ಕನ್ನಡಪ್ರಭ ವಾರ್ತೆ ಗುಳೇದಗುಡ್ಡ

ಸಂಶೋಧನಾ ಕ್ಷೇತ್ರ ಇಂದು ಬಹಳ ವಿಸ್ತಾರವಾಗುತ್ತ ಸಾಗಿದೆ. ಹೊಸ ಹೊಸ ಆವಿಷ್ಕಾರಗಳಿಂದ ಮಾನವನ ಜೀವನ ಶೈಲಿ ಬದಲಾಗುತ್ತಿದೆ. ವರ್ತಮಾನದ ಸಮಸ್ಯೆಗಳತ್ತ ವಿದ್ಯಾರ್ಥಿಗಳು ಹೆಚ್ಚಿನ ಅಸಕ್ತಿ ವಹಿಸಿ ಸಂಶೋಧನೆ ಮಾಡಬೇಕೆಂದು ಬಾಗಲಕೋಟೆ ವಿಶ್ವವಿದ್ಯಾಲಯದ ಸಂಶೋಧನಾ ಮಾರ್ಗದರ್ಶಕ ಡಾ. ಗಿರೀಶ ಕುಮಾರ ಹೇಳಿದರು.

ಸ್ಥಳೀಯ ಭಂಡಾರಿ ಮತ್ತು ರಾಠಿ ಪದವಿ ಮಹಾವಿದ್ಯಾಲಯದ ಐಕ್ಯೂಎಸಿ ವಿಭಾಗ ಮತ್ತು ಕಲಾ ವೇದಿಕೆಯ ಸಂಯುಕ್ತಾಶ್ರಯದಲ್ಲಿ ಬುಧವಾರ ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿದ್ಯಾರ್ಥಿಗಳಿಗೆ ಒಂದು ದಿನದ ಸಂಶೋಧನಾ ಕಾರ್ಯಗಾರ ಮತ್ತು ಪದವಿ ವಿದ್ಯಾರ್ಥಿಗಳ ಸಂಶೋಧನಾ ಪ್ರಾಜೆಕ್ಟ್ ತಯಾರಿಸುವ ಸಂಶೋಧನಾ ವಿಧಾನಗಳು ವಿಷಯ ಕುರಿತು ಮಾತನಾಡಿದರು.

ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಸಂಶೋಧನಾ ವಿಷಯ ಆಯ್ಕೆಮಾಡಿಕೊಳ್ಳುವಾಗ ವರ್ತಮಾನದ ಮಾರುಕಟ್ಟೆ ವ್ಯವಸ್ಥೆ ಮತ್ತು ಹಣಕಾಸು ಕೇಂದ್ರಿತ ವಿಷಯ ಆಯ್ದುಕೊಂಡು, ಅಲ್ಲಿನ ಅರ್ಥವ್ಯವಸ್ಥೆಯನ್ನು ಅನುಲಕ್ಷಿಸಿ ಅಧ್ಯಯನ ಕೈಗೊಂಡು ಪ್ರಾಜೆಕ್ಟ್ ಗಳನ್ನು ತಯಾರಿಸಿದಾಗ ಸಂಶೋಧನೆಗೆ ಮೌಲ್ಯ ಬರುತ್ತದೆ ಎಂದು ಅಭಿಪ್ರಾಯಪಟ್ಟರು.ಕಲಾ ವೇದಿಕ ಮುಖ್ಯಸ್ಥ ಡಾ. ಸಣ್ಣವೀರಣ್ಣ ದೊಡ್ಡಮನಿ ಮಾತನಾಡಿ, ಕ್ಷೇತ್ರಕಾರ್ಯ ಸಂಶೋಧನೆಗೆ ತಾಯಿ ಇದ್ದಂತೆ. ವಿದ್ಯಾರ್ಥಿಗಳಿಗೆ ಪದವಿ ಅಂತಿಮ ವರ್ಷದಲ್ಲಿರುವಾಗಲೇ ಈ ಸಂಶೋಧನಾ ಜ್ಞಾನದ ಶಿಸ್ತು ರೂಢಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಸಮರ್ಪಕವಾಗಿ ವಿಷಯ ಸಂಗ್ರಹಿಸಿ ಸಂಶೋಧನೆಗೆ ಹೊಸ ವಿನ್ಯಾಸ ಕೊಡಬೇಕು ಎಂದರು.

ಐಕ್ಯೂಎಸಿ ನಿರ್ದೇಶಕ, ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ಎಂ. ಎಸ್. ಪಾಟೀಲ ಅಧ್ಯಕ್ಷತೆವಹಿಸಿದ್ದರು. ಡಾ. ಬಸವರಾಜ ನಾಯಕ, ಡಾ ಸಂತೋಷ ಕಾಳಣ್ಣವರ, ಡಾ. ಬಾಲು ಮಾದರ, ಡಾ. ಎಸ್. ಎಚ್. ಹಾವರಿಗಿ, ಪ್ರೊ. ಮಾರುತಿ ಬೋಳಿ, ಪ್ರೊ. ಕುಂಟೋಜಿ ಉಪಸ್ಥಿತರಿದ್ದರು.


ಸ್ಥಳೀಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಬಾದಾಮಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಡಾ. ಸಣ್ಣಸಕ್ರಗೌಡರ ಮಾರ್ಗದರ್ಶನದಲ್ಲಿ 30 ವಿದ್ಯಾರ್ಥಿಗಳು ಆಯ್ಕೆಯಾಗಿ ಕಾರ್ಯಾಗಾರದಲ್ಲಿ ಉಪಸ್ಥಿತರಿದ್ದರು.