ಕ್ಷೇತ್ರದ ಗೆದ್ಲೆಹಳ್ಳಿ ಶ್ರೀ ಬಯಲು ಬಸವೇಶ್ವರ ಸಮುದಾಯ ಭವನದಲ್ಲಿ ನೊಳಂಬ ಸಮಾಜದಿಂದ ಶಾಸಕ, ಸಂಸದರಿಗೆ ಗೌರವ
ಕನ್ನಡಪ್ರಭ ವಾರ್ತೆ, ಕಡೂರುಪಟ್ಟಣ ಸಮೀಪದ ಶ್ರೀ ಗುರು ಸಿದ್ಧರಾಮೇಶ್ವರ ಸಮುದಾಯ ಭವನಕ್ಕೆ ರಾಜ್ಯ ಸರ್ಕಾರದಿಂದ ₹1.75 ಕೋಟಿ ಅನುದಾನ, ವೈಯುಕ್ತಿಕವಾಗಿ ₹ 25 ಲಕ್ಷ, ಶಾಸಕರು ಮತ್ತು ಸಂಸದರ ನಿಧಿಯಿಂದ ₹ 1 ಕೋಟಿ ನೀಡುವುದಾಗಿ ಶಾಸಕ ಕೆ.ಎಸ್. ಅನಂದ್ ಭರವಸೆ ನೀಡಿದರು. ಕ್ಷೇತ್ರದ ಗೆದ್ಲೆಹಳ್ಳಿ ಶ್ರೀ ಬಯಲು ಬಸವೇಶ್ವರ ಸಮುದಾಯ ಭವನದಲ್ಲಿ ನೊಳಂಬ ಲಿಂಗಾಯತ ಸಮಾಜ ಶಾಸಕರಿಗೆ ಹಾಗೂ ಹಾಸನ ಸಂಸದರಿಗೆ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಗೌರವ ಸ್ವೀಕರಿಸಿ ಮಾತನಾಡಿದರು. ನಮ್ಮ ಕಡೂರು ಕ್ಷೇತ್ರದ ಜನಪ್ರತಿನಿಧಿಗಳ ಗೆಲುವಿನಲ್ಲಿ ನೊಳಂಬ ಸಮಾಜದ ಕೊಡುಗೆ ಹೆಚ್ಚಾಗಿದೆ. ರಾಜಕೀಯವಾಗಿ ಅವರು ನಂಬಿ ಕೈ ಹಿಡಿದರೆ ಗೆಲುವು ನಿಶ್ಚಿತ ಇದಕ್ಕೆನಾನೇ ಸಾಕ್ಷಿ. 18 ವರ್ಷಗಳಿಂದ ನೊಳಂಬ ಸಮಾಜದ ಬಂಧುಗಳೊಂದಿಗೆ ಒಡನಾಟ ಇಟ್ಟು ಕೊಂಡಿದ್ದು ಮತಿಘಟ್ಟ ಜಿಪಂ ಕ್ಷೇತ್ರದಲ್ಲಿ ನನ್ನ ತಾಯಿ ಗೆಲುವಿಗೂ ಸಹ ಶ್ರಮಿಸಿದ್ದಾರೆ ಇದನ್ನು ಯಾವತ್ತೂ ಮರೆಯುವುದಿಲ್ಲ ಎಂದರು.
ಈ ಹಿಂದೆ ಕೆ.ಎಂ.ಕೃಷ್ಣಮೂರ್ತಿಯವರು ಕೂಡ ನೊಳಂಬ ಸಮಾಜ ನಂಬಿದ್ದು ನಾನೂ ಸಹ ಅವರನ್ನು ಹಿಂಬಾಲಿಸುತ್ತಿದ್ದೇನೆ ಎಂದರು. ಬರಲಿರುವ ಜಿಪಂ ಚುನಾವಣೆಯಲ್ಲಿ ದೇವನೂರು, ಹಿರೇನಲ್ಲೂರು ಕ್ಷೇತ್ರಗಳಿಗೆ ನೊಳಂಬ ಸಮಾಜಕ್ಕೆ ಆದ್ಯತೆ ನೀಡುವುದಾಗಿ ತಿಳಿಸಿದರು. ಕಾಂಗ್ರೆಸ್ ಸರ್ಕಾರ ಬಂದ ನಂತರ ನೊಳಂಬ ಸಮಾಜದ ಗುರುಪ್ರಸಾದ್ ಅವರಿಗೆ ಅರಣ್ಯ ಇಲಾಖೆಯಲ್ಲಿ ಉತ್ತಮ ಸ್ಥಾನ ನೀಡಲಾಗಿದೆ. ಶಿವಾನಂದಸ್ವಾಮಿ ಮತ್ತು ಗುಮ್ಮನಹಳ್ಳಿ ಅಶೋಕ್ ಅವರಿಗೆ ಸ್ಥಾನ-ಮಾನ ಕಲ್ಪಿಸಲಾಗಿದೆ ಮುಂದೆಯೂ ಅನೇಕರನ್ನು ಗುರುತಿಸುವ ಕಾರ್ಯ ಮಾಡುವುದಾಗಿ ಹೇಳಿದರು.ಹಾಸನ ಸಂಸದ ಶ್ರೇಯಸ್ ಎಂ.