ಸೋಲಾಪುರದಲ್ಲಿ 10ನೇ ಹೊರನಾಡು ಮಹಾಮೇಳ

KannadaprabhaNewsNetwork |  
Published : Jun 17, 2026, 02:15 AM IST
ಕರ್ನಾಟಕ ವಿದ್ಯಾವರ್ಧಕ ಸಂಘದ ಸಂಘದ ಕಾರ್ಯಾಧ್ಯಕ್ಷ ಬಸವಪ್ರಭು ಹೊಸಕೇರಿ ಮಾತನಾಡಿದರು. | Kannada Prabha

ಸಾರಾಂಶ

ಮಹಾರಾಷ್ಟ್ರದ ಸೋಲಾಪುರದ ಕನ್ನಡ ಸಂಘಗಳ ಸಹಯೋಗದಲ್ಲಿ ಜೂ. 20 ಹಾಗೂ 21ರಂದು ಸೋಲಾಪುರದಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘವು ಅಖಿಲ ಭಾರತ ಹೊರನಾಡ ಕನ್ನಡ ಸಂಘಗಳ ಪ್ರತಿನಿಧಿಗಳ 10ನೇ ಮಹಾಮೇಳ ಆಯೋಜಿಸಿದ್ದು ಕರ್ನಾಟಕ ಸೇರಿದಂತೆ ಆರು ರಾಜ್ಯಗಳಿಂದ 600 ಕನ್ನಡಿಗರು ಭಾಗವಹಿಸಲಿದ್ದಾರೆ.

ಧಾರವಾಡ:

ಮಹಾರಾಷ್ಟ್ರದ ಸೋಲಾಪುರದ ಕನ್ನಡ ಸಂಘಗಳ ಸಹಯೋಗದಲ್ಲಿ ಜೂ. 20 ಹಾಗೂ 21ರಂದು ಸೋಲಾಪುರದಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘವು ಅಖಿಲ ಭಾರತ ಹೊರನಾಡ ಕನ್ನಡ ಸಂಘಗಳ ಪ್ರತಿನಿಧಿಗಳ 10ನೇ ಮಹಾಮೇಳ ಆಯೋಜಿಸಿದೆ.

ಈ ಕುರಿತು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಂಘದ ಕಾರ್ಯಾಧ್ಯಕ್ಷ ಬಸವಪ್ರಭು ಹೊಸಕೇರಿ, ಕರ್ನಾಟಕ ಸೇರಿದಂತೆ ಆರು ರಾಜ್ಯಗಳಿಂದ 600 ಕನ್ನಡಿಗರು ಭಾಗವಹಿಸುವ ಈ ಮೇಳವನ್ನು ಜೂ. 20ರಂದು ಬೆಳಗ್ಗೆ 10ಕ್ಕೆ ಸೋಲಾಪುರದ ಕಿರೀಟೇಶ್ವರ ಮಠದ ಸ್ವಾಮಿನಾಥ ಸ್ವಾಮೀಜಿ ಸಾನ್ನಿಧ್ಯದಲ್ಲಿ ಮಾಜಿ ಕಾನೂನು ಸಚಿವ ಎಚ್‌.ಕೆ. ಪಾಟೀಲ ಉದ್ಘಾಟಿಸುವರು. ಅಕ್ಕಲಕೋಟ ಶಾಸಕ ಸಚಿವ ಕಲ್ಯಾಣಶೆಟ್ಟಿ ಗ್ರಂಥ ಲೋಕಾರ್ಪಣೆ, ಅತಿಥಿಗಳಾಗಿ ಸೋಲಾಪುರ ಎಸ್ಪಿ ಅತುಲ್‌ ಕುಲಕರ್ಣಿ ಭಾಗವಹಿಸುತ್ತಾರೆ. ಜೂ. 21ರಂಜು ಸಂಜೆ 4.30ಕ್ಕೆ ಸಮಾರೋಪ ಭಾಷಣವನ್ನುಆಳಂದ ಶಾಸಕ ಬಿ.ಆರ್‌. ಪಾಟೀಲ ಮಾಡುವರು. ಮಹಾರಾಷ್ಟ್ರ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ವಿಶ್ವನಾಥ ಚಾಕೋತೆ ಮುಖ್ಯ ಅತಿಥಿಗಳಾಗಿರುತ್ತಾರೆ ಎಂದರು.

