ಶಿವಮೊಗ್ಗ: ಕಾಶ್ಮೀರದ ಪಹಲ್ಗಾಂನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಮೃತಪಟ್ಟ ಮಂಜುನಾಥ್ ರಾವ್ ಅವರ ಮನೆಗೆ ದೂರದೂರಿನಿಂದ 103 ವರ್ಷದ ವೃದ್ಧೆ ಆಗಮಿಸಿ, ಸಂತ್ರಸ್ತ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದ ಹೃದಯ ತುಂಬಿದ ಘಟನೆ ಮಂಗಳವಾರ ನಡೆಯಿತು.
ಆ ವೃದ್ಧೆ ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ತಿಮ್ಲಾಪುರ ಗ್ರಾಮದವರು. ಇವರ ಹೆಸರು ಶಿವಮ್ಮ. ಇವರು ಎಂದಿನಂತೆ ಟಿವಿ ನೋಡುತ್ತಿದ್ದಾಗ ಪಹಲ್ಗಾಂ ಘಟನೆ ನೋಡಿದರು. ಅಲ್ಲಿ ಮೃತಪಟ್ಟ ಸುದ್ದಿ ಕೇಳಿ ಹೃದಯ ಒಡೆದಂತಾಯಿತು. ಇದರಿಂದ ತೀವ್ರ ದುಃಖಿತರಾದ ವೃದ್ಧೆ ಶಿವಪ್ಪ ಮೃತ ಮಂಜುನಾಥರಾವ್ ಮನೆಗೆ ಭೇಟಿ ನೀಡಬೇಕೆಂಬ ತೀವ್ರ ಆಸೆಯನ್ನು ತಮ್ಮ ಕುಟುಂಬದವರ ಜೊತೆ ವ್ಯಕ್ತಪಡಿಸಿದರು.ವೃದ್ಧೆಯಾಗಿರುವ ತಾಯಿ ಶಿವಮ್ಮ ಅವರ ಆಸೆಯನ್ನು ಈಡೇರಿಸಲು ಮುಂದಾದ ಶಿವರುದ್ರಪ್ಪ ಅವರು ತಾಯಿಯನ್ನು ಮಂಗಳವಾರ ಶಿವಮೊಗ್ಗಕ್ಕೆ ಕರೆ ತಂದರು. ಬಸ್ಸಿನಲ್ಲಿಯೇ ಆಗಮಿಸಿದ ಇವರು ಆಟೋದಲ್ಲಿ ಮೃತ ಮಂಜುನಾಥ್ ರಾವ್ ಅವರ ಮನೆಗೆ ಆಗಮಿಸಿದರು.
ಆವರ ಆಗಮನದಿಂದ ತೀವ್ರ ಆಶ್ಚರ್ಯ ಚಕಿತರಾದವರು ಮೃತ ಮಂಜುನಾಥ್ರಾವ್ ಅವರ ಕುಟುಂಬದವರು. ನಿತ್ಯ ನೂರಾರು ಜನ ಬಂದು ಸಾಂತ್ವನ ಹೇಳುತ್ತಿದ್ದಾರೆ. ಆದರೆ 103 ವರ್ಷದ ವೃದ್ಧೆ ದೂರದೂರಿನಿಂದ ಬಂದ ವಿಚಾರ ಅರಿತ ಮಂಜುನಾಥ್ ರಾವ್ ಪತ್ನಿ ಪಲ್ಲವಿ, ತಾಯಿ ಸುಮತಿ ಭಾವುಕರಾದರು.ವೃದ್ಧೆ ಶಿವಮ್ಮ ಅವರು ಕುಟುಂಬದ ಎಲ್ಲ ಸದಸ್ಯರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದರು. ಶಿವಮ್ಮ ಅವರ ಧೈರ್ಯ ತುಂಬಿದ ಮಾತುಗಳನ್ನು ಕೇಳಿ ಮಂಜುನಾಥ್ ಪತ್ನಿ ಪಲ್ಲವಿ, ಮಂಜುನಾಥ್ ತಾಯಿ ಸುಮತಿ ಕಣ್ಣೀರಾದರು.
