ಕಾಫಿನಾಡಿನ 137 ಹಳ್ಳಿಗಳು ಕೇಂದ್ರದ ಸೂಕ್ಷ್ಮ ವಲಯ: ಹೊಸ ಕರಡು ಪ್ರಕಟ

KannadaprabhaNewsNetwork |  
Published : Aug 01, 2026, 01:15 AM IST
ಸಸಸ | Kannada Prabha

ಸಾರಾಂಶ

ಚಿಕ್ಕಮಗಳೂರುಮಲೆನಾಡು ಭಾಗದ ಜನರ ಮನವಿ ಪರಿಗಣಿಸದ ಕೇಂದ್ರ ಸರ್ಕಾರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಚಿಕ್ಕಮಗಳೂರಿನ 137 ಹಳ್ಳಿ ಸೇರಿದಂತೆ ಪಶ್ಚಿಮಘಟ್ಟ ವ್ಯಾಪ್ತಿಗೆ ಸೇರಿರುವ ಸಾವಿರಾರು ಜನವಸತಿ ಪ್ರದೇಶ ವನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಗುರುತಿಸಿ ಜುಲೈ 27 ರಂದು 7ನೇ ಬಾರಿಗೆ ಹೊಸ ಕರಡು ಅಧಿಸೂಚನೆ ಪ್ರಕಟಿಸಿದೆ.

ಪಶ್ಚಿಮ ಘಟ್ಟ ವ್ಯಾಪ್ತಿಯ 10 ಜಿಲ್ಲೆಗಳ 20,668 ಚದರ ಕಿ.ಮೀ ವಿಸ್ತೀರ್ಣ ಗುರುತು । ಜು. 27 ರಂದು 7ನೇ ಬಾರಿಗೆ ಹೊಸ ಕರಡು ಅಧಿಸೂಚನೆ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಮಲೆನಾಡು ಭಾಗದ ಜನರ ಮನವಿ ಪರಿಗಣಿಸದ ಕೇಂದ್ರ ಸರ್ಕಾರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಚಿಕ್ಕಮಗಳೂರಿನ 137 ಹಳ್ಳಿ ಸೇರಿದಂತೆ ಪಶ್ಚಿಮಘಟ್ಟ ವ್ಯಾಪ್ತಿಗೆ ಸೇರಿರುವ ಸಾವಿರಾರು ಜನವಸತಿ ಪ್ರದೇಶ ವನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಗುರುತಿಸಿ ಜುಲೈ 27 ರಂದು 7ನೇ ಬಾರಿಗೆ ಹೊಸ ಕರಡು ಅಧಿಸೂಚನೆ ಪ್ರಕಟಿಸಿದೆ.

ಕಸ್ತೂರಿ ರಂಗನ್ ವರದಿ ಹಿನ್ನೆಲೆಯಲ್ಲಿ ಕರ್ನಾಟಕದ ಪಶ್ಚಿಮ ಘಟ್ಟ ವ್ಯಾಪ್ತಿಯ ಹತ್ತು ಜಿಲ್ಲೆಗಳ 20,668 ಚದರ ಕಿ.ಮೀ ವಿಸ್ತೀರ್ಣವನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಗುರುತಿಸಲಾಗಿದ್ದು, ಇದಕ್ಕೆ ಆಕ್ಷೇಪಣೆ ಸಲ್ಲಿಸಲು 60 ದಿನಗಳ ಕಾಲಾವಕಾಶ ನೀಡಲಾಗಿದೆ.

ಮೊದಲ ಕರಡು ಅಧಿಸೂಚನೆಯಲ್ಲಿ ಇದ್ದಷ್ಟೇ ರಾಜ್ಯದ ಪ್ರದೇಶವನ್ನು ಮತ್ತೆ 7ನೇ ಕರಡು ಅಧಿಸೂಚನೆಯಲ್ಲೂ ಅಷ್ಟೇ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಗುರುತಿಸಲಾಗಿದೆ. ಈ ಹಿಂದಿನ ಕರಡು ಅಧಿಸೂಚನೆಗಳಿಗೆ ರಾಜ್ಯದ ನೂರಾರು ಗ್ರಾಮ ಪಂಚಾಯಿತಿಗಳು, ಸಾವಿರಾರು ನಾಗರಿಕರು, ಜನಪ್ರತಿನಿಧಿಗಳು ಸರ್ಕಾರ ಆಕ್ಷೇಪಣೆ ಸಲ್ಲಿಸಿ ವಿರೋಧ ವ್ಯಕ್ತಪಡಿಸಿದ್ದರೂ ಒಂದೇ ಒಂದು ಚದರ ಕಿಲೋಮೀಟರ್ ವಿಸ್ತೀರ್ಣವನ್ನು ಏಳನೆ ಕರಡು ಅಧಿಸೂಚನೆಯಲ್ಲಿ ಕಡಿಮೆ ಮಾಡದಿರುವುದು ಆತಂಕ ಮೂಡಿಸಿದೆ.

