ನರಗುಂದ: ಕಳೆದ ಹಲವು ದಿನಗಳಿಂದ ತಾಲೂಕಿನಲ್ಲಿ ನಿರಂತರ ಮಳೆ ಸುರಿಯುತ್ತಿರುವುದರಿಂದ ಜನರು ಈಗಾಗಲೇ ಹೈರಾಣ ಆಗಿ ಹೋಗಿದ್ದಾರೆ, ಇಂಥಾ ಸಮಯದಲ್ಲಿ ಮಲಪ್ರಭಾ ಜಲಾಶಯದಿಂದ ನದಿಗೆ 12 ಸಾವಿರ ಕ್ಯೂಸೆಕ್ ನೀರು ಮಲಪ್ರಭಾ ನದಿಗೆ ಬಿಟ್ಟಿದ್ದರಿಂದ ನದಿ ಪಾತ್ರದ ಜನತೆ ಪ್ರವಾಹದ ಭೀತಿಯಲ್ಲಿದ್ದಾರೆ.
ಗ್ರಾಮಸ್ಥರ ಜೊತೆ ಸಭೆ: ಜಲಾಶಯ ಸಂಪೂರ್ಣ ಭರ್ತಿಯಾಗಿದೆ. ಇದೇ ರೀತಿ ಪಶ್ಚಿಮ ಘಟದ ಅರಣ್ಯ ಪ್ರದೇಶದಲ್ಲಿ ಮಳೆ ಅಬ್ಬರ ಮುಂದುವರಿದರೆ ಹೆಚ್ಚುವರಿ ನೀರು ಜಲಾಶಯಕ್ಕೆ ನೀರು ಬಂದರೆ ಹೆಚ್ಚುವರಿ ನದಿಗೆ ಬಿಡಲಾಗುವುದೆಂದು ಜಲಾಶಯ ಅಧಿಕಾರಿಗಳು ತಾಲೂಕಾ ಆಡಳಿತಕ್ಕೆ ಮಾಹಿತಿ ನೀಡಿದ್ದರಿಂದ ಮಂಗಳವಾರ ಎಸಿ ಗಂಗಪ್ಪ ಎಸ್, ವರು ಮಲಪ್ರಭಾ ನದಿ ದಂಡೆಗೆ ಹೊಂದಿಕೊಂಡಿರುವ ಲಖಮಾಪೂರ ಗ್ರಾಮದ ನದಿ ಪ್ರದೇಶಕ್ಕೆ ಭೇಟಿ ನೀಡಿ ನದಿ ನೀರಿನ ಪ್ರವಾಹ ವೀಕ್ಷಿಸಿದರು. ಆನಂತರ ಲಖಮಾಪುರದಲ್ಲಿ ಗ್ರಾಮಸ್ಥರ ಸಭೆ ಮಾಡಿ ಜಲಾಶಯ ಸಂಪೂರ್ಣ ಭರ್ತಿಯಾಗಿದೆ. ಮುಂದಿನ ದಿನಗಳಲ್ಲಿ ಇದೇ ರೀತಿ ಮೇಲ್ಭಾಗದಲ್ಲಿ ಮಳೆ ಮುಂದುವರಿದರೆ ಹೆಚ್ಚುವರಿ ನೀರನ್ನು ನದಿಗೆ ಬಿಡುವರು. ಆದ್ದರಿಂದ ಗ್ರಾಮಸ್ಥರು ನದಿಯಲ್ಲಿ ಜಾನುವಾರು ಮೈ ತೊಳೆಯಲು, ಬಟ್ಟೆ ಒಗೆಯಲು, ಹೋಗಬಾರದು ಎಂದು ಗ್ರಾಮಸ್ಥರಿಗೆ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಕಂದಾಯ ನಿರೀಕ್ಷಕ ಐ.ವೈ. ಕಳಸಣ್ಣವರ, ಪಿಡಿಓ ಮಲ್ಲಪ್ಪ ವಾಲಿ, ಎನ್. ದೊಡ್ಡಮನಿ, ಮಂಜುನಾಥ ಮಂಡಾಗನಿ ಗ್ರಾಮಸ್ಥರು ಇದ್ದರು.