ಸರ್ಕಾರಿ ಪ್ರೌಢಶಾಲೆ ಸಭಾಭವನ ನಿರ್ಮಾಣಕ್ಕೆ ₹10 ಲಕ್ಷ ದೇಣಿಗೆ

KannadaprabhaNewsNetwork |  
Published : Mar 10, 2026, 03:30 AM IST
ತಾಲೂಕಿನ ಕುಮ್ಮೂರು ಗ್ರಾಮದ ಫಾಸಿ ಫ್ರಭಾವತಿ ಸರ್ಕಾರಿ ಪ್ರೌಢಶಾಲೆಯಲ್ಲಿ ಪ್ರಕಾಶ ಪಾಟೀಲ ಸಮುದಾಯ ಭವನ ನಿರ್ಮಾಣ ಕಾಮಗಾರಿ ಭೂಮಿಪೂಜಾ ಸಮಾರಂಭವನ್ನು ಉದ್ಯಮಿ ಪ್ರಕಾಶ ಪಾಟೀಲ  ನೆರವೇರಿಸಿದರು. | Kannada Prabha

ಸಾರಾಂಶ

ತಾಲೂಕಿನ ಕುಮ್ಮೂರ ಗ್ರಾಮದ ಫಾಸಿ ಫ್ರಭಾವತಿ ಸರ್ಕಾರಿ ಪ್ರೌಢಶಾಲೆಯಲ್ಲಿ ನಿರ್ಮಿಸಲುದ್ದೇಶಿಸಿರುವ ಸಭಾಭವನಕ್ಕೆ 10 ಲಕ್ಷ ರು.ಗಳನ್ನು ದೇಣಿಗೆ ರೂಪದಲ್ಲಿ ನೀಡುವುದಾಗಿ ತಾಲೂಕಿನ ಚಿನ್ನಿಕಟ್ಟಿ ಗ್ರಾಮದ ಉದ್ಯಮಿ ಪ್ರಕಾಶ ಪಾಟೀಲ ಘೋಷಿಸಿದರು.

ಬ್ಯಾಡಗಿ: ತಾಲೂಕಿನ ಕುಮ್ಮೂರ ಗ್ರಾಮದ ಫಾಸಿ ಫ್ರಭಾವತಿ ಸರ್ಕಾರಿ ಪ್ರೌಢಶಾಲೆಯಲ್ಲಿ ನಿರ್ಮಿಸಲುದ್ದೇಶಿಸಿರುವ ಸಭಾಭವನಕ್ಕೆ 10 ಲಕ್ಷ ರು.ಗಳನ್ನು ದೇಣಿಗೆ ರೂಪದಲ್ಲಿ ನೀಡುವುದಾಗಿ ತಾಲೂಕಿನ ಚಿನ್ನಿಕಟ್ಟಿ ಗ್ರಾಮದ ಉದ್ಯಮಿ ಪ್ರಕಾಶ ಪಾಟೀಲ ಘೋಷಿಸಿದರು.

ತಾಲೂಕಿನ ಕುಮ್ಮೂರು ಗ್ರಾಮದ ಫಾಸಿ ಪ್ರಭಾವತಿ ಸರ್ಕಾರಿ ಪ್ರೌಢಶಾಲೆಯಲ್ಲಿ ಪ್ರಕಾಶ ಪಾಟೀಲ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಸಮುದಾಯ ಭವನ ನಿರ್ಮಾಣಕ್ಕೆ ಇನ್ನೊಬ್ಬರ ಬಳಿ ಕೈಚಾಚುವ ಮುನ್ನವೇ ಕೊಡುತ್ತಿರುವ ಹಣ ಸದ್ಬಳಕೆ ಮಾಡಿಕೊಂಡರಷ್ಟೇ ನನ್ನ ಶ್ರಮಕ್ಕೆ ಅರ್ಥ ಬರಲಿದೆ ಎಂದರು.

