ಕಡೂರು ಬಸ್ ನಿಲ್ದಾಣದಲ್ಲಿ ರಾಜ್ಯ ಸರ್ಕಾರದ ಪಂಚಗ್ಯಾರಂಟಿಗಳ ಪ್ರಚಾರದ ವಸ್ತು ಪ್ರದರ್ಶನ ಉದ್ಘಾಟನೆ
40 ವರ್ಷಗಳ ಹಿಂದಿನ ಬಸ್ ನಿಲ್ದಾಣದ ಉನ್ನತೀಕರಣಕ್ಕೆ ₹12 ಕೋಟಿ ರು. ಮಂಜೂರಾಗಿದ್ದು. ಶೀಘ್ರದಲ್ಲೇ ಸಚಿವರನ್ನು ಕರೆಸಿ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಶಾಸಕ ಕೆ.ಎಸ್. ಆನಂದ್ ಪ್ರಕಟಿಸಿದರು.
ಶುಕ್ರವಾರ ಕಡೂರು ಬಸ್ ನಿಲ್ದಾಣದಲ್ಲಿ ವಾರ್ತಾ ಇಲಾಖೆಯಿಂದ ಆಯೋಜಿಸಿದ್ದ ರಾಜ್ಯ ಸರ್ಕಾರದ ಪಂಚಗ್ಯಾರಂಟಿಗಳ ಪ್ರಚಾರದ ವಸ್ತು ಪ್ರದರ್ಶನ ಉಧ್ಘಾಟಿಸಿ ಮಾತನಾಡಿದರು. ಅಂದು ಶಕ್ತಿ ಯೋಜನೆ ಚಾಲನೆ ವೇಳೆ ಕೆಎಸ್ ಆರ್ ಟಿಸಿ ಸಿಬ್ಬಂದಿಗೆ ಈ ಸರ್ಕಾರ ಸಂಬಳ ಕೊಡಲು ಆಗುವುದಿಲ್ಲವೆಂಬ ರಾಜಕೀಯ ವಿರೋಧಿಗಳ ಆರೋಪವನ್ನು ಸಿದ್ದರಾಮಯ್ಯ ಸವಾಲಾಗಿ ತೆಗೆದುಕೊಂಡು ಜನರ ಆಶೀರ್ವಾದ ಪಡೆದು ಪಂಚ ಗ್ಯಾರಂಟಿಗಳನ್ನು ಜಾರಿಮಾಡಿ ಜನರ ಮತ್ತು ರಾಜ್ಯದ ಅಭಿವೃದ್ಧಿಗೂ ಆದ್ಯತೆ ನೀಡಿ, ಮಹಿಳೆಯರು ಸ್ವಾವಲಂಬಿಯಾಗಲು ಅನುವು ಮಾಡಿ ಕೊಟ್ಟಿವೆ ಎಂದರು.ಶಕ್ತಿ ಯೋಜನೆ, ಗೃಹಲಕ್ಷ್ಮೀ, ಗೃಹ ಜ್ಯೋತಿ, ಅನ್ನಭಾಗ್ಯ ,ಸೇರಿದಂತೆ ಭಾಗ್ಯಗಳಿಂದ ಜನ ಸಾಮಾನ್ಯರ ಬದುಕು ಹಸನಾಗುವಂತೆ ಮಾಡಿದೆ. ನಮ್ಮ ಕಾಂಗ್ರೆಸ್ ಸರಕಾರ ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿಲ್ಲ.ಸಮಾಜದ ಎಲ್ಲ ವರ್ಗಗಳ ಪರವಾಗಿ ಇದೆ ಎನ್ನುವ ಹೆಮ್ಮೆ ನಮಗಿದೆ. ಅಲ್ಲದೆ ನಮ್ಮ ಸರಕಾರ ಸುಮಾರು 3500 ಅಶ್ವಮೇಧ ಬಸ್ಸುಗಳನ್ನು ಖರೀದಿಸಿ ಗ್ರಾಮೀಣ ಭಾಗಕ್ಕೂ ಸಾರಿಗೆ ಸಂಪರ್ಕ ಕಲ್ಪಿಸಿದೆ.
ಗ್ಯಾರಂಟಿ ಯೋಜನೆಗಳ ಜಿಲ್ಲಾಧ್ಯಕ್ಷ ಎಂ.ಸಿ. ಶಿವಾನಂದ ಸ್ವಾಮಿ ಮಾತನಾಡಿ, ನಮ್ಮ ನಾಯಕ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಪಂಚ ಗ್ಯಾರಂಟಿಗಳ ಯಶಸ್ವಿಯನ್ನು ಪ್ರಚಾರ ಮಾಡುವ ಮೂಲಕ ನಾವು ಜನರನ್ನು ತಲುಪುತಿದ್ದೇವೆ ಎಂದರು,
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ. ಅಂಶುಮಂತ್, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಆಸಂದಿ ಕಲ್ಲೇಶ್, ದಾಸಯ್ಯನಗುತ್ತಿ ಚಂದ್ರಪ್ಪ, ಜಿ. ಅಶೋಕ್ , ವಾರ್ತಾಇಲಾಖೆ ಅಧಿಕಾರಿ ಮಂಜೇಗೌಡ, ಕೆ ಎಸ್ ಆರ್ ಟಿಸಿ ಡಿಪೋ ವ್ಯವಸ್ಥಾಪಕರಾದ ಅರುಣಾ, ಬಸ್ ನಿಲ್ಧಾಣದ ಅಧಿಕಾರಿ ಗಿರೀಶ್ ಮತ್ತಿತರರು ಹಾಜರಿದ್ದರು. 27 ಕೆಕೆಡಿಯು1 ಕಡೂರು ಪಟ್ಟಣದ ಕೆ.ಎಸ್.ಆರ್.ಟಿಸಿ ಬಸ್ ನಿಲ್ದಾಣದಲ್ಲಿ ಪಂಚ ಗ್ಯಾರಂಟಿಗಳ ವಸ್ತುಪ್ರದರ್ಶ ನವನ್ನು ಶಾಸಕ ಕೆ.ಎಸ್. ಆನಂದ್ ಉದ್ಘಾಟಿಸಿದರು.