ಏಕತಾ ಸಮಾವೇಶದಲ್ಲಿ 1 ಲಕ್ಷ ಜನ ಭಾಗಿ: ದಿಂಗಾಲೇಶ್ವರ ಶ್ರೀ

KannadaprabhaNewsNetwork |  
Published : Sep 17, 2025, 01:06 AM IST
ದಿಂಗಾಲೇಶ್ವರ ಶ್ರೀ | Kannada Prabha

ಸಾರಾಂಶ

ಮಧ್ಯಾಹ್ನ 2ಗಂಟೆಗೆ ಮೂರುಸಾವಿರ ಮಠದಿಂದ ನಗರದ ನೆಹರು ಮೈದಾನದ ವರೆಗೆ ಮಠಾಧೀಶರ ಪಾದಯಾತ್ರೆ ನಡೆಯಲಿದೆ. ಪಂಚಪೀಠಾಧೀಶರು, ಗುರುವಿರಕ್ತರು ಸೇರಿದಂತೆ ಎಲ್ಲ ಸ್ವಾಮೀಜಿಗಳು ಇದರಲ್ಲಿ ಭಾಗವಹಿಸಲಿದ್ದಾರೆ.

ಹುಬ್ಬಳ್ಳಿ: ನಗರದ ನೆಹರು ಮೈದಾನದಲ್ಲಿ ಸೆ.19 ರಂದು ನಡೆಯುವ ವೀರಶೈವ ಲಿಂಗಾಯತ ಏಕತಾ ಸಮಾವೇಶ ಸಕಲ ಸಿದ್ಧತೆ ನಡೆದಿದ್ದು, 1 ಲಕ್ಷ ಜನರು ಭಾಗವಹಿಸುವ ನಿರೀಕ್ಷೆ ಇದೆ ಎಂದು ಶಿರಹಟ್ಟಿ ಫಕೀರ ದಿಂಗಾಲೇಶ್ವರ ಸ್ವಾಮೀಜಿ ತಿಳಿಸಿದರು.

ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾರಾಷ್ಟ್ರ, ತಮಿಳನಾಡು, ಆಂಧ್ರ ಪ್ರದೇಶ, ತೆಲಂಗಾಣ ಹಾಗೂ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಿಂದ 1 ಸಾವಿರ ಸ್ವಾಮೀಜಿಗಳು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದರು.

ಬರುವ ಸ್ವಾಮೀಜಿಗಳಿಗೆ ನಗರದ ಮೂರುಸಾವಿರ ಮಠದಲ್ಲಿ ವ್ಯವಸ್ಥೆ ಮಾಡಲಾಗಿದೆ. ಸಮಾವೇಶದಲ್ಲಿ ಭಾಗವಹಿಸಿರುವ 50 ಸಾವಿರ ಜನರಿಗೆ ಮಧ್ಯಾಹ್ನ ಊಟ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.

ಮಧ್ಯಾಹ್ನ 2ಗಂಟೆಗೆ ಮೂರುಸಾವಿರ ಮಠದಿಂದ ನಗರದ ನೆಹರು ಮೈದಾನದ ವರೆಗೆ ಮಠಾಧೀಶರ ಪಾದಯಾತ್ರೆ ನಡೆಯಲಿದೆ. ಪಂಚಪೀಠಾಧೀಶರು, ಗುರುವಿರಕ್ತರು ಸೇರಿದಂತೆ ಎಲ್ಲ ಸ್ವಾಮೀಜಿಗಳು ಇದರಲ್ಲಿ ಭಾಗವಹಿಸಲಿದ್ದಾರೆ. ಉಳಿದ ಸ್ವಾಮೀಜಿಗಳು ವೀರಶೈವ ಲಿಂಗಾಯತ ಒಂದು ಎಂದು ಒಪ್ಪಿಕೊಳ್ಳುವರಿಗೆ ಈ ಸುದ್ದಿಗೋಷ್ಠಿಯಿಂದ ಆಹ್ವಾನಿಸುತ್ತಿದ್ದು, ತಾವೆಲ್ಲರೂ ಬರಬೇಕು ಎಂದು ಹೇಳಿದರು.

