ಹಗರಿಬೊಮ್ಮನಹಳ್ಳಿ: ಇದೇ ಜೂನ್ನಲ್ಲಿ ₹1.25 ಕೋಟಿ ಅನುದಾನ ಒದಗಿಸಿ ಪಟ್ಟಣದಲ್ಲಿ ಹೇಮರೆಡ್ಡಿ ಮಲ್ಲಮ್ಮ ಸಮುದಾಯ ಭವನದ ಭೂಮಿಪೂಜೆ ನೆರವೇರಿಸಲಾಗುತ್ತದೆ ಎಂದು ಶಾಸಕ ನೇಮರಾಜನಾಯ್ಕ ಪ್ರಕಟಿಸಿದರು.
ರಾಜ್ಯ ಸರಕಾರ ಅನುದಾನ ನೀಡದಿದ್ದರೂ ಕೇಂದ್ರದ ನಾನಾ ಇಲಾಖೆಗಳ ಅನುದಾನದಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಕೇವಲ ಎರಡು ವರ್ಷಗಳಲ್ಲಿ ಗ್ರಾಮದಲ್ಲಿ ನಾಲ್ಕು ಕೋಟಿ ಅನುದಾನ ಒದಗಿಸಿ ನಾನಾ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲಾಗಿದೆ. ₹60 ಕೋಟಿ ವೆಚ್ಚದಲ್ಲಿ ತಾಲೂಕಿನ ರಸ್ತೆ ಸುಧಾರಣೆಯ ಕಾಮಗಾರಿಗಳು ಟೆಂಡರ್ ಹಂತದಲ್ಲಿವೆ ಎಂದು ವಿವರಿಸಿದರು.
ಇನ್ನು ಎರಡು ವರ್ಷ ಕಳೆದರೆ ಜನಪರ ಸರಕಾರವನ್ನು ಚುನಾಯಿಸುವ ಜವಾಬ್ದಾರಿ ನಿಮ್ಮ ಪಾಲಿಗೆ ಬರುತ್ತದೆ. ಅನುದಾನ ಒದಗಿಸದ ಸರಕಾರವನ್ನು ಆಯ್ಕೆ ಮಾಡದೇ ಜನಪರವಾಗಿ ಕೆಲಸ ಮಾಡುವ ಸರಕಾರ ಆಯ್ಕೆ ಮಾಡಿಕೊಳ್ಳುವ ಪ್ರಬುದ್ಧತೆ ರಾಜ್ಯದ ಜನತೆ ತೋರಬೇಕು ಎಂದು ಆಶಿಸಿದರು.ಹಂಪಸಾಗರದ ಶಿವಲಿಂಗ ಶಿವಾಚಾರ್ಯ ಶ್ರೀಗಳು, ಉತ್ತಂಗಿಯ ಸೋಮಶಂಕರ ಶ್ರೀಗಳು, ಮರಿಯಮ್ಮನಹಳ್ಳಿಯ ಮಲ್ಲಿಕಾರ್ಜುನ ಶಿವಾಚಾರ್ಯ ಶ್ರೀಗಳು, ನಂದೀಪುರ ಡಾ. ಮಹೇಶ್ವರ ಶ್ರೀಗಳು ಮತ್ತು ಹಾಲಸಿದ್ಧೇಶ್ವರ ಶ್ರೀಗಳು ಸಾನಿಧ್ಯ ವಹಿಸಿದ್ದ ವಿವಾಹ ಸಮಾರಂಭದಲ್ಲಿ 18 ಜೋಡಿಗಳು ಸಪ್ತಪದಿ ತುಳಿದರು.
ಟ್ರಸ್ಟನ ಅಧ್ಯಕ್ಷ ಎ.ಟಿ. ಹನುಮನಗೌಡ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಕನ್ನಿಹಳ್ಳಿ ಚಂದ್ರಶೇಖರ್, ರೆಡ್ಡಿ ಸಮಾಜದ ತಾಲೂಕು ಅಧ್ಯಕ್ಷ ಎಂ. ಬಸವರೆಡ್ಡಿ, ಹಡಗಲಿ ಸಮಾಜದ ಸಿ.ಮೋಹನರೆಡ್ಡಿ, ಭರಮರೆಡ್ಡಿ, ಗದ್ದಿಕೇರಿಯ ಪ್ರಗತಿಪರ ದಾಳಿಂಬೆ ಕೃಷಿಕ ತಿಪ್ಪಾರೆಡ್ಡಿ ಮಂಜುನಾಥ್, ಕಲ್ಯಾಣೇಶ್ವರ ಸೇವಾ ಟ್ರಸ್ಟ್ ಅಧ್ಯಕ್ಷ ಕೆ. ವಸಂತಕುಮಾರ್, ಸಮಾಜದ ತಾಲೂಕು ಉಪಾಧ್ಯಕ್ಷ ಕೆ.ಬಿ. ಪ್ರಶಾಂತರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.
ಹೇಮರಡ್ಡಿ ಮಲ್ಲಮ್ಮನ ಜಯಂತಿ