ಇಡೀ ಜಗತ್ತಿಗೆ ಸಂಸತ್ತಿನ ಪರಿಕಲ್ಪನೆ ಕೊಟ್ಟವರು ಮಹಾನ್ ಮಾನವತಾವಾದಿ ವಿಶ್ವಗುರು ಬಸವಣ್ಣನವರು ಎಂದು ವೀರಶೈವ ಲಿಂಗಾಯತ ಸಮಾಜದ ವಡಗೇರಾ ತಾಲೂಕಾಧ್ಯಕ್ಷ ಬಸವರಾಜ ಸೊನ್ನದ ಹೇಳಿದರು.
ಜಿಲ್ಲೆಯ ವಡಗೇರಾ ಪಟ್ಟಣದಲ್ಲಿ ವೀರಶೈವ ಲಿಂಗಾಯತ ಸಮಾಜದ ವತಿಯಿಂದ ಹಮ್ಮಿಕೊಂಡಿದ್ದ ಬಸವೇಶ್ವರ ಜಯಂತಿ ಹಾಗೂ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಶಿವಶರಣೆ ಹೇಮರೆಡ್ಡಿ ಮಲ್ಲಮ್ಮಳು ಮಹಿಳೆಯರಿಗೆ ಮಾದರಿ. ಅವರ ಆದರ್ಶಗಳನ್ನು ಪ್ರತಿಯೊಬ್ಬ ಮಹಿಳೆ ಅಳಡಿಸಿಕೊಳ್ಳಬೇಕೆಂದು ತಿಳಿಸಿದರು. ಹಿರಿಯ ಮುಖಂಡ ಸಿದ್ದಣ್ಣಗೌಡ ಕಾಡಂನೊರ ಮಾತನಾಡಿ, ವಿಶ್ವಗುರು ಬಸವಣ್ಣನವರು ಮತ್ತು ಶಿವಶರಣೆ ಹೇಮರೆಡ್ಡಿ ಮಲ್ಲಮ್ಮನವರ ತತ್ವಾದರ್ಶಗಳು ಸರ್ವಕಾಲಿಕ ಶ್ರೇಷ್ಠ. ಸಮಾಜ ಸುಧಾರಣೆಯಲ್ಲಿ ಶರಣರ ಪಾತ್ರ ಬಹುದೊಡ್ಡದಾಗಿತ್ತು. ತಮ್ಮ ವಚನ ಕೀರ್ತನೆಗಳ ಮೂಲಕ ಸಮಾಜದಲ್ಲಿನ ಅಂಕು-ಡೊಂಕುಗಳನ್ನು ತಿದ್ದಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಸಂತ, ಶರಣರ ತತ್ವಾದರ್ಶಗಳನ್ನು ಪ್ರತಿಯೊಬ್ಬರು ಪಾಲಿಸಬೇಕು ಎಂದು ಹೇಳಿದರು.
ಬಸವಣ್ಣ ಹಾಗೂ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮನವರ ಭಾವಚಿತ್ರವನ್ನು ಪಟ್ಟಣದ ಅಗಸಿಯಿಂದ ಬಸವೇಶ್ವರ ವೃತ್ತದ ಮೂಲಕ ಮಲ್ಲಯ್ಯನ ಗುಡಿಯವರೆಗೆ ಮೆರವಣಿಗೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಶರಣಯ್ಯ ಸ್ವಾಮಿ ಸ್ಥಾವರಮಠ, ಮಲ್ಲಣ್ಣಗೌಡ ಕೋನಹಳ್ಳಿ, ಶಿವರಾಜ ಸಾಹುಕಾರ, ಹಣಮಂತರಾಯ ಜಡಿ, ಡಾ. ವಿರಪ್ಪಯ್ಯಸ್ವಾಮಿ, ಬಾಷುಮಿಯಾ ನಾಯ್ಕೋಡಿ, ಸೂಗರೆಡ್ಡಿ ಗೌಡ ಪೊಲೀಸ್ ಪಾಟೀಲ್, ಡಾ. ಜಗದೀಶ್ ಹಿರೇಮಠ, ಸಂಗುಗೌಡ ಮಾಲಿ ಪಾಟೀಲ್, ದೇವೇಂದ್ರಪ್ಪ ಕಡೇಚೂರ, ಅಶೋಕ್ ಮುಸ್ತಾಜೀರ, ಮಲ್ಲಣ್ಣ ಇಟಗಿ, ಬಸವರಾಜಪ್ಪ ಟಿ. ವಡಗೇರಾ, ವಿಶ್ವನಾಥ್ ರೆಡ್ಡಿ ಬಸರೆಡ್ಡಿ, ಶರಣು ಇಟಗಿ, ರಾಜಪ್ಪ ಸಾಹುಕಾರ ಸುಂಕೇಸರಾಳ, ಯಂಕಪ್ಪ ಬಸಂತಪುರ ಇತರರಿದ್ದರು. ಶಿಕ್ಷಕ ಸುರೇಶ್ ಕರಣಗಿ ನಿರೂಪಿಸಿ, ವಂದಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.