ಕನ್ನಡಪ್ರಭ ವಾರ್ತೆ ಇಂಡಿ :
ತಾಲೂಕಿನ ಹೊರ್ತಿ ಗ್ರಾಮದ ರೈತ ಮಾಳಪ್ಪ ಸೊನಕನಹಳ್ಳಿ ಅವರ 6 ಎಕರೆ ಜಮೀನಿನಲ್ಲಿ ಒಣಗುತ್ತಿರುವ ತೊಗರಿ ಬೆಳೆಯನ್ನು ಸಚಿವರು ಹಾಗೂ ಅಧಿಕಾರಿಗಳು ವೀಕ್ಷಿಸಿದರು. ಈ ವೇಳೆ ರೈತರ ಸಮಸ್ಯೆಯನ್ನು ಆಲಿಸಿದ ಸಚಿವರು, ರೈತರ ಕಷ್ಟ-ನಷ್ಟಗಳನ್ನು ತಿಳಿದುಕೊಳ್ಳಲು ಜಿಲ್ಲೆಯಾದ್ಯಂತ ಪ್ರವಾಸ ಕೈಗೊಳ್ಳಲಾಗಿದೆ. ಕೃಷಿ ಹಾಗೂ ತೋಟಗಾರಿಕೆ ಇಲಾಖೆಯ ಅಧಿಕಾರಿಗಳಿಗೆ ವೈಜ್ಞಾನಿಕ ವರದಿ ಸಿದ್ಧಪಡಿಸಲು ಈಗಾಗಲೇ ಸೂಚನೆ ನೀಡಲಾಗಿದೆ. ಈ ಸಮಗ್ರ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿ, ರೈತರಿಗೆ ಸೂಕ್ತ ಪರಿಹಾರ ದೊರಕಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.ಶೇಕಡಾ ನೂರರಷ್ಟು ಹಾನಿ
ಇಂಡಿ ತಾಲೂಕಿನಲ್ಲಿ ಶೇ.100 ರಷ್ಟು ಬೆಳೆಗಳು ಹಾನಿಗೀಡಾಗಿವೆ. ಕಳೆದ ವಾರ ಕೆಲ ಕಡೆ ಭೇಟಿ ನೀಡಿದ ವೇಳೆ ಅಲ್ಲಿಯ ಬೆಳೆಗಳು ಶೇ.80ರಷ್ಟು ಹಾಳಾಗಿದ್ದವು. ಈಗ ಶೇ.20 ರಷ್ಟು ಹಾನಿಯಾಗಿವೆ. ಹಾಗಾಗಿ, ರೈತರು ಬೆಳೆದ ಬೆಳೆಗಳು ಸಂಪೂರ್ಣ ಹಾನಿಗೀಡಾಗಿವೆ ಎಂದು ಸಚಿವರು ತಿಳಿಸಿದರು.ರೈತರ ಸಮಸ್ಯೆಯನ್ನು ಖುದ್ದಾಗಿ ಅನುಭವಿಸಿದೆ. ಅವರೆಲ್ಲ ತೀವ್ರ ಸಂಕಷ್ಟದಲ್ಲಿದ್ದಾರೆ. ಈ ಸತ್ಯ ಅರಿತಿರುವ ನಮ್ಮ ಸರ್ಕಾರ ರೈತರ ನೆರವಿಗೆ ಬರಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ತಿಳಿಸಿದರು.
ಕೋಟ್ಇಂಡಿ ತಾಲೂಕಿನಲ್ಲಿ 42 ಸಾವಿರ ರೈತರು ಬೆಳೆ ವಿಮೆ ನೋಂದಣಿ ಮಾಡಿಸಿಕೊಂಡಿದ್ದಾರೆ. ಜಿಲ್ಲೆಯ ಹಲವು ತಾಲೂಕುಗಳಲ್ಲಿ ಕನಿಷ್ಠ ಪ್ರಮಾಣದ ಬಿತ್ತನೆಯಾಗಿದ್ದು, ಮುಂಗಾರು ಮಳೆಯ ಸಕಾಲದಲ್ಲಿ ಬಾರದೇ ಇರುವುದರಿಂದ ರೈತರು ತೀವ್ರ ಸಮಸ್ಯೆಯಲ್ಲಿದ್ದಾರೆ. ಕೃಷಿ ಜಮೀನುಗಳಿಗೆ ನೇರ ಭೇಟಿ ನೀಡಿ ಬೆಳೆ ಬೆಳವಣಿಗೆ ನೈಜ ಚಿತ್ರಣ ಪಡೆಯುವುದರ ಜೊತೆಗೆ, ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೇವಿನ ಲಭ್ಯತೆಯ ಕುರಿತು ಪರಿಶೀಲಿಸಲಾಗುತ್ತಿದೆ.ಎಂ.ಬಿ.ಪಾಟೀಲ, ಜಿಲ್ಲಾ ಉಸ್ತುವಾರಿ ಸಚಿವರು