-ಮತಪಟ್ಟಿ ಪರಿಷ್ಕರಣೆ ಬಗ್ಗೆ ಕಾರ್ಯಕರ್ತರಿಗೆ ಮಾಹಿತಿ ಕಾರ್ಯಕ್ರಮ
ಮತ ಪಟ್ಟಿ ಪರಿಷ್ಕರಣೆ ಸರಿಯಾದ ರೀತಿಯಲ್ಲಿ ನಡೆದರೆ 14 ಲಕ್ಷ ಮತಗಳು ವಿಮರ್ಶೆಗೆ ಒಳಪಡಬೇಕಾಗುತ್ತದೆ ಎಂದು ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದರು.ಶುಕ್ರವಾರ ಬಿಜೆಪಿ ಹೋಬಳಿ ಘಟಕ ಏರ್ಪಡಿಸಿದ್ದ ಮಹಾ ಶಕ್ತಿ ಕೇಂದ್ರ ಹಾಗೂ ಮತಪಟ್ಟಿ ಪರಿಷ್ಕರಣೆ ಮಾಹಿತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿ ಕಾಂಗ್ರೆಸ್ ಪಕ್ಷ ಮತಪಟ್ಟಿ ಪರಿಷ್ಕರಣೆಯಲ್ಲಿ ಕಾಂಗ್ರೆಸ್ ಮತಗಳನ್ನು ಡಿಲೀಟ್ ಮಾಡಲಾಗುತ್ತದೆ ಎಂಬ ಸಂಶಯ ವ್ಯಕ್ತಪಡಿಸುತ್ತಿದೆ. ಆದರೆ, ಭಾರತದಲ್ಲಿ ವಿದೇಶಿಯರ ಗುರುತಿಸಿ ಅಂತಹವರನ್ನು ಮಾತ್ರ ಪಟ್ಟಿಯಿಂದ ತೆಗೆಯಲಾಗುತ್ತದೆ.
ಕೇಂದ್ರದ ಹಲವಾರು ಯೋಜನೆಗಳನ್ನು ರಾಜ್ಯ ಸರ್ಕಾರ ಅನುಷ್ಠಾನಕ್ಕೆ ತರುತ್ತಿಲ್ಲ.14 ವರ್ಷದ ಒಳಗಿನ ಹೆಣ್ಣು ಮಕ್ಕಳಿಗೆ ಗರ್ಭ ಕೋಶದ ಕ್ಯಾನ್ಸರ್ ತಡೆಗೆ ಮುಂಜಾಗ್ರತೆಯಾಗಿ ಲಸಿಕೆ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ ₹4500 ಕೋಟಿ ಬಿಡುಗಡೆ ಮಾಡಿದ್ದಾರೆ. ಅಫಘಾತವಾದರೆ ಚಿಕಿತ್ಸೆಗೆ ₹1.50 ಲಕ್ಷ ನೀಡುವ ರಾಹುತ್ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಅದನ್ನು ರಾಜ್ಯ ಜಾರಿಗೇ ತಂದಿಲ್ಲ. ಕೇಂದ್ರದ ಯೋಜನೆಗಳನ್ನು ರಾಜ್ಯ ಸರ್ಕಾರ ತನ್ನ ಕಾರ್ಯಕ್ರಮದಂತೆ ಬಿಂಬಿಸುತ್ತಿದೆ ಎಂದು ಆರೋಪಿಸಿದರು. ಚಿಕ್ಕಮಗಳೂರು- ಬಾಳೆಹೊನ್ನೂರು ರಸ್ತೆಗೆ ಕೇಂದ್ರದ ಸಚಿವ ನಿತಿನ್ ಗಡ್ಕರಿ ಸಿ.ಆರ್.ಎಪ್. ಫಂಡ್ ನಿಂದ ₹110 ಕೋಟಿ ಬಿಡುಗಡೆ ಮಾಡಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ 212 ಬಿಎಸ್ಎನ್ಎಲ್ ಟವರ್ ಇತ್ತು. ಇದನ್ನು 420 ಮಾಡಿದ್ದೇನೆ. ಹೊಸದಾಗಿ 150 ಟವರ್ ಮಂಜೂರು ಮಾಡಿದ್ದೇನೆ.ರಾಜ್ಯಕ್ಕೆ ಬಿಎಸ್ಎನ್ಎಲ್ ಟವರ್ ಗೆ 65 ಬ್ಯಾಟರಿ ಬಂದಿದ್ದು ಇದರಲ್ಲಿ 50 ಬ್ಯಾಟರಿ ಚಿಕ್ಕಮಗಳೂರು ಜಿಲ್ಲೆಗೆ ನೀಡಿದ್ದೇನೆ. ಬಿಎಸ್ಎನ್ಎಲ್ ಸುಧಾರಿಸುವ ಪ್ರಯತ್ನ ನಡೆಯುತ್ತಿದೆ ಎಂದರು. ಮಾಜಿ ಸಚಿವ ಡಿ.