ಕಡೂರು ಕ್ಷೇತ್ರಕ್ಕೆ 15 ಕೆಪಿಎಸ್ ಶಾಲೆ ಮಂಜೂರು: ಕೆ.ಎಸ್.ಆನಂದ್

KannadaprabhaNewsNetwork | Published : Jun 25, 2024 12:31 AM

ಸಾರಾಂಶ

ಕಡೂರು, ರಾಜ್ಯ ಸರ್ಕಾರದಿಂದ ಕಡೂರು ವಿಧಾನಸಭಾ ಕ್ಷೇತ್ರಕ್ಕೆ 15 ಕೆಪಿಎಸ್ ಶಾಲೆಗಳು ಮಂಜೂರಾಗಿದ್ದು, ಈ ಮೂಲಕ ನಮ್ಮ ಕ್ಷೇತ್ರದ ಸರ್ಕಾರಿ ಶಾಲೆಗಳಿಗೆ ಮತ್ತೆ ಹಿಂದಿನ ವೈಭವ ಮರುಕಳಿಸಲಿವೆ ಎಂದು ಶಾಸಕ ಕೆ.ಎಸ್.ಆನಂದ್ ವಿಶ್ವಾಸ ವ್ಯಕ್ತಪಡಿಸಿದರು.

- ಕೋಟೆ ಪ್ರದೇಶ, ರಾಜೀವ್ ಗಾಂಧಿ ಬಡಾವಣೆ, ಲಕ್ಷ್ಮೀಶ ನಗರಗಳಲ್ಲಿ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಚಾಲನೆ

ಕನ್ನಡಪ್ರಭ ವಾರ್ತೆ, ಕಡೂರು

ರಾಜ್ಯ ಸರ್ಕಾರದಿಂದ ಕಡೂರು ವಿಧಾನಸಭಾ ಕ್ಷೇತ್ರಕ್ಕೆ 15 ಕೆಪಿಎಸ್ ಶಾಲೆಗಳು ಮಂಜೂರಾಗಿದ್ದು, ಈ ಮೂಲಕ ನಮ್ಮ ಕ್ಷೇತ್ರದ ಸರ್ಕಾರಿ ಶಾಲೆಗಳಿಗೆ ಮತ್ತೆ ಹಿಂದಿನ ವೈಭವ ಮರುಕಳಿಸಲಿವೆ ಎಂದು ಶಾಸಕ ಕೆ.ಎಸ್.ಆನಂದ್ ವಿಶ್ವಾಸ ವ್ಯಕ್ತಪಡಿಸಿದರು.

ಪಟ್ಟಣದ ವಿವಿಧ ಪ್ರದೇಶಗಳಾದ ಕೋಟೆ ಪ್ರದೇಶ, ರಾಜೀವ್ ಗಾಂಧಿ ಬಡಾವಣೆ ಹಾಗೂ ಲಕ್ಷ್ಮೀಶ ನಗರಗಳಲ್ಲಿ ಒಟ್ಟು ಮೂರು ಕಡೆಗಳಲ್ಲಿ ತಲಾ 20 ಲಕ್ಷ ರು. ವೆಚ್ಚದಲ್ಲಿ ಅಂಗನವಾಡಿ ಕಟ್ಟಡಗಳ ನಿರ್ಮಾಣ ಕಾಮಗಾರಿಗಳಿಗೆ ಚಾಲನೆ ನೀಡಿದ ಸಂದರ್ಭದಲ್ಲಿ ಮಾತನಾಡಿದರು.

ಬಹು ಮುಖ್ಯವಾಗಿ ರಾಜ್ಯದ ಸರ್ಕಾರ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಲು, ಸರ್ಕಾರಿ ಶಾಲೆಗಳ ಪುನಶ್ಚೇತನಕ್ಕೆ ಸರ್ಕಾರ ಹಲವಾರು ಯೋಜನೆಗಳನ್ನು ರೂಪಿಸಿದೆ. ಸರ್ಕಾರ ಪರಿಕಲ್ಪನೆಯಂತೆ ಯಾವುದೇ ಖಾಸಗಿ ಶಾಲೆಗಳಿಗೆ ಕಡಿಮೆ ಇಲ್ಲದಂತೆ 3 ಸಾವಿರ ಇಂಗ್ಲೀಷ್ ಮಾದ್ಯಮದ ಕರ್ನಾಟಕ ಪಬ್ಲಿಕ್ ಸ್ಕೂಲ್ (ಕೆಪಿಎಸ್) ಗಳು ಆರಂಭವಾಗಲಿವೆ. ಇದರಲ್ಲಿ ನನ್ನ ಕಡೂರು ವಿಧಾನಸಭಾ ಕ್ಷೇತ್ರಕ್ಕೆ ಸುಮಾರು 15 ಶಾಲೆಗಳು ಲಭ್ಯವಾಗಲಿವೆ ಎಂದು ಮಾಹಿತಿ ನೀಡಿದರು.