ಪಟೇಲ್ ಮಾತನಾಡಿ, ಮೊದಲ ಸನ್ಮಾನವನ್ನು ನೊಳಂಬ ಲಿಂಗಾಯತ ಸಮುದಾಯ ಮಾಡಿರುವುದು ಸಂತಸ ತಂದಿದೆ. ನಮ್ಮ ತಾತ ಪುಟ್ಟಸ್ವಾಮಿಗೌಡರಿಗೂ ಲಿಂಗಾಯತ ಸಮುದಾಯಕ್ಕೂ ಅವಿನಾಭಾವ ಸಂಬಂಧವಿತ್ತು. ಹಾಸನ ಅಕ್ಕಪಕ್ಕದ ಜಿಲ್ಲೆಗಳಲ್ಲಿನ ಮಠ-ಮಾನ್ಯಗಳಿಗೆ ನಮ್ಮ ಕುಟುಂಬ ನಡೆದುಕೊಂಡು ಬಂದಿದೆ. ಸಂಸದರಾಗಲು ಲಿಂಗಾಯತ ಸಮುದಾಯದ ಅಪಾರ ಮತಗಳು ನನಗೆ ಬಂದಿದೆ. ನಿಮ್ಮ ಋಣ ತೀರಿಸಲು ನಾನು ಸದಾ ಸಿದ್ಧ ಎಂದರು. ಲಿಂಗಾಯತ ಸಮಾಜದ ಬೇಡಿಕೆಗಳನ್ನು ಶಾಸಕರ ಜೊತೆ ಸೇರಿ ಜೋಡೆತ್ತಿನಂತೆ ಈಡೇರಿಸುತ್ತೇವೆ ಎಂದರು. ಭದ್ರಾ ನೀರಾವರಿ ಯೋಜನೆಯನ್ನು ರಾಷ್ಟ್ರೀಕರಣ ಮಾಡಲು ತಾವು ಹಾಗು ದಾವಣಗೆರೆ ಸಂಸದರು ಸಂಸತ್ತಿನಲ್ಲಿ ಧ್ವನಿ ಎತ್ತಿದ್ದೇವೆ ಎಂದರು. ಕಡೂರು ಯಳನಡು ಮಠದ ಶ್ರೀ ಜ್ಞಾನಪ್ರಭು ಸಿದ್ಧರಾಮ ದೇಶಿಕೇಂದ್ರ ಸ್ವಾಮೀಜಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮಾಜದ ಒಗ್ಗಟ್ಟಿಗೆ ಗುರುಗಳ ಮಾರ್ಗದರ್ಶನ ಈ ಸಮಾಜಕ್ಕೆ ಬೇಕು. ಸಂಘಟನೆಗೆ ಮತ್ತು ಶಿಕ್ಷಣಕ್ಕೆ ಹೆಚ್ಚಿನ ಆಧ್ಯತೆ ನೀಡಬೇಕು. ಶ್ರೀಮಠ ವನ್ನು ಗುರುತಿಸುವ ಕೆಲಸವಾಗಬೇಕು ಎಂದರು. ಪುಷ್ಪಗಿರಿ ಸಂಸ್ಥಾನದ ಶ್ರೀಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಮತ್ತು ಕರಡಿಗವಿ ಮಠದ ಶಿವಶಂಕರ ಶಿವಯೋಗಿ ಸ್ವಾಮೀಜಿ ಆಶೀರ್ವಚನ ನೀಡಿದರು.
ನೊಳಂಬ ಸಮಾಜದ ಕೆಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಕಾಮನಕೆರೆ ಶಶಿಧರ್ , ಸಮಾಜದ ಭವನಕ್ಕೆ ಶಾಸಕ ಕೆ.ಎಸ್. ಆನಂದ್ ಅನುದಾನ ಮಂಜೂರಾತಿಗೆ ಸಹಕಾರ ನೀಡಿದ್ದಾರೆ. ಈ ಹಿಂದಿನ ಶಾಸಕ ಬೆಳ್ಳಿಪ್ರಕಾಶ್ 75 ಲಕ್ಷ ನೀಡಿದ್ದಾರೆ ಎಂದರು.ಗುಮ್ಮನಹಳ್ಳಿ ಅಶೋಕ್, ನೊಳಂಬ ಸಮಾಜಕ್ಕೆ ಶಾಸಕರ ಕೊಡುಗೆ ಬಗ್ಗೆ ವಿವರಿಸಿದರು.ಶಿವಾನಂದಸ್ವಾಮಿ,ಶರತ್ ಕೃಷ್ಣಮೂರ್ತಿ, ಸನ್ಮಾನ ಸಮಿತಿ ಅಧ್ಯಕ್ಷ ಕಾಮನಕೆರೆ ಪಂಚಾಕ್ಷರಿ, ಡಾ.ಚಂದ್ರಶೇಖರ್, ಡಾ.ಉಮೇಶ್, ಪಶುವೈದ್ಯ, ಡಾ.ಉಮೇಶ್, ಶಿವರುದ್ರಪ್ಪ, ಕಪಿನೇಗೌಡರು,ಸರೋಜಮ್ಮ,ಸುಜಾತಾ, ಭಾರತಿ, ಬಿಸಲೆರೆ ಕೆಂಪರಾಜ್, ಬಸವ ರಾಜಪ್ಪ, ಈಶ್ವರಪ್ಪ, ಶರಣ ಸೋಮಶೇಖರ್,ವೀರಶೈವ ಸಮಾಜದ ಅಧ್ಯಕ್ಷ ಸಾಣೆಹಳ್ಳಿ ರೇಣುಕಾರಾಧ್ಯ,ಎಂ.ಎಚ್.ಚಂದ್ರಪ್ಪ ಮತ್ತಿತರರು ಇದ್ದರು.2ಕಕೆಡಿಯು1.
ಕಡೂರು ತಾಲೂಕು ನೊಳಂಬ ಸಮಾಜದಿಂದ ಸಂಸದ ಶ್ರೇಯಸ್ ಎಂ.ಪಟೇಲ್ ಹಾಗೂ ಶಾಸಕ ಕೆ.ಎಸ್.ಆನಂದ್ ಅವರನ್ನು ಸನ್ಮಾನಿಸಲಾಯಿತು.