಣ ಒಂದು ರಾಷ್ಟ್ರದ ಶ್ರೀಮಂತಿಕೆ, ಅಭಿವೃದ್ಧಿಗೆ ಮೆಟ್ಟಿಲು ಇದ್ದಂತೆ. ಪ್ರಾಥಮಿಕ ಶಾಲಾ ಶಿಕ್ಷಕರಾಗಿ ನಿವೃತ್ತರಾದ ಸ.ರಘುನಾಥ ಅವರು ಮೊರಸುನಾಡು ಕನ್ನಡದ ನಿಘಂಟನ್ನು ರಚನೆ ಮಾಡಿದ್ದು ದೊಡ್ಡ ಕೆಲಸವಾಗಿದೆ, ಈ ಮೂಲಕ ಬದುಕು ದಾಖಲೆಗೊಂಡಂತಾಗಿದೆ ಎಂದು ಹೇಳಿದರು.

ಮೊರಸುನಾಡು ಕನ್ನಡ ಪುಸ್ತಕ ಕುರಿತು ಮಾತನಾಡಿದ ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ.ಕೆ.ವೈ.ನಾರಾಯಣಸ್ವಾಮಿ ವಿಶ್ವವಿದ್ಯಾಲಯಗಳು ಕಲಿಕೆಯ ಬಗ್ಗೆ ಮರು ಯೋಚಿಸಬೇಕಾದ ಕಾಲ ಬಂದಿದೆ. ವಿಶ್ವವಿದ್ಯಾಲಯಗಳು ನರಿ ಬುದ್ಧಿಯ ಜನರನ್ನು ತಯಾರಿಸುವ ಕಾರ್ಖಾನೆಗಳಾಗುತ್ತಿವೆ. ಜಾತಿಗಳನ್ನು ಗಟ್ಟಿಗೊಳಿಸುವ ಸ್ಥಾನಗಳಾಗುತ್ತಿವೆ ಎಂದು ವಿಷಾದಿಸಿದರು.

ನಿಘಂಟಿನ ಆಡಿಯೋ ಮಾಡಲಿ

ಈ ನಿಘಂಟಿನಲ್ಲಿ ಕೋಲಾರ ಭಾಗವು ಮರೆತಿರುವ ಕನ್ನಡದ ಪದಗಳಿವೆ. ಬೆಂಗಳೂರು ಉತ್ತರ ವಿಶ್ವವಿದ್ಯಾಲಯವು ಮೊರಸುನಾಡು ಕನ್ನಡದ ಕೋಶ ಸ್ಥಾಪಿಸಬೇಕು. ಇದನ್ನು ಆಡಿಯೋ ನಿಘಂಟು ಮಾಡಬೇಕು ಹಾಗೂ ಮೊರಸು ನಾಡು ಕನ್ನಡ ನಿಘಂಟಿಗೆ ಪದಗಳನ್ನು ಸೇರಿಸುವ ಕೆಲಸ ನಿರಂತರವಾಗಿ ಸಾಗಬೇಕು ಎಂದು ಆಗ್ರಹಿಸಿದರು.

ಒಂದು ಭಾಷೆಯನ್ನು ಕಳೆದುಕೊಂಡರೆ ಒಂದು ಸಂಸ್ಕೃತಿಯನ್ನು ಕಳೆದುಕೊಳ್ಳುತ್ತೇವೆ. ಅಂತಸ್ಥವಾದ ಸಾಂಸ್ಕೃತಿಕ ಚರಿತ್ರೆಗಳು ಪದಗಳಲ್ಲಿ ಅವಿತಿರುತ್ತವೆ. ಅಂತಹ ಎಷ್ಟೋ ಪದಗಳನ್ನು ಸ.ರಘುನಾಥರು ಈ ನಿಘಂಟಿನಲ್ಲಿ ದಾಖಲಿಸುವ ಮೂಲಕ ಈ ಭಾಗದ ಸಾಂಸ್ಕೃತಿಕ ಚಿತ್ರಣ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಎಂದರು.ವಿವಿಗೆ ಪ್ರಸಾರಾಂಗ ಅಗತ್ಯ

ಪ್ರಾಸ್ತವಿಕವಾಗಿ ಮಾತನಾಡಿದ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ನಿರಂಜನ ವಾನಳ್ಳಿ, ವಿಶ್ವವಿದ್ಯಾಲಯವೊಂದಕ್ಕೆ ಪ್ರಸಾರಾಂಗವಿರುವುದು ಅಗತ್ಯ. ಬೆಂಗಳೂರು ಉತ್ತರ ವಿಶ್ವವಿದ್ಯಾಲಯವು ಇಂದು ಪ್ರಸಾರಾಂಗವನ್ನು ಸ್ಥಾಪಿಸುತ್ತಿಲ್ಲ, ಈ ಭಾಗದ ಬದುಕಿನ ಚಿತ್ರಣವನ್ನು ಪ್ರತಿನಿಧಿಸುವ ನಿಘಂಟನ್ನು ಹೊರತರುವ ಮೂಲಕ ಒಂದು ವಿಶ್ವವಿದ್ಯಾಲಯದ ಸಾರ್ಥಕ ಕೆಲಸ ಮಾಡಿದ ಸಮಾಧಾನವಿದೆ ಎಂದರು.ಲೇಖಕ ಸ.ರಘುನಾಥ, ಕುಲಸಚಿವರು ಶ್ರೀ.ಸಿ.ಎನ್.ಶ್ರೀಧರ್ ಹಾಗೂ ಸ್ನಾತಕೋತ್ತರ ಕೇಂದ್ರದ ನಿರ್ದೇಶಕಿ ಪ್ರೊ.ಡಿ.ಕುಮುದಾ ಈ ಕಾರ್ಯಕ್ರಮದಲ್ಲಿ ಹಾಜರಿದ್ದರು.