ಕನ್ನಡಪ್ರಭ ವಾರ್ತೆ ಸಕಲೇಶಪುರ
ತಾಲೂಕಿನ ಎತ್ತಿನಹೊಳೆ ಅಚ್ಚುಕಟ್ಟು ಪ್ರದೇಶದಿಂದ ತಾಲೂಕಿನ ಹೆಬ್ಬನಹಳ್ಳಿವರಗೆ ಒಟ್ಟು ೧೨೬ ಕಿ.ಮೀ. ಪೈಪ್ಲೈನ್ ಮೂಲಕ ನೀರು ಹರಿದು ನಂತರ ತೆರೆದ ಕಾಲುವೆ ಮೂಲಕ ನೀರು ಹೊರಹೋಗಲಿದೆ. ಆದರೆ ಪೈಪ್ಲೈನ್ ಪದೇ ಪದೇ ತೆರೆದುಕೊಳ್ಳುವುದು ಎಂಜಿನಿಯರ್ಗಳಿಗೆ ಸಮಸ್ಯೆ ಸೃಷ್ಟಿಸಿದೆ. ೨೦೨೪ರಲ್ಲಿ ಪ್ರಾಯೋಗಿಕ ನೀರು ಹರಿವಿಕೆ ಚಾಲನೆ ನೀಡಿದ ವೇಳೆ ತಾಲೂಕಿನ ಹಾರ್ಲೇ ಕೂಡಿಗೆ, ದೇಖ್ಲಾ, ಕಾಡುಮನೆ ಹಾಗೂ ಹೆಬ್ಬಸಾಲೆ ಗ್ರಾಮಗಳ ಸಮೀಪ ಪೈಪ್ಲೈನ್ ಮ್ಯಾನ್ ಹೋಲು ಹಾಗೂ ಕೀ ಹೋಲುಗಳು ತೆರೆದುಕೊಂಡು ಭಾರಿ ಸಮಸ್ಯೆ ಸೃಷ್ಟಿಸಿದ್ದರಿಂದ ಸಮೀಪದ ಭತ್ತದ ಗದ್ದೆ ಹಾಗೂ ಕಾಫಿ ತೋಟಗಳಿಗೆ ನೀರು ನುಗ್ಗಿ ಬಾರಿ ನಷ್ಟ ಸಂಭವಿಸಿತ್ತು. ಇದರಿಂದ ಎಚ್ಚೆತ್ತಿದ್ದ ಅಧಿಕಾರಿಗಳು ಸಂಪೂರ್ಣ ಪೈಪ್ಲೈನ್ ಪರಿಶೀಲನೆ ನಡೆಸುವ ಮೂಲಕ ಮ್ಯಾನ್ ಹೋಲ್ ಹಾಗೂ ಕೀ ಹೋಲ್ಗಳನ್ನು ಭದ್ರಪಡಿಸಿದ್ದಾರೆ. ಪರಿಶೀಲನೆ ನಂತರ ಇದುವರೆಗೆ ಮ್ಯಾನ್ಹೋಲ್ ಹಾಗೂ ಕೀ ಹೋಲುಗಳು ತೆರೆದುಕೊಂಡು ಉದಾಹರಣೆ ಕಂಡುಬಂದಿಲ್ಲ. ಆದರೆ, ೨೦೨೫ರ ಜುಲೈ ತಿಂಗಳಿನಲ್ಲಿ ಬೈಕೆರೆ ಗ್ರಾಮ ಸಮೀಪ ಪೈಪ್ಗಳ ಜಾಯಿಂಟ್ ವಿಫಲವಾಗಿ ನೀರು ಸೋರಿಕೆಯಾಗಿ ಅಪಾರ ಪ್ರಮಾಣದ ನೀರು ವ್ಯರ್ಥವಾಗಿತ್ತು. ಇದಾದ ನಂತರ ೨೦೨೬ ಜುಲೈ ೧೦ರಂದು ತಾಲೂಕಿನ ಹಲುಸುಲಿಗೆ ಗ್ರಾಮ ಸಮೀಪ ಮತ್ತೆ ಪೈಪ್ಗಳ ಮದ್ಯದ ಜಾಯಿಂಟ್ ವಿಫಲವಾಗಿ ಮತ್ತೆ ನೀರು ಹೊರಹರಿದಿದೆ. ಇದರಿಂದ ಎಚ್ಚೆತ್ತಿರುವ ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆಯ ಅಧಿಕಾರಿಗಳ ತಂಡ ಸಂಪೂರ್ಣ ಯೋಜನೆಯ ೧೨೬ ಕಿ. ಮೀ. ಉದ್ದದ ಪೈಪ್ ಲೈನ್ ಪರೀಕ್ಷಿಸಿ ಬಟರ್ ಪ್ಲೇ ವಾಲ್ಟ್ ಆಳವಡಿಸಲು ಚಿಂತನೆ ನಡೆಸಿದ್ದು ಇದಕ್ಕಾಗಿ ಸುಮಾರು ೮ ಕೋಟಿ ರು. ಅನುದಾನ ಬೇಕಾಗುತ್ತದೆ ಎನ್ನಲಾಗುತ್ತಿದೆ.ಆಲ್ಟ್ರಸ್ಕೋಪಿಕ್ ಟೆಸ್ಟ್:
ಸದ್ಯ ಎತ್ತಿನಹೊಳೆಯ ಎಂಟು ಚೆಕ್ ಡ್ಯಾಮ್ಗಳಲ್ಲಿ ಎರಡು ಸಾವಿರದಿಂದ ೧೬ ಸಾವಿರ ಎಚ್.ಪಿ ಸಾಮರ್ಥ್ಯದ ೨೦ಕ್ಕೂ ಅಧಿಕ ಮೋಟರ್ಗಳಿದ್ದು ಪ್ರತಿ ಮೋಟರ್ನಿಂದ ಕನಿಷ್ಠ ೧೦೦ ಕ್ಯುಸೆಕ್ನಿಂದ ಒಂದು ಸಾವಿರ ಕ್ಯುಸೆಕ್ ನೀರು ಮೇಲೆತ್ತುವ ಸಾಮರ್ಥ್ಯ ಹೊಂದಿವೆ ಏಕಕಾಲಕ್ಕೆ ನಾಲ್ಕಾರು ಮೋಟರುಗಳು ಕಾರ್ಯನಿರ್ವಯಿಸಿದರೆ ಕನಿಷ್ಠ ೧೫೦೦ ಕ್ಯುಸೆಕ್ ನೀರು ಪೈಪ್ಗಳ ಮೂಲಕ ಹರಿಯಲಿದೆ. ಇಷ್ಟೊಂದು ನೀರು ಹರಿಯುವ ವೇಳೆ ಪೈಪ್ಗಳಲ್ಲಿ ಸೋರಿಕೆ ಕಂಡು ಬಂದರೆ ಪತ್ತೆ ಮಾಡಲು ಅತ್ಯಾಧುನಿಕ ಆಲ್ಟ್ರಸ್ಕೋಪಿಕ್ ಟೆಸ್ಟ್ ಆಳವಡಿಸಲಾಗುತ್ತಿದ್ದು. ನೀರು ಸೋರಿಕೆ ಪತ್ತೆಯಾದ ತಕ್ಷಣ ಬಟರ್ಪ್ಲೇ ವಾಲ್ಟ್ ಮೂಲಕ ದುರಸ್ತಿ ನಡೆಸಲು ಯೋಜನೆ ರೂಪಿಸಲಾಗಿದೆ. ಈ ತಂತ್ರಜ್ಞಾನದಿಂದ ನೀರು ಹೆಚ್ಚಿನ ಪ್ರಮಾಣದಲ್ಲಿ ವ್ಯರ್ಥವಾಗುವುದು ಹಾಗೂ ಅನವಶ್ಯಕವಾಗಿ ಹಣ ಹಾಗೂ ಶ್ರಮ ವ್ಯರ್ಥವಾಗುವುದು ತಪ್ಪಲಿದೆ ಎನ್ನಲಾಗುತ್ತಿದೆ.