ಶತೃ ಪಾಕಿಸ್ತಾನವನ್ನು ಮೋದಿ ಬಿಡಬಾರದು:ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ವೃದ್ಧೆ ಶಿವಮ್ಮ, ಶತ್ರು ದೇಶ ಪಾಕಿಸ್ತಾನವನ್ನು ಬಗ್ಗು ಬಡಿಯಬೇಕು. ಉಗ್ರಗಾಮಿಗಳನ್ನು ಬುಡ ಸಮೇತ ಕಿತ್ತು ಹಾಕಬೇಕು. ಪ್ರಧಾನಿ ನರೇಂದ್ರ ಮೋದಿ ಮತ್ತು ಯೋಗಿ ಆದಿತ್ಯನಾಥ್ ಹಾಗೂ ನಮ್ಮ ಸೈನಿಕರು ಪಾಕಿಸ್ತಾನವನ್ನು ಬಿಡಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇವತ್ತು ಈ ರೀತಿ ಉಗ್ರಗಾಮಿ ಚಟುವಟಿಕೆ ಮಾಡಿದ್ದಾರೆ. ನಾಳೆ ನಮ್ಮ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಮಾಡುತ್ತಾರೆ. ಅದಕ್ಕೆ ಅವಕಾಶ ಮಾಡಿ ಕೊಡಬಾರದು. ಉಗ್ರರು ಪಾಕಿಸ್ತಾನದಲ್ಲಿ ಅಡಗಿರಲಿ, ಇಲ್ಲ ಗಿಡದ ಮರೆಯಲ್ಲಿ ಇರಲಿ ಅವರನ್ನು ಬಿಡಬಾರದು. ಅವರನ್ನು ಶೂಟ್ ಮಾಡಬೇಕು. ನಮಗೆ ಆದ ದುಃಖ ಅವರ ಕುಟುಂಬದವರಿಗೂ ಆಗಬೇಕು. ಅಷ್ಟು ದೂರದಿಂದ ಇದನ್ನೇ ಮಂಜುನಾಥ್ ಕುಟುಂಬಸ್ಥರಿಗೆ ತಿಳಿಸಲು ಧೈರ್ಯ ಕೊಡಲು ಬಂದಿದ್ದೇನೆ ಎಂದರು.ಉಗ್ರರರಿಗೆ ಬೆಂಬಲ ನೀಡುವವರನ್ನೂ ಬಿಡಬೇಡಿ:
ನಮ್ಮ ದೇಶದಲ್ಲಿ ಉಗ್ರರಿಗೆ ಬೆಂಬಲ ನೀಡುವರು ಕಂಡು ಬಂದರೆ ಅವರನ್ನು ಬಿಡಬೇಡಿ. ದೇಶದ ಗಡಿ ಕಾಯುವ ಸೈನಿಕರಿಗೆ ಬಲ ನೀಡಿ ಉಗ್ರರನ್ನು ಸರ್ವನಾಶ ಮಾಡಲೇಬೇಕು ಎಂದು ಹೇಳಿದರು.ಅಜ್ಜಿಯ ಆಶೀರ್ವಾದ ಮರೆಯಲಾಗದು: ಪಲ್ಲವಿ
ನಿಜವಾಗಲೂ ನಮ್ಮ ವಿಳಾಸ ಹುಡುಕಿ ಅಜ್ಜಿ ಬಂದಿರುವುದು ನೋಡಿ ಆಶ್ಚರ್ಯ ಆಯ್ತು. ನಮಗೆ ಧೈರ್ಯ ತುಂಬಿ ಆಶೀರ್ವಾದ ಮಾಡಿರುವುದು ನಿಜಕ್ಕೂ ಖುಷಿ ಕೊಟ್ಟಿದೆ ಎಂದು ಮೃತ ಮಂಜುನಾಥ ರಾವ್ ಪತ್ನಿ ಪಲ್ಲವಿ ತಿಳಿಸಿದರು.
ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ತಿಮ್ಲಾಪುರ ಗ್ರಾಮದ ಶಿವಮ್ಮ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಅಜ್ಜಿ ಬಂದು ನೀನು ಧೈರ್ಯ ತೆಗೆದುಕೊಳ್ಳಮ್ಮ, ದೇಶಕ್ಕೆಲ್ಲ ಒಳ್ಳೇದಾಗುತ್ತದೆ. ನೀನು ಧೈರ್ಯ ಕಳೆದುಕೊಳ್ಳಬಾರದು ಎಂದು ಒಳ್ಳೆಯ ಮಾತನ್ನು ಹೇಳಿದ್ದಾರೆ. 103 ವರ್ಷದ ಅಜ್ಜಿಗೆ ಇಷ್ಟೊಂದು ರೋಷಾವೇಶ ಇರಬೇಕಾದರೆ, ನಮ್ಮ ಸೈನಿಕರಿಗೂ ಇಷ್ಟೇ ಇರುತ್ತದೆ. ದೇವರು ನನ್ನ ಆಯಸ್ಸನ್ನು ಕೂಡ ಸೇನೆಯವರಿಗೆ ಕೊಡಲಿ ಎಂದು ಕೇಳಿಕೊಳ್ಳುತ್ತೇನೆ ಎಂದು ದು:ಖಿತರಾದರು.ಅಜ್ಜಿ ಹೇಳಿದಂತೆ ಸೇನೆಯವರಿಗೆ ದೇವರು ಆಯುಷ್ಯ, ಆರೋಗ್ಯ ಕೊಟ್ಟು ಉಗ್ರರ ವಿರುದ್ಧ ಹೋರಾಡುವ ಶಕ್ತಿ ಕೊಡಲಿ ಎಂದರು.
ಅಜ್ಜಿಯ ಕಳಕಳಿಯ ಮನಸ್ಥಿತಿ
ಎಲ್ಲರಲ್ಲೂ ಬರಲಿ: ಸುಮತಿಅಜ್ಜಿಯ ನೋಡಿ ತುಂಬಾ ಹೆಮ್ಮೆ ಅನಿಸುತ್ತದೆ. ಅಜ್ಜಿಯನ್ನು ನೋಡಿದರೆ ಹೃದಯದಲ್ಲಿ ದೇಶ ಪ್ರೇಮ ಎಷ್ಟಿದೆ ಎಂದು ಗೊತ್ತಾಗುತ್ತದೆ. ನಮ್ಮಲ್ಲೂ ದೇಶ ಪ್ರೇಮ ಇದೆ. ಆದರೆ ನಮಗಿಂತ ಹೆಚ್ಚಿನ ದೇಶ ಪ್ರೇಮ ಅಜ್ಜಿಯಲ್ಲಿದೆ ಎಂದು ಮೃತ ಮಂಜುನಾಥ್ ರಾವ್ ತಾಯಿ ಸುಮತಿ ಹೇಳಿದರು.
ಅಜ್ಜಿ ದೂರದೂರಿನಿಂದ ನಮಗೆ ಆಶೀರ್ವಾದ ಮಾಡಲು ಬಂದಿದ್ದಾರೆ. ಈ ಮೊದಲು ಸ್ವಾಮೀಜಿ ಒಬ್ಬರು ಕೂಡ ಬಂದಿದ್ದರು. ಹೀಗೆ ಮಹನೀಯರು, ಅಜ್ಜಿ ರೀತಿ ಎಲ್ಲರೂ ಬಂದು ಆಶೀರ್ವಾದ ಮಾಡುತ್ತಿದ್ದಾರೆ. ಅಮಾಯಕರನ್ನು ಈ ರೀತಿ ಕೊಲೆ ಮಾಡಬಾರದು, ದೇವರು ಉಗ್ರರಿಗೆ ಶಿಕ್ಷೆ ಕೊಟ್ಟೇ ಕೊಡುತ್ತಾನೆ. ನಮ್ಮ ದೇಶಕ್ಕೆ ಒಳ್ಳೆದಾಗ್ಬೇಕು ಎಲ್ಲರಿಗೂ ಒಳ್ಳೆಯದಾಗಬೇಕು ಎಂಬ ಅಜ್ಜಿಯ ಕಳಕಳಿಯ ಮನಸ್ಥಿತಿ ಎಲ್ಲರಲ್ಲೂ ಬರಬೇಕು ಎಂದರು.