ಚಿಕ್ಕಮಗಳೂರು ಜಿಲ್ಲೆಯ 137 ಹಳ್ಳಿ ಸೂಕ್ಷ್ಮ ಪ್ರದೇಶ:

ಕೇಂದ್ರ ಸರ್ಕಾರದ ಹೊಸ ಕರಡು ಅಧಿಸೂಚನೆಯ ಅನುಬಂಧ ಸಿ ಪ್ರಕಾರ ಕರ್ನಾಟಕದ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಹಾಸನ, ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಮೈಸೂರು, ಚಾಮರಾಜನಗರ, ಬೆಳಗಾವಿ ಜಿಲ್ಲೆಗಳ ಪಶ್ಚಿಮ ಘಟ್ಟ ವ್ಯಾಪ್ತಿಯ ಸಾವಿರಾರು ಗ್ರಾಮಗಳನ್ನು ಪರಿಸರ ಸೂಕ್ಷ್ಮ ವಲಯಕ್ಕೆ ಸೇರಿಸುವ ಪ್ರಸ್ತಾಪ ಮಾಡಲಾಗಿದೆ.

ಕಳೆದ ವರ್ಷ ಪರಿಸರ ಸೂಕ್ಷ್ಮ ಪ್ರದೇಶ ಘೋಷಣೆಗೆ ಸಂಬಂಧಪಟ್ಟಂತೆ 6ನೇ ಬಾರಿಗೆ ಕರಡು ಅಧಿಸೂಚನೆ ಪ್ರಕಟಿಸ ಲಾಗಿತ್ತು. ಆಗ ರಾಜ್ಯದ ಪಶ್ಚಿಮ ಘಟ್ಟ ವ್ಯಾಪ್ತಿಯ ಗ್ರಾಪಂಗಳು, ಜನರು ಹಾಗೂ ರಾಜ್ಯ ಸರ್ಕಾರ ಅಕ್ಷೇಪಣೆ ಸಲ್ಲಿಸಿದ ಹಿನ್ನೆಲೆ ಯಲ್ಲಿ ಕರಡು ಅಧಿಸೂಚನೆ ಹಿಂಪಡೆಯಲಾಗಿತ್ತು. ಆದರೆ ಇದೀಗ ಯಾವುದೇ ಬದಲಾವಣೆ ಇಲ್ಲದೆ ಮತ್ತೆ ಅದೇ ಕರಡು ಅಧಿಸೂಚನೆಯನ್ನು 7 ನೇ ಬಾರಿಗೆ ಪ್ರಕಟಿಸಿರುವುದು ಮಲೆನಾಡು ಹಾಗೂ ಕರಾವಳಿ ಭಾಗದ ಜನರ ಆತಂಕಕ್ಕೆ ಕಾರಣವಾಗಿದೆ.

-- ಬಾಕ್ಸ್....

ಆಕ್ಷೇಪಣೆ ಸಲ್ಲಿಕೆಗೆ 60 ದಿನ ಅವಕಾಶ

ಕರಡು ಅಧಿಸೂಚನೆ ಪ್ರಕಟಗೊಂಡಿರುವುದು ಅಂತಿಮ ಘೋಷಣೆಯಲ್ಲವಾದರೂ ಸ್ಥಳೀಯ ನಿವಾಸಿಗಳು ಎಚ್ಚೆತ್ತು ಕೊಳ್ಳಬೇಕಿದೆ. ಅಧಿಸೂಚನೆ ಪ್ರಕಟವಾದ ದಿನಾಂಕದಿಂದ 60 ದಿನಗಳೊಳಗೆ ಸಾರ್ವಜನಿಕರು, ರೈತರು, ಗ್ರಾಮ ಪಂಚಾಯಿತಿ ಗಳು ಹಾಗೂ ವಿವಿಧ ಸಂಘ-ಸಂಸ್ಥೆಗಳು ತಮ್ಮ ಆಕ್ಷೇಪಣೆ, ತಿದ್ದುಪಡಿ ಸಲಹೆಗಳು ಅಥವಾ ಹೆಚ್ಚುವರಿ ಮಾಹಿತಿಯನ್ನು ಲಿಖಿತ ರೂಪದಲ್ಲಿ ಸಲ್ಲಿಸಲು ಕೇಂದ್ರ ಸರ್ಕಾರ ಅವಕಾಶ ನೀಡಿದೆ.

ಮಲೆನಾಡು ಹಾಗೂ ಕರಾವಳಿ ಭಾಗದ ಜನ ತಮ್ಮ ಆಕ್ಷೇಪಣೆಗಳನ್ನು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಕಾರ್ಯದರ್ಶಿಗೆ ನೇರವಾಗಿ ಅಥವಾ ಛಿo್ಢಞಛ್ಛಿಃ್ಞಜ್ಚಿ.ಜಿ ಇ-ಮೇಲ್ ವಿಳಾಸದ ಮೂಲಕ ಕಳುಹಿಸುವಂತೆ ಮಲೆನಾಡು ಕರಾವಳಿ ಜನಪರ ಒಕ್ಕೂಟದ ರಾಜ್ಯ ಪ್ರಧಾನ ಸಂಚಾಲಕ ಅನಿಲ್ ಹೊಸಕೊಪ್ಪ ಮನವಿ ಮಾಡಿದ್ದಾರೆ.-- ಬಾಕ್ಸ್‌--ಯಾವ ತಾಲೂಕಿನ ಯಾವ ಹಳ್ಳಿ ಸೂಕ್ಷ್ಮ ಪಟ್ಟಿಗೆ?

ಚಿಕ್ಕಮಗಳೂರು ತಾಲೂಕು 28 ಹಳ್ಳಿಗಳು: ಅತ್ತಿಗೇರಿ, ಬಸಾಪುರ, ಬಸರವಳ್ಳಿ, ಬೆರಣಗೋಡು, ಬಿಡಾರಿ, ಬಿಕ್ಕಾರ್ನಿ, ಬೋಗಶಿ, ಚರ್ಚಿಗುಡ್ ಕಾವಲ್, ದತ್ತಾತ್ರೇಯಪೀಠ, ಹೆಗ್ಗಾರಮಟ್ಟಿವಾಣಿ, ಹಿಪ್ಪಳ, ಹುಗೇರಿ, ಜಾಗರ, ಕಡವಂತಿ, ಕೇಸವಿ, ಕೇಸವಿನಮನೆ, ಕೊಳಗವೆ, ಮಾಡ್ಲ, ಮಲಾಗರು, ಮನಬೂರು, ಮೆಲಿನಹುಲುವತ್ತಿ, ಮೆಳಿಗಿರಿ, ಮೆಳುವತ್ತಿ, ಸಾರಗೋಡು, ಶಿರಗುರು, ಶಿವರ್ಷಿ ಹಾಗೂ ಸುಗಡವಾಣಿ ಗ್ರಾಮಗಳು ಪಟ್ಟಿಯಲ್ಲಿವೆ.ಕೊಪ್ಪ ತಾಲೂಕಿನ 31 ಹಳ್ಳಿಗಳು: ಅಡಗೆಬೈಲು, ಅಡದ, ಬೆಳವಾಡಿ, ಭಂಡಿಗಡಿ, ಬಿಳಗದ್ದೆ, ಬೊಳಪುರ, ದಯಂಬಳ್ಳಿ, ದೇವ ಗೋಡು, ದೇವರಹಳ್ಳಿ, ಗುಣವಂತೆ, ಹರಳಾನೆ, ಹೆಗ್ಗಾರು, ಹಿರೇಕೊಡಿಗೆ, ಹೊನಗಾರು, ಹೊಸೂರು, ಹುಲಿಗರಡಿ, ಕಗ್ಗ, ಕಳ್ಗುಂಡಿ, ಕರಿಮನೆ, ಕೆಳಕುಳಿ, ಕೇಸವೆ, ಕುಂಬಾರಕೊಪ್ಪ, ಕುಂಚೂರು, ಲೋಕನಾಥಪುರ, ಮಚ್ಚಿಕೊಪ್ಪ, ಮರಿತೊಟ್ಟಿಲು, ಮೇಗೂರು, ನುಗ್ಗಿ, ಶಂಕರಪುರ, ತಾಳಮಕ್ಕಿ ಎಸ್ಟೇಟ್ ಹಾಗೂ ಉದನ ಗ್ರಾಮ ಸೇರಿವೆ.

