ಕನ್ನಡಪ್ರಭ ವಾರ್ತೆ ಯಮಕನಮರಡಿ
ಗ್ರಾಮದ ಮೂವರು ದನಗಳನ್ನು ಮೇಯಿಸಲು ಹೋಗಿದ್ದಾಗ ಸಂಜೆ ಮಳೆ ಬಂದಿದೆ. ಆಗ ದನಗಳನ್ನು ಹೊಡೆದುಕೊಂಡು ಮರಳುತ್ತಿದ್ದಾಗ ಕರಿಕಟ್ಟಿ-ಹಳೆವಂಟಮೂರಿ ಕೂಡುವ ರಸ್ತೆಯಲ್ಲಿ ಮಳೆಯಿಂದಾಗಿ ವಿದ್ಯುತ್ ಪ್ರವಹಿಸಿದ ವಿದ್ಯುತ್ ಕಂಬಕ್ಕೆ ತಾಗಿ 13 ಜಾನುವಾರು ಸ್ಥಳದಲ್ಲಿಯೇ ಅಸುನೀಗಿವೆ. ಮುತ್ತಪ್ಪ ಹುಚ್ಚಯಲ್ಲಪ್ಪ ಬಸರಗಿ ಅವರ 4 ಆಕಳು, 2 ಹೋರಿ, ಲಕ್ಷ್ಮಣ ಅಪ್ಪಯ್ಯ ಕಿಲಾರಗಿ ಅವರ 1 ಆಕಳು, 1 ಎಮ್ಮೆ ಮತ್ತು ಯಲ್ಲವ್ವ ನಿಂಗಪ್ಪ ಮಸ್ತಿ ಅವರ 5 ಆಕಳು ಸಾವಿಗೀಡಾಗಿವೆ.
ಘಟನಾ ಸ್ಥಳಕ್ಕೆ ಗ್ರಾಮ ಆಡಳಿತಾಧಿಕಾರಿ ವಿಠ್ಠಲ ಬುಕನಟ್ಟಿ, ಕಂದಾಯ ನಿರೀಕ್ಷಕ ಸಿ.ಕೆ. ಕಲಕಾಂಬಕರ, ಪಿಎಸ್ಐ ಎಸ್.ಕೆ. ಮನ್ನೀಕೇರಿ, ಪಶುವೈದ್ಯಾಧಿಕಾರಿ ಸಿದ್ದಾರ್ಥ ಮೋಕಾಶಿ, ಸಚಿವ ಸತೀಶ ಜಾರಕಿಹೊಳಿಯವರ ಆಪ್ತ ಸಹಾಯಕ ಮಾರುತಿ ಗುಟಗುದ್ದಿ ಭೇಟಿ ನೀಡಿ ಪರಿಶೀಲಿಸಿದರು.