ಎನ್.ಜೀವರಾಜ್ ಮಾತನಾಡಿ ಮತ ಪಟ್ಟಿ ಪರಿಷ್ಕರಣೆ ಬಿಜೆಪಿ ಕಾರ್ಯಕ್ರಮವಲ್ಲ. ಈ ಹಿಂದೆ ಕಾಂಗ್ರೆಸ್ ಸರ್ಕಾರ ಇದ್ದಾಗಲೇ 11 ಬಾರಿ ಮತಪಟ್ಟಿ ಪರಿಷ್ಕರಣೆ ಆಗಿದೆ. ಕಾಂಗ್ರೆಸ್ ಚುನಾವಣೆಯಲ್ಲಿ ಗೆದ್ದಾಗ ಮತಪಟ್ಟಿ ಸರಿಯಾಗಿ ಇದೆ ಎನ್ನುತ್ತದೆ. ಸೋತರೆ ಮತಗಳ್ಳತನ ನಡೆದಿದೆ ಎಂದು ಆರೋಪಿಸುತ್ತದೆ ಎಂದರು.ಮತಪಟ್ಟಿ ಪರಿಷ್ಕರಣೆಯಿಂದ ಕೇವಲ ಎಂಪಿ ಅಥವಾ ಎ.ಎಲ್.ಎಂ.ಚುನಾವಣೆ ಮೇಲೆ ಪರಿಣಾಮ ಬೀರುವುದಲ್ಲ. ಗ್ರಾಪಂ ಚುನಾವಣೆ ಮೇಲೂ ಪರಿಣಾಮ ಬೀರಲಿದೆ. ರಾಜ್ಯದ ಕಾಂಗ್ರೆಸ್ ಸರ್ಕಾರ ಎಸ್.ಐ.ಆರ್.ನ್ನು ಗಂಭೀರವಾಗಿ ತೆಗೆದುಕೊಂಡಿದೆ. ಪ್ರತಿ ಬಿಜೆಪಿ ಕಾರ್ಯಕರ್ತರು ಎಸ್.ಐ.ಆರ್ ನ್ನು ಸರಿಯಾದ ರೀತಿ ಬಳಸಿ ಮತಪಟ್ಟಿಯಿಂದ ಯಾರೂ ಹೊರ ಹೋಗದಂತೆ ನೋಡಿಕೊಳ್ಳಬೇಕೆಂದರು.ಅಧ್ಯಕ್ಷತೆಯನ್ನು ಬಿಜೆಪಿ ಹೋಬಳಿ ಅಧ್ಯಕ್ಷ ಎಚ್.ಡಿ.ಲೋಕೇಶ್ ವಹಿಸಿದ್ದರು. ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಅರುಣಕುಮಾರ್ , ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪುಣ್ಯಪಾಲ್, ಎಸ್.ಐ.ಆರ್ ಕ್ಷೇತ್ರ ಉಸ್ತುವಾರಿ ಕನಕರಾಜು ಅರಸು, ಕ್ಷೇತ್ರ ಉಸ್ತುವಾರಿ ಚೈತ್ರಶ್ರೀ, ತಾಲೂಕು ಬಿಜೆಪಿ ಅಧ್ಯಕ್ಷ ವಿ.ನೀಲೇಶ್, ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ರಸ್ಮಿ ದಯಾನಂದ್, ಹೋಬಳಿ ಪ್ರಧಾನ ಕಾರ್ಯದರ್ಶಿ ಎ.ಬಿ.ಮಂಜುನಾಥ್,ತಾಲೂಕು ಪ್ರಧಾನ ಕಾರ್ಯದರ್ಶಿ ಕೆಸವಿ ಮಂಜುನಾಥ್ ಇದ್ದರು.- ಬಾಕ್ಸ್--
ಶಿವಮೊಗ್ಗ- ತೀರ್ಥಹಳ್ಳಿ- ಶೃಂಗೇರಿ-ಮಂಗಳೂರು ರೇಲ್ವೆ ಮಾರ್ಗವನ್ನು ಶಿವಮೊಗ್ಗ- ಎನ್.ಆರ್.ಪುರ- ಕೊಪ್ಪ-ಶೃಂಗೇರಿ ಮಾರ್ಗವಾಗಿ ಮಾಡಿಕೊಡಬೇಕು ಎಂದು ಈ ಭಾಗದ ಜನರು ಮನವಿ ಮಾಡಿದ್ದು ಈ ಬಗ್ಗೆ ರೇಲ್ವೆ ರಾಜ್ಯ ಸಚಿವ ಸೋಮಣ್ಣ ಹಾಗೂ ರೇಲ್ವೆ ಅಧಿಕಾರಿಗಳೊಂದಿಗೆ ಮುಂದಿನ ಒಂದು ವಾರದೊಳಗೆ ಚರ್ಚಿಸಿ ಎಲ್ಲರಿಗೂ ಅನುಕೂಲವಾಗುವ ರೀತಿಯಲ್ಲಿ ಮಾಡಿಕೊಡುತ್ತೇನೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಭರವಸೆ ನೀಡಿದರು.