ಹುಬ್ಬಳ್ಳಿ-ಧಾರವಾಡ ಇತಿಹಾಸದಲ್ಲಿಯೇ ಒಂದು ಸಾವಿರ ಜನ ಸ್ವಾಮೀಜಿಗಳು ಭಾಗವಹಿಸುತ್ತಿರುವುದು ಬಹುಶಃ ಇದೆ ಮೊದಲಾಗಿದೆ. ವಿವಿಧ ಪಕ್ಷಗಳ ಜನಪ್ರತಿನಿಧಿಗಳು, ಮುಖಂಡರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಕಮತಗಿ ಹುಚ್ಚೇಶ್ವರ ಸ್ವಾಮೀಜಿ, ಹಾವೇರಿ ಸದಾಶಿವ ಸ್ವಾಮೀಜಿ, ಮಾದನ ಹಿಪ್ಪರಗಿ ಅಭಿನವ ಶಿವಲಿಂಗ ಸ್ವಾಮೀಜಿ, ಅಮ್ಮನಘಡ ಶಂಕರ ರಾಜೇಂದ್ರ ಸ್ವಾಮೀಜಿ, ನೀಲಗುಂದ ಚೆನ್ನಬಸವ ಶಿವಯೋಗಿ ಸ್ವಾಮೀಜಿ, ಕುಕನೂರ ಚೆನ್ನಮಲ್ಲ ಸ್ವಾಮೀಜಿ, ಸದಾಶಿವ ಸ್ವಾಮೀಜಿ ಇದ್ದರು.

ಪಂಚಪೀಠಾಧೀಶರ ಮೇಲಿನ ಸೇಡಿಗೆ ಸಮಾಜ ಬಲಿಕೊಡಬೇಡಿ: ಪಂಚಪೀಠಾಧೀಶರ ಮೇಲಿನ ಸೇಡು ತೀರಿಸಿಕೊಳ್ಳಲು ಸಮಾಜವನ್ನು ಬಲಿಕೊಡುವುದು ಸರಿಯಲ್ಲ ಎಂದು ಶಿರಹಟ್ಟಿ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂಚಪೀಠಾಧಿಪತಿಗಳು, ಬಸವತತ್ವ ಪಾಲಿಸುವವರು ಒಂದಾಗಬೇಕು ಎಂಬುದು ನಮ್ಮ ಆಶಯ. ಜಾಗತಿಕ ಲಿಂಗಾಯತ ಮಹಾಸಭಾದ ಕಾರ್ಯದರ್ಶಿ ಎಸ್.ಎಂ. ಜಾಮದಾರ ಪಂಚಪೀಠಾಧೀಶರು ಬದಲಾಗಬೇಕು ಎಂಬ ಹೇಳಿಕೆ ನೀಡಿದ್ದು, ಸೇಡು ತಿರಿಸಿಕೊಳ್ಳುವಂತಿದೆ ಎಂದರು.

ಪ್ರತ್ಯೇಕ ಧರ್ಮ ಸ್ಥಾಪಿಸಲು ಅವರು ಹೊರಟಿವುದರಿಂದ ವೀರಶೈವ- ಲಿಂಗಾಯತ ಏಕತಾ ಸಮಾವೇಶ ಮಾಡಲಾಗುತ್ತಿದೆ. ಪಂಚಪೀಠಾಧೀಶರು, ವಿರಕ್ತ ಗುರುಗಳು, ಸ್ವಾಮೀಜಿಗಳು ಎಲ್ಲ ಪಕ್ಷ ಮುಖಂಡರು ಇದರಲ್ಲಿ ಭಾಗವಹಿಸಲಿದ್ದಾರೆ ಎಂದರು.

ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯಲ್ಲಿ ವೀರಶೈವ -ಲಿಂಗಾಯತರು ಏನು ಬರೆಯಿಸಬೇಕು ಎಂಬುದನ್ನು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ನಿರ್ಧರಿಸಲಿದೆ. ಸ್ವಾಮೀಜಿಗಳು, ಮುಖಂಡರು ಹಾಗೂ ಜನರು ತಮ್ಮ ಅಭಿಪ್ರಾಯ ಮಹಾಸಭಾದ ಮುಂದೆ ವ್ಯಕ್ತಪಡಿಸಲು ಮಾತ್ರ ಅವಕಾಶವಿದೆ. ಅಂತಿಮ ನಿರ್ಣಯ ಮಹಾಸಭಾದಿಂದ ಆಗಲಿದೆ ಎಂದು ಸ್ಪಷ್ಟಪಡಿಸಿದರು.

PREV

Recommended Stories

ಗ್ರಾಮೀಣ ಭಜನಾ ಮಂಡಳಿಗಳಲ್ಲಿ ತತ್ವಪದಗಳು ಜೀವಂತ
ರಾಮದುರ್ಗ ಧನಲಕ್ಷ್ಮೀ ಶುಗರ್ ಚುನಾವಣೆ: ಸತತ 4ನೇ ಬಾರಿಗೆ ಯಾದವಾಡರ ನೇತೃತ್ವಕ್ಕೆ ಜಯ