ಗದಗ-ಬೆಟಗೇರಿಯಲ್ಲಿ ಪುಟ್ಟರಾಜ ಗವಾಯಿಗಳ 15ನೇ ಪುಣ್ಯ ಸ್ಮರಣೋತ್ಸವ

KannadaprabhaNewsNetwork |  
Published : Sep 03, 2025, 01:01 AM IST
ಗದಗ ಪಂ.ಪಂಚಾಕ್ಷರಿ ಗವಾಯಿಗಳವರ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿ ಗಣೇಶನ ಪ್ರತಿಷ್ಠಾಪನೆ ಹಾಗೂ ಡಾ. ಪಂ.ಪುಟ್ಟರಾಜ ಗವಾಯಿಗಳ 15ನೇ ಪುಣ್ಯ ಸ್ಮರಣೆ ಅಂಗವಾಗಿ ನಡೆದ ಮಹಾ ಅನ್ನಸಂತರ್ಪಣೆ ಕಾರ್ಯಕ್ರಮಕ್ಕೆ ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು ಚಾಲನೆ ನೀಡಿದರು. | Kannada Prabha

ಸಾರಾಂಶ

ಗಾನಯೋಗಿ ಡಾ. ಪಂ. ಪುಟ್ಟರಾಜ ಸೇವಾ ಸಮಿತಿ ವತಿಯಿಂದ ಡಾ. ಪಂ. ಪುಟ್ಟರಾಜ ಕವಿ ಗವಾಯಿಗಳವರ 15ನೇ ಪುಣ್ಯಾರಾಧನೆ ಹಿನ್ನೆಲೆ ಅವಳಿ ನಗರ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಲ್ಲಿ, ಗವಾಯಿಗಳ ಆರಾಧನೆ, ಅನ್ನಸಂತರ್ಪಣೆಯನ್ನು ಭಕ್ತರು ಶ್ರದ್ಧಾ-ಭಕ್ತಿಯಿಂದ ನೆರವೇರಿಸಿದರು.

ಗದಗ: ಗಾನಯೋಗಿ ಡಾ. ಪಂ. ಪುಟ್ಟರಾಜ ಸೇವಾ ಸಮಿತಿ ವತಿಯಿಂದ ಡಾ. ಪಂ. ಪುಟ್ಟರಾಜ ಕವಿ ಗವಾಯಿಗಳವರ 15ನೇ ಪುಣ್ಯಾರಾಧನೆ ಹಿನ್ನೆಲೆ ಅವಳಿ ನಗರ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಲ್ಲಿ, ಗವಾಯಿಗಳ ಆರಾಧನೆ, ಅನ್ನಸಂತರ್ಪಣೆಯನ್ನು ಭಕ್ತರು ಶ್ರದ್ಧಾ-ಭಕ್ತಿಯಿಂದ ನೆರವೇರಿಸಿದರು. ನಗರದ ವೀರೇಶ್ವರ ಪುಣ್ಯಾಶ್ರಮದಲ್ಲಿ ಸಂಗೀತ ಪರಿಕರಗಳೊಂದಿಗೆ ಗಾನಯೋಗಿ ಪುಟ್ಟರಾಜ ಗವಾಯಿಗಳು ರಚಿಸಿದ ಭಕ್ತಿ ಹಾಡುಗಳನ್ನು ಭಕ್ತರು ಹಾಡುವ ಮೂಲಕ ಸ್ವರ ಶ್ರದ್ಧಾಂಜಲಿ ಸಲ್ಲಿಸಿದರು. ಪುಣ್ಯಸ್ಮರಣೆ ಹಿನ್ನೆಲೆ ನಗರದ ವೀರೇಶ್ವರ ಪುಣ್ಯಾಶ್ರಮದಲ್ಲಿ ವಿವಿಧ ಧಾರ್ಮಿಕ ಹಾಗೂ ಸಂಗೀತ ಕಾರ್ಯಕ್ರಮ ನಡೆದವು. ಪುಟ್ಟರಾಜ ಗವಾಯಿಗಳ ಕರ್ತೃ ಗದ್ದುಗೆಯನ್ನು ಹೂವುಗಳಿಂದ ಅಲಂಕರಿಸಲಾಗಿತ್ತು. ಬೆಳಗ್ಗೆ ಗದ್ದುಗೆಗೆ ವಿಶೇಷ ಪೂಜೆ ನೆರವೇರಿಸಲಾಯಿತು.ವಿವಿಧ ಭಾಗದ ಸಾವಿರಾರು ಭಕ್ತರು ಪುಣ್ಯಾಶ್ರಮಕ್ಕೆ ಆಗಮಿಸಿ, ದರ್ಶನಾಶೀರ್ವಾದ ಪಡೆದರು. ಬೆಳಗ್ಗೆಯಿಂದ ಸಂಜೆ ವರೆಗೆ ಆಶ್ರಮದಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿ ಕಂಡು ಬಂದಿತು. ಕರ್ತೃ ಗದ್ದುಗೆ ದರ್ಶನ ಪಡೆದು ಪುನೀತರಾದರು. ಧಾರ್ಮಿಕ ಕಾರ್ಯಕ್ರಮದೊಂದಿಗೆ ದಿನವಿಡೀ ಆಶ್ರಮದಲ್ಲಿ ಸಂಗೀತ ಕಾರ್ಯಕ್ರಮ ನಡೆದವು. ಅಂಧರ ಸಂಗೀತ ಶಾಲೆ ವಿದ್ಯಾರ್ಥಿಗಳು ಸಂಗೀತ ಸೇವೆ ಮೂಲಕ ಪುಟ್ಟರಾಜ ಗವಾಯಿಗಳನ್ನು ಸ್ಮರಿಸಿದರು.ಬೆಳಗ್ಗೆ 7 ಗಂಟೆಯಿಂದಲೇ ನಗರದ ಗಾಂಧಿ ವೃತ್ತ, ಹಳೇ ಬಸ್ ನಿಲ್ದಾಣ ಸೇರಿದಂತೆ ಪ್ರಮುಖ ವೃತ್ತಗಳಲ್ಲಿ ವಿವಿಧ ಸಂಘ ಸಂಸ್ಥೆಗಳು, ಆಟೋ ಚಾಲಕರ, ಮಾಲೀಕರು ಸಣ್ಣ ಸಣ್ಣ ವ್ಯಾಪಾರಿಗಳು, ಪ್ರತಿಯೊಂದು ಗ್ರಾಮಗಳಲ್ಲಿನ ಭಕ್ತರು ಪೆಂಡಾಲ್ ಗಳನ್ನು ