ಕುರುಗೋಡು: ಮಹಿಳೆಯರು ಸಮಾಜದ ಮುಖ್ಯವಾಹಿನಿಗೆ ಬರಲು ಪ್ರೇರೇಪಿಸಿದ್ದು, ಭಕ್ತಿ ಮತ್ತು ಧಾರ್ಮಿಕ ಚಳವಳಿ ಎಂದು ಕೊಟ್ಟೂರುಸ್ವಾಮಿ ಸಂಸ್ಥಾನ ಮಠದ ಪೀಠಾಧಿಪತಿ ಬಸವಲಿಂಗ ಮಹಾಸ್ವಾಮಿ ಹೇಳಿದರು.ಇಲ್ಲಿನ ಪಟ್ಟಣದ ಕೊಟ್ಟೂರು ಸ್ವಾಮಿ ಶಾಖಾ ಸಂಸ್ಥಾನ ಮಠದಲ್ಲಿ ದೇವಿಪುರಾಣ ಮಂಗಲ ಹಾಗೂ ೧೦೦೧ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮದಲ್ಲಿ ಅಂಗವಾಗಿ ಭಾನುವಾರ ಆಯೋಜಿಸಿದ್ದ ಧರ್ಮಸಭೆಯ ಸಾನ್ನಿಧ್ಯವಹಿಸಿ ಅವರು ಆಶೀರ್ವಚನ ನೀಡಿದರು.
ಕೊಟ್ಟೂರು ಸ್ವಾಮಿ ಮಠ ಜಾತಿ, ಮತ, ಪಂಥಕ್ಕೆ ಸೀಮಿತವಾಗಿಲ್ಲ. ಎಲ್ಲ ಸಮಾಜದವರನ್ನು ಒಂದೇ ದೃಷ್ಟಿಕೋನದಲ್ಲಿ ನೋಡುತ್ತಿದೆ. ಅನ್ನ ಮತ್ತು ಅಕ್ಷರ ದಾಸೋಹ ನೀಡುವ ಕಾಯಕದಲ್ಲಿ ಶ್ರೀಮಠ ತೊಡಗಿಸಿಕೊಂಡಿದೆ ಎಂದರು.
ಶ್ರೀಮಠದ ಪೀಠಾಧಿಪತಿ ನಿರಂಜನ ಪ್ರಭು ಮಹಾಸ್ವಾಮಿಗಳು ಮಾತನಾಡಿ, ದೇವಿಪುರಾಣ ಶ್ರವಣ ಮಾಡಿದವರು ತಮ್ಮಲ್ಲಿರುವ ತಾಮಸಗುಣಗಳನ್ನು ಕಳೆದು ಸಾತ್ವಿಕಗುಣಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ಆಧ್ಯಾತ್ಮಿಕ ಸಂಪತ್ತು ಹೊಂದಿರುವ ನಮ್ಮ ನಾಡು ವಿಶ್ವದಲ್ಲಿ ಶ್ರೇಷ್ಠ ಸ್ಥಾನ ಪಡೆದಿದೆ. ಜನ್ಮ ನೀಡಿದ ತಂದೆ ತಾಯಿಯನ್ನು ದೇವರು ಎಂದು ಭಕ್ತಿಯಿಂದ ಪೂಜಿಸುವ ಶ್ರೇಷ್ಟನಾಡು ನಮ್ಮದು ಎಂದು ಬಣ್ಣಿಸಿದರು.
ಶ್ರೀಧರಗಡ್ಡೆಯ ಮರಿಕೊಟ್ಟೂರು ದೇಶಿಕರು, ಶಾಸಕ ಜೆಎನ್. ಗಣೇಶ್, ಪುರಸಭೆ ಅಧ್ಯಕ್ಷ ಟಿ.ಶೇಖಣ್ಣ, ಉಪಾಧ್ಯಕ್ಷ ಚನ್ನಪಟ್ಟಣ ಮಲ್ಲಿಕಾರ್ಜುನ ಮತ್ತು ಅಖಿಲ ಭಾರತ ವೀರಶೈವ ಮಹಾಸಭಾ ತಾಲ್ಲೂಕು ಘಟಕದ ಅಧ್ಯಕ್ಷ ರ್ವಿ ಶರಣಬಸವ ಹಾಗೂ ಮಠದ ಸೇವ ಸದಸ್ಯರಾದ ಎಸ್.ಟಿ.ಎಂ. ಸದಾಶಿವಯ್ಯ ಸ್ವಾಮಿ, ಟಿ.ಮಲ್ಲೇಶಪ್ಪ, ಸಿಂದಗಿ ಗವಿಸಿದ್ದಪ್ಪ, ಚಾನಾನು ಆನಂದ, ಚಾನಾಳು ಅಂಬರೇಶ, ಚಾಮ್ಲಿರ್ರಿಸ್ವಾಮಿ, ಚಾನಾಳು ಅಭಿಷೇಕ್, ಟಿ.ಸುರೇಶಪ್ಪ ಇದ್ದರು.
ಕುರುಗೋಡು ಪಟ್ಟಣದ ಕೊಟ್ಟೂರು ಸ್ವಾಮಿ ಶಾಖಾ ವಿರಕ್ತ ಮಠದಲ್ಲಿ ದೇವಿಪುರಾಣ ಮಂಗಲ ಮಹೋತ್ಸವ ಅಂಗವಾಗಿ ಸುಮಂಗಲೆಯರಿಗೆ ಹುಡಿತುಂಬುವ ಕಾರ್ಯಕ್ರಮ ಜರುಗಿತು.