ಮೇಳದಲ್ಲೇನಿದೆ?:

ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಮಾತನಾಡಿ, ಮೇಳದ ಮೊದಲ ದಿನ ನಡೆಯುವ ಎರಡು ಗೋಷ್ಠಿಯಲ್ಲಿ ವಚನಕಾರರು ಮತ್ತು ಸಮಕಾಲೀನತೆ, ಸೊನ್ನಲಗಿ ಸಿದ್ಧರಾಮ, ಮರಾಠಿ ಸಾಹಿತ್ಯಕ್ಕೆ ಬೇಂದ್ರೆಯವರ ಕೊಡುಗೆ, ಕನ್ನಡಕ್ಕೆ ಜಯದೇವಿತಾಯಿ ಲಿಗಾಡೆ ಕೊಡುಗೆ ಕುರಿತು ಚಿಂತಕರು ವಿಷಯ ಮಂಡನೆ ಮಾಡುವರು. ಅಂದು ಸಂಜೆ ಗೌರವ ಸನ್ಮಾನ, ವಚನ ನೃತ್ಯ, ಜನಪದ, ಲಾವಣಿ ನೃತ್ಯ, ಹಾಸ್ಯ ಸಂಜೆ ಅಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಎರಡನೆಯ ದಿನದ ಗೋಷ್ಠಿಯಲ್ಲಿ ಹೊರನಾಡು ಕನ್ನಡಿಗರ ಸುಖ-ದುಃಖ, ಕನ್ನಡ ಮರಾಠಿ ಕೊಡುಕೊಳ್ಳುವಿಕೆ, ಸೋಲಾಪುರದ ಸಾಂಸ್ಕೃತಿಕ ಪರಂಪರೆ ಕುರಿತು ಚಿಂತಕರು ವಿಷಯ ಮಂಡಿಸುವರು. ಕವಿ ಮಿಲನ ಗೋಷ್ಠಿಯಲ್ಲಿ ಹತ್ತುಕ್ಕೂ ಹೆಚ್ಚು ಕವಿಗಳು ಕವಿತೆ ವಾಚನ ಮಾಡುವರು. ಸಂಜೆ ಕನ್ನಡ ಭಕ್ತಿಗೀತೆಗಳು, ವಚನ ನೃತ್ಯ, ಅಕ್ಕಮಹಾದೇವಿ ನಾಟಕ, ಕೋಲಾಟ, ಯೋಗ ನೃತ್ಯ ಅಂತಹ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿವೆ ಎಂದು ಮಾಹಿತಿ ನೀಡಿದರು.

ಈ ಮೇಳದ ಯಶಸ್ವಿಗೆ ಸೋಲಾಪುರದ ಸೊನ್ನಲಗಿ ಸಿದ್ಧರಾಮ ದೇವಸ್ಥಾನ ಟ್ರಸ್ಟ್, ಕಿರೀಟೇಶ್ವರ ಮಠ, ಹೋಟಗಿ ಮಠ, ಎಂಐಟಿ ವಿವಿ, ವಕೀಲರ ಸಂಘ, ಅಕ್ಕನ ಬಳಗ ಮಹಿಳಾ ಮಂಡಳ, ಕನ್ನಡ ಸಾಹಿತ್ಯ ಪರಿಷತ್ ಸೇರಿದಂತೆ 20ಕ್ಕೂ ಹೆಚ್ಚು ಸಂಘ-ಸಂಸ್ಥೆಗಳು ಕೈ ಜೋಡಿಸಿವೆ. ಸೋಲಾಪೂರದಲ್ಲಿ ಬಹು ಸಂಖ್ಯೆಯಲ್ಲಿ ಕನ್ನಡಿಗರಿದ್ದು ಅಲ್ಲಿಯ ಕನ್ನಡ ಶಾಲೆ ಹಾಗೂ ಕನ್ನಡ ಭಾಷೆ ಬೆಳೆಸಲು ಈ ಸಮ್ಮೇಳನ ಪೂರಕ ಕಾರ್ಯಗಳನ್ನು ಮಾಡಲಿದೆ ಎಂದು ಹಲಗತ್ತಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಡಾ.ಸಂಜೀವ ಕುಲಕರ್ಣಿ, ಸತೀಶ ತುರಮರಿ, ಶಂಕರ ಕುಂಬಿ, ಶಿವಾನಂದ ಭಾವಿಕಟ್ಟಿ, ವೀರಣ್ಣ ಒಡ್ಡೀನ, ಗುರು ಹಿರೇಮಠ, ವಿಶ್ವೇಶ್ವರಿ ಹಿರೇಮಠ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಯುವ ಕಾಂಗ್ರೆಸ್ ಜನರ ಧ್ವನಿಯಾಗಿ ಕಾರ್ಯ ನಿರ್ವಹಿಸಲಿ
ನೀರಿನ ಸಂಗ್ರಹ, ಮೂಲಗಳ ಸ್ವಚ್ಛತೆಗೆ ಕ್ರಮ ಕೈಗೊಳ್ಳಿ