ಉಪ್ಪಿನಬೇಟೇರಿ ಗ್ರಾಮದಲ್ಲಿ ವಿದ್ಯುತ್ ಸರಬರಾಜು ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ, ಗ್ರಾಮದ ಯಾದವಾಡ ರಸ್ತೆಗೆ ಹೊಂದಿಕೊಂಡು ಬರುವ ₹20.74 ಕೋಟಿ ಮೊತ್ತದ 110 ಕೆವಿ ವಿದ್ಯುತ್ ವಿತರಣಾ ಕೇಂದ್ರದ ನಿರ್ಮಾಣ ಕಾಮಗಾರಿಗೆ ಶಾಸಕ ವಿನಯ ಕುಲಕರ್ಣಿ ಭೂಮಿಪೂಜೆ ನೆರವೇರಿಸಿದರು.
ಧಾರವಾಡ: ಉಪ್ಪಿನಬೇಟೇರಿ ಗ್ರಾಮದಲ್ಲಿ ವಿದ್ಯುತ್ ಸರಬರಾಜು ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ, ಗ್ರಾಮದ ಯಾದವಾಡ ರಸ್ತೆಗೆ ಹೊಂದಿಕೊಂಡು ಬರುವ ₹20.74 ಕೋಟಿ ಮೊತ್ತದ 110 ಕೆವಿ ವಿದ್ಯುತ್ ವಿತರಣಾ ಕೇಂದ್ರದ ನಿರ್ಮಾಣ ಕಾಮಗಾರಿಗೆ ಶಾಸಕ ವಿನಯ ಕುಲಕರ್ಣಿ ಭೂಮಿಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ವಿನಯ ಕುಲಕರ್ಣಿ, ವಿದ್ಯಾರ್ಥಿಗಳ ಉನ್ನತ ಶಿಕ್ಷಣ ಹಾಗೂ ಸ್ಥಳೀಯರ ಬಹುದಿನದ ಬೇಡಿಕೆಯಂತೆ ಗುಡ್ಡದ ಕ್ಯಾರಿಯನ್ನು ಮುಚ್ಚಿ ನಾಲ್ಕು ಎಕರೆ ಜಾಗದಲ್ಲಿ ಪದವಿ ಕಾಲೇಜನ್ನು ನಿರ್ಮಿಸಲಾಗುವುದು ಎಂದು ಘೋಷಿಸಿದರು. ಚಿಕ್ಕಲಗುಡ್ಡ ರಸ್ತೆ ಹಾಗೂ ಸೇತುವೆ ನಿರ್ಮಾಣಕ್ಕಾಗಿ ₹9 ಕೋಟಿ ಅನುದಾನ ಮಂಜೂರಾಗಿದೆ. ಎಂಐಎಸ್ ಶಾಲೆ ಮೈದಾನದ ಅಭಿವೃದ್ಧಿಗೆ ₹2 ಕೋಟಿ ಒದಗಿಸಲಾಗಿದೆ. ಎಸ್ಟಿ ಕಾಲನಿಯಲ್ಲಿ ಕಾಂಕ್ರೀಟ್ ರಸ್ತೆ ಮತ್ತು ಗಟಾರ ನಿರ್ಮಾಣಕ್ಕಾಗಿ ₹40 ಲಕ್ಷ ಮೀಸಲಿಡಲಾಗಿದೆ. ಗ್ರಾಮದ ಹೊಸ ಬಸ್ ನಿಲ್ದಾಣದ ಹತ್ತಿರದಿಂದ ಬಸ್ಲಿಂಗಯ್ಯ ಕಾಶೀಮಠ ಮನೆ ವರೆಗೆ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ₹7 ಲಕ್ಷ ಮಂಜೂರಾಗಿದೆ. ವಿರೂಪಾಕ್ಷೇಶ್ವರ ನೂತನ ದೇವಸ್ಥಾನದ ಅಭಿವೃದ್ಧಿಗಾಗಿ ₹1 ಕೋಟಿ ಅನುದಾನ ನೀಡಲಾಗಿದೆ. ಬಿಸಿಎಂ ಹಾಸ್ಟೆಲ್ ಹತ್ತಿರ ಗಟಾರ ನಿರ್ಮಾಣ, ಸೈಬಿನಕೊಪ್ಪ ಗ್ರಾಮದಲ್ಲಿ ಬಸ್ ಶೆಲ್ಟರ್ ನಿರ್ಮಾಣ ಹಾಗೂ ಹಿರೇಹಳ್ಳದ ಸೇತುವೆ ಕಾಮಗಾರಿಗೆ ₹9 ಕೋಟಿ ಅನುದಾನ ಮಂಜೂರಾಗಿರುವುದಾಗಿ ಅವರು ತಿಳಿಸಿದರು.
ಅಂಗನವಾಡಿ ಕಟ್ಟಡ ಉದ್ಘಾಟನೆ:
ಇದೇ ಸಂದರ್ಭದಲ್ಲಿ ಸೈಬಿನಕೊಪ್ಪದಲ್ಲಿ ₹20 ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾದ ಅಂಗನವಾಡಿ ಕಟ್ಟಡ ಉದ್ಘಾಟಿಸಲಾಯಿತು.
ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಅಧ್ಯಕ್ಷೆ ಶಿವಲೀಲಾ ವಿನಯ ಕುಲಕರ್ಣಿ ಇದ್ದರು. ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಅರವಿಂದ ಏಗನಗೌಡರ, ಕಲ್ಲಪ್ಪ ಪುಡಕಲಕಟ್ಟಿ, ಬಶೀರ ಮಾಳಗಿಮಣಿ, ಗಂಗಪ್ಪ ಜವಳಗಿ, ಬಾಬಾ ಮೊಹಿದ್ದೀನ ಚೌಧರಿ, ಮಂಜುನಾಥ ಮಸೂತಿ, ಮಲ್ಲಣ್ಣ ಅಷ್ಟಗಿ, ಅಬ್ದುಲ್ ಖಾದರ, ವೀರಣ್ಣಾ ಪರಾಂಡೆ, ಮಂಜುನಾಥ ಸಂಕಣ್ಣವರ, ಕಲ್ಲಪ್ಪ ಬೊಬ್ಬಿ, ಗಂಗಾಧರ ಕಂದಕೂರ ಮತ್ತಿತರರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.