ಶಿರಸಿ: ಕರ್ನಾಟಕದ ತಿರುಪತಿ ಎಂದೇ ಪ್ರಸಿದ್ಧಿಯಾಗಿರುವ ಶ್ರೀ ಕ್ಷೇತ್ರ ಮಂಜುಗುಣಿ ಶ್ರೀ ವೆಂಕಟರಮಣ ದೇವಸ್ಥಾನದ ವಾರ್ಷಿಕ ರಥೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ.
ಈ ಬಾರಿಯ ರಥೋತ್ಸವಕ್ಕಾಗಿ ಪ್ರಸಾದ ತಯಾರಿಯ ಕಾರ್ಯವು ಯುಗಾದಿ ಹಬ್ಬದ ಶುಭ ದಿನದಿಂದಲೇ ಅಧಿಕೃತವಾಗಿ ಚಾಲನೆ ಪಡೆದುಕೊಂಡಿದೆ. ಕಳೆದ ಎಂಟು ದಿನಗಳಿಂದ ದೇವಸ್ಥಾನದ ಪ್ರಸಾದಾಲಯಯಲ್ಲಿ ನಿರಂತರವಾಗಿ ಪ್ರಸಾದ ತಯಾರಿಸುವ ಕಾರ್ಯ ನಡೆಯುತ್ತಿದೆ. ರಥೋತ್ಸವದ ದಿನ ಆಗಮಿಸುವ ಸಾವಿರಾರು ಭಕ್ತರಿಗೆ ವಿತರಿಸಲು ಸುಮಾರು 15 ಸಾವಿರ ಅತ್ರಾಸ (ಅತಿರಸ) ಹಾಗೂ 6 ಸಾವಿರ ಲಡ್ಡು ತಯಾರಿಸುವ ಗುರಿ ಹೊಂದಲಾಗಿದೆ.
ದೇವಸ್ಥಾನದ ಸಂಪ್ರದಾಯದಂತೆ ಅತ್ಯಂತ ಶುದ್ಧವಾದ ಅಕ್ಕಿ, ಬೆಲ್ಲ, ಬೋಳಕಾಳು (ಕಾಳುಮೆಣಸು) ಮತ್ತು ಏಲಕ್ಕಿಯನ್ನು ಬಳಸಿ ಅತ್ರಾಸ ಪ್ರಸಾದವನ್ನು ತಯಾರಿಸಲಾಗುತ್ತಿದೆ. ಈ ಅತ್ರಾಸವನ್ನು ತುಪ್ಪದಲ್ಲಿ ಕರಿಯುವುದು ವಿಶೇಷವಾಗಿದೆ.ಪ್ರಸಾದದ ಗುಣಮಟ್ಟ ಮತ್ತು ಸಾಂಪ್ರದಾಯಿಕ ರುಚಿಯನ್ನು ಕಾಪಾಡಿಕೊಳ್ಳಲು ವಿಶೇಷ ಗಮನ ಹರಿಸಲಾಗಿದ್ದು, ಯಾವುದೇ ರಾಸಾಯನಿಕಗಳ ಬಳಕೆಯಿಲ್ಲದೆ ನೈಸರ್ಗಿಕ ಪದಾರ್ಥಗಳಿಂದಲೇ ಈ ಪ್ರಸಾದ ಸಿದ್ಧಪಡಿಸಲಾಗುತ್ತಿದೆ.
ಏ. 2ರಂದು ನಡೆಯುವ ರಥೋತ್ಸವಕ್ಕೆ ಜಿಲ್ಲೆಯಾದ್ಯಂತ ಹಾಗೂ ಹೊರಜಿಲ್ಲೆಗಳಿಂದಲೂ ಭಕ್ತಸಾಗರವೇ ಹರಿದುಬರುವ ನಿರೀಕ್ಷೆಯಿದೆ. ಬಂದ ಭಕ್ತರೆಲ್ಲರಿಗೂ ಶ್ರೀ ದೇವಸ್ಥಾನದ ಈ ವಿಶೇಷ ಪ್ರಸಾದ ಬೇಕಿದ್ದಲ್ಲಿ ತಲುಪುವಂತೆ ದೇವಸ್ಥಾನದ ಆಡಳಿತ ಮಂಡಳಿ ಮತ್ತು ಸ್ವಯಂಸೇವಕರು ಸಕಲ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದಾರೆ ಎಂಬುದು ವಿಶೇಷವಾಗಿದೆ.