ಮಕ್ಕಳು ಶಾಲೆಗಳಿಗೆ ಸೇರಲು ಪೂರ್ವಭಾವಿ ಶಿಕ್ಷಣ ದೊರೆಯುವುದು ನಮ್ಮ ಅಂಗನವಾಡಿಗಳಲ್ಲಿ ಮಾತ್ರ. ಹಾಗಾಗಿ ಪಟ್ಟಣದ ನಾಲ್ಕು ಕಡೆ ಅದರಲ್ಲೂ ಅತ್ಯಂತ ಅಗತ್ಯವಿರುವ ಕಡೆ ತಲಾ 20 ಲಕ್ಷ ರು. ವೆಚ್ಚದಲ್ಲಿ ಕೋಟೆ ಪ್ರದೇಶ, ರಾಜೀವ್ ಗಾಂಧಿ ಬಡಾವಣೆ, ಲಕ್ಷ್ನೀಶ ನಗರ ಹೊಸ ಅಂಗನವಾಡಿ ಕಟ್ಟಡ ಕಾಮಗಾರಿಗೆ ಚಾಲನೆ ನೀಡಲಾಗುತ್ತಿದೆ ಎಂದರು.ಕೋಟೆ ಪ್ರದೇಶದಲ್ಲಿ ಮನೆಗಳು ಮತ್ತು ತೋಟಗಳಿಗೆ ತೆರಳಲು ಇರುವ ರಸ್ತೆ ತೆರವುಗೊಳಿಸಿ, ಇಲ್ಲಿಗೆ ಅಗತ್ಯವಾಗಿರುವ ಸುಸಜ್ಜಿತ ರಸ್ತೆಯನ್ನು ನಿರ್ಮಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.ಪುರಸಭಾ ಮಾಜಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ, ಸಮಾಜದ ಎಲ್ಲ ವರ್ಗಗಳ ಮಕ್ಕಳಿಗೆ ಅತ್ಯಗತ್ಯವಾದ ಪ್ರಾಥಮಿಕ ಶಿಕ್ಷಣ ಸಿಗುವಂತೆ ಶಾಸಕರು ನೂತನ ಅಂಗನವಾಡಿ ಕೇಂದ್ರಗಳ ಆರಂಭಕ್ಕೆ ಒತ್ತು ನೀಡಿದ್ದಾರೆ ಇದು ಉತ್ತಮ ಕಾರ್ಯ ಎಂದು ಹೇಳಿದರು.

ಪುರಸಭೆ ಸದಸ್ಯ ತೋಟದಮನೆ ಮೋಹನ್ ಮಾತನಾಡಿ ಪುರಸಭೆಯಿಂದ ಈ ನೂತನ ಅಂಗನವಾಡಿ ಕೇಂದ್ರಗಳ ಆರಂಭಕ್ಕೆ ಸೂಕ್ತ ಜಾಗವನ್ನೂ ನೀಡಲಾಗಿದ್ದು ಸ್ಥಳೀಯ ಸಣ್ಣ ಮಕ್ಕಳ ಶಿಕ್ಷಣಕ್ಕೆ ಶಾಸಕರು ಆದ್ಯತೆ ನೀಡಿರುವುದು ಒಳ್ಳೆಯ ಬೆಳವಣಿಗೆ ಎಂದು ನುಡಿದರು.

ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಮಂಜುನಾಥ್, ಸದಸ್ಯರಾದ ಸಯ್ಯದ್ ಯಾಸೀನ್, ಮಂಡಿ ಇಕ್ಬಾಲ್, ಲತಾರಾಜು, ಮೋಹನ್, ಸಿಡಿಪಿಓ ಶಿವಪ್ರಕಾಶ್, ಕೆಆರ್ ಐಡಿಎಲ್ ನ ಜಿಲ್ಲಾಧಿಕಾರಿ ಅಶ್ವಿನಿ, ಗಿರೀಶ್, ಮತ್ತಿತರರು ಹಾಜರಿದ್ದರು.

24ಕೆಕೆಡಿಯು2.

ಶಾಸಕ ಕೆ.ಎಸ್.ಆನಂದ್ ಕಡೂರಿನ ಕೋಟೆ , ರಾಜೀವ್ ಗಾಂಧಿ ಬಡಾವಣೆ, ಲಕ್ಷ್ಮೀಶ ನಗರಗಳಲ್ಲಿ ತಲಾ 20 ಲಕ್ಷರೂ ವೆಚ್ಚದ ಅಂಗನವಾಡಿ ಕಟ್ಟಡ ಕಾಮಗಾರಿಗಳಿಗೆ ಚಾಲನೆ ನೀಡಿದರು.

Share this article