ವೈಯಕ್ತಿಕ ಕಾಳಜಿ ಮೇಲೆ ಅಭಿವೃದ್ಧಿ: ಗ್ರಾಮಸ್ಥರು ಸೇರಿಕೊಂಡು ಶಾಲೆಗಳನ್ನು ಅಭಿವೃದ್ಧಿಪಡಿಸುವುದರಲ್ಲಿ ಶೈಕ್ಷಣಿಕ ಪ್ರಗತಿಯ ಜೊತೆಗೆ ಸಾಮಾಜಿಕ ನ್ಯಾಯ ಸೇರಿದಂತೆ ಶಾಲೆಯ ಬಗ್ಗೆ ವೈಯಕ್ತಿಕ ಕಾಳಜಿ ಹೆಚ್ಚಾಗಲಿದೆ, ಇಲ್ಲಿನ ಮೇಲುಸ್ತುವಾರಿ ಸಮಿತಿ ಉತ್ತಮವಾಗಿದ್ದು ಶಾಲೆಯ ಅಭಿವ್ಥದ್ಧಿಗೆ ವೈಯಕ್ತಿಕವಾಗಿ ಕಾಳಜಿ ತೋರುತ್ತಿರುವುದು ಅತ್ಯಂತ ಸ್ವಾಗತಾರ್ಹ ಕೆಲಸವೆಂದರು.

ನೂರರ ಸಂಭ್ರಮ ಅಸಾಧ್ಯ: ಶೈಕ್ಷಣಿಕ ಸ್ಪರ್ಧೆಯಲ್ಲಿ ಸಾರ್ವಜನಿಕರ ಸಹಭಾಗಿತ್ವ ಇಲ್ಲದೇ ಶೈಕ್ಷಣಿಕ ವ್ಯವಸ್ಥೆ ಉಳಿಸಿಕೊಳ್ಳುವುದು ಕಷ್ಟದ ಕೆಲಸ, ಇದಕ್ಕಾಗಿ ಶಿಕ್ಷಣ ಇಲಾಖೆ ಇನ್ನಿಲ್ಲದ ಕಸರತ್ತು ನಡೆಸುತ್ತಿದೆ, ಇಂದಿನ ಸ್ಪರ್ದಾತ್ಮಕ ಯುಗದಲ್ಲಿ ಸರ್ಕಾರ ಶಾಲೆಗಳನ್ನು ಅಭಿವೃದ್ಧಿಪಡಿಸುವ ಬದಲಾಗಿ ಎರಡೆರಡು ಸರ್ಕಾರಿ ಶಾಲೆಗಳನ್ನು ಒಟ್ಟುಗೂಡಿಸುವ ಕೆಲಸಕ್ಕೆ ಸರ್ಕಾರ ಮುಂದಾಗಿರುವುದು ಖಂಡನೀಯ. ಇಂತಹ ನಿರ್ಧಾರಗಳನ್ನು ಸರ್ಕಾರ ಮುಂದುವರೆಸಿದಲ್ಲಿ ಬರುವ ದಿನಗಳಲ್ಲಿ ನೂರರ ಸಂಭ್ರಮ ಕಾಣುವ ಸರ್ಕಾರಿ ಶಾಲೆಗಳೇ ಸಿಗಲು ಸಾಧ್ಯವಿಲ್ಲ ಎಂದರು.

ವ್ಯವಸ್ಥೆಯ ಭಾಗವಾಗದಿದ್ದರೇ ಕಷ್ಟ: ಉಪನ್ಯಾಸ ನೀಡಿದ ನಿವೃತ್ತ ಶಿಕ್ಷಕ ಹಾಗೂ ಸಾಹಿತಿ ಹನುಮಂತಗೌಡ ಗೊಲ್ಲರ ಮಾತನಾಡಿ, ಶಿಕ್ಷಣ ಎಂದಿಗೂ ಮಾರಾಟದ ವಸ್ತುವಾಗಬಾರದು ಹಣಕೊಟ್ಟು ಸರ್ಟಿಫಿಕೇಟ್ ಪಡೆಯುವ ಸಂಸ್ಕೃತಿಗಳು ನಿಲ್ಲಬೇಕು, ಸಾಮರ್ಥ್ಯವಿರುವ ಪ್ರತಿಭಾವಂತ ಶಿಕ್ಷಕರನ್ನೇ ಸರ್ಕಾರಿ ಶಾಲೆಗಳಿಗೆ ನೇಮಕ ಮಾಡಲಾಗಿದ್ದು ಇತ್ತೀಚೆಗೆ ಹಳ್ಳಿಯಲ್ಲಿ ಓದಿದ ಮಕ್ಕಳೇ ರಾಜ್ಯದಲ್ಲಿ ಮೊದಲ ಸ್ಥಾನ ಪಡೆದುಕೊಳ್ಳುತ್ತಿದ್ದಾರೆ, ಇನ್ನಾದರೂ ಶಿಕ್ಷಕರು ವ್ಯವಸ್ಥೆಯ ಭಾಗವಾಗಿ ನಿಷ್ಠೆ ತೋರಬೇಕು ಮೂಲಕ ದೇಶಕ್ಕೆ ಶಿಕ್ಷಣವಂತ ಮಕ್ಕಳನ್ನು ಕೊಟ್ಟು ಪುಣ್ಯ ಕಟ್ಟಿಕೊಳ್ಳುವಂತೆ ಕರೆ ನೀಡಿದರು.