ಮೂಡಿಗೆರೆ ತಾಲೂಕಿನ 26 ಹಳ್ಳಿಗಳು: ಅರಮನೆ ತಾಳಗೂರು, ಅತ್ತಿಗೆರೆ, ಬಾಳೂರು, ಬರಿಮಲೆ ಎಸ್ಟೇಟ್, ಬ್ಯಾರಪುರ, ಬ್ಯಾರಪುರ ಎಸ್ಟೇಟ್, ದರ್ಶನ, ದುರ್ಗದಹಳ್ಳಿ, ಗೊತ್ತಿ, ಹೆಗ್ಗಡಲು, ಹೋರ್ನಾಡು, ಹೊಸಕೆರೆ, ಇಡ್ಕಾಣಿ, ಕಳಗೋಡು, ಕೆಳಗೂರು, ಕೆಂಜಾಯಿ ಗುಡ್ಡದ ಕಾಫಿ ಎಸ್ಟೇಟ್, ಕೋಗಿಲೆ, ಕುಂದೂರು, ಮೆಕನಗದ್ದೆ, ಮುಡ್ಗುಂಡಿ, ಮುಳರಹಳ್ಳಿ, ಸನ್ವಸಿ, ತನೂಡಿ, ತರುವೆ, ತಟ್ಟಕೊಳಗುಡ್ಡ ಹಾಗೂ ಉರುಬಗೆ ಗ್ರಾಮ ಪಟ್ಟಿಯಲ್ಲಿವೆ.

ನರಸಿಂಹರಾಜಪುರ ತಾಲೂಕಿನ 31 ಹಳ್ಳಿಗಳು: ಅಲೆಹಳ್ಳಿ, ಅರಳಿಕೊಪ್ಪ, ಬಾಳೆ, ಬೆಳ್ಳೂರು, ಭೈರಾಪುರ, ದಂಡುಬಿತ್ತರ, ದಾವಣಿ, ಗುಬ್ಬಿಗ, ಹಳಸೂರು, ಹರಂಬಳ್ಳಿ, ಹರವರಿ, ಹಾತೂರು, ಹೆಬ್ಬೆ, ಹೊಸೂರು, ಕದ್ಬಿಣಬೈಲು, ಕನೋಡಿ, ಕನೂರು, ಕರಕಿಸರ, ಕೊಂಕರೆ, ಕುಸಬೂರು, ಮಡಬೂರು, ಮಲ್ಲಂದೂರು, ಮೇಗರಮಕ್ಕಿ, ಮುಡಗುನಿ, ನಂದಿಗಾವಿ, ಸಾಲೂರು, ಸಂಕಶಿ, ಸರ್ಯಾ, ವಗಡೆ, ವರ್ಕಟಿ ಹಾಗೂ ವಿಠಲ ಗ್ರಾಮ ಸೇರಿವೆ.

ಶೃಂಗೇರಿ ತಾಲೂಕಿನ 22 ಹಳ್ಳಿಗಳು: ಬಾಳಗೆರೆ, ಬಾಲಿಕಾಡಿ, ಗಿಣಿಕಲ್, ಗುಳಗಂಜಿಮನಿ, ಹಾದಿ, ಹಸನಬಾಳು, ಕೆರೆ, ಕುಂಬರಗೋಡು, ಕುಟಗೋಡು, ಮಳನಾಡು, ಮಾರ್ಕಲ್ಲು (ಋಷ್ಯಶೃಂಗಪುರ), ಮಸಗಿ, ಮತವಳ್ಳಿ ಕಾಫಿ ಎಸ್ಟೇಟ್, ಮಿಗ್ಗ, ಮುಡಬ, ನೀಲಂದೂರು, ನೆಮ್ಮಾರ್, ನೆಮ್ಮಾರ್ ಕಾಫಿ ಎಸ್ಟೇಟ್, ಶಿರ್ಲು, ಸುಂಕದಮಕ್ಕಿ, ಯಡದಾಳು ಹಾಗೂ ಯೇಡಹಳ್ಳಿ ಗ್ರಾಮಗಳು ಪಟ್ಟಿಯಲ್ಲಿ ಸ್ಥಾನ ಪಡೆದಿವೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಂಜಿನಿಯರಿಂಗ್ ವಿದ್ಯಾರ್ಥಿಗಳ ಕೌಶಲ್ಯ ವೃದ್ಧಿಗೆ ಡ್ರೋನ್ ಪ್ರಯೋಗಾಲಯ
ತಮಿಳುನಾಡಿಗೆ ನೀರು ಹರಿಸುವುದು ಬೇಡ