ಧನ್ಯತಾ ಭಾವ ಮೂಡಿಸಿ: ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಜಿ. ಕೋಟಿ ಮಾತನಾಡಿ, ಸರ್ಕಾರಿ ಶಾಲೆಗಳು ಅಸ್ತಿತ್ವ ಉಳಿಸಿಕೊಳ್ಳುವುದೇ ಕಷ್ಟಸಾಧ್ಯವಾಗಿದೆ. ಇಂತಹ ಸನ್ನಿವೇಶದಲ್ಲಿ ಸಾರ್ವಜನಿಕರಿಂದ ಅಭಿವೃದ್ಧಿ ಕಾರ್ಯಕ್ರಮ ನಡೆಯುತ್ತಿರುವುದು ಉತ್ತಮ ಬೆಳವಣಿಗೆ, ಕಲಿತ ಶಾಲೆ ಹಾಗೂ ಗುರುಗಳಿಗೆ ನಮನ ಸಲ್ಲಿಸುವ ನಿಟ್ಟಿನಲ್ಲಿ ಗುರುವಂದನಾ ಕಾರ್ಯಕ್ರಮಗಳು ಮನ್ನಲೆಗೆ ಬಂದಿವೆ. ಶಾಲೆಯಲ್ಲಿ ಓದಿದ ಮಾಜಿ ವಿದ್ಯಾರ್ಥಿಗಳನ್ನು ಗುರ್ತಿಸುವುದು, ಅವರಿಂದ ಶಾಲೆಗೆ ಸಹಕಾರ ಪಡೆಯುವುದು, ಕಲಿಸಿದ ಶಿಕ್ಷಕರನ್ನು ಸ್ಮರಿಸುವುದು ಎಲ್ಲರಲ್ಲಿ ಧನ್ಯತಾಭಾವ ಮೂಡಿಸುವುದು ಸಕಾರಾತ್ಮಕ ಬೆಳವಣಿಗೆಯಾಗಿದೆ ಎಂದರು.

ಮುಖ್ಯ ಶಿಕ್ಷಕ ಅಜಗೊಂಡರ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಶ್ರೀಮತಿ ವೀಣಾ ಪ್ರಕಾಶ, ನೀಲಕಂಠಪ್ಪ ಪಾಸಿ, ಗದಿಗೆಪ್ಪ ಲಮಾಣಿ, ಚನ್ನಬಸಪ್ಪ ದಾಸರ, ಸುಭಾಸ ಮಣ್ಣಪ್ಪನವರ, ಮಾರುತಿ ಫಾಸಿ, ರವಿ ಬ್ಯಾಡಗಿ, ಸೋಮಶೇಖರ ಬಾಸೂರ, ಮಹದೇವಪ್ಪ ಬಿಸ್ಟೆಂಡರ, ಜಗದೀಶ ದೇಸಾಯಿ, ನಿಂಗಪ್ಪ ಹಿರೇಹಳ್ಳಿ, ವೀರಭದ್ರಗೌಡ ಪಾಟೀಲ, ಮಾರುತಿ ಕಾಳಪ್ಪನವರ, ಮಲ್ಲಿಕಾರ್ಜುನ ಮಲ್ಲಮ್ಮನವರ, ಎಂ.ಎನ್. ದಂಡಗಿ, ಎನ್.ಎಫ್. ಹರಿಜನ, ನಾಗಣ್ಣ ಬೆಣಗೇರಿ, ಹನುಮಗೌಡ್ರು ಹುಡೇದ, ನಾಗಪ್ಪ ಅಸುಂಡಿ, ಕಾಂತೇಶ ಬಾರಂಗಿ, ಶೇಖಣ್ಣ ಸರ್ವಂದ ಉಪಸ್ಥಿತರಿದ್ದರು. ಶ್ರೀನಿವಾಸ ಕರ್ನೂಲ ಕಾರ್ಯಕ್ರಮ ನಿರ್ವಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮತದಾರರ ಹಕ್ಕುಗಳ ರಕ್ಷಣೆಗೆ ಜಾಗೃತಿ ಅಗತ್ಯ
ಕನಕಗಿರಿಯಲ್ಲಿ ನಿಲ್ಲದ ಕಳ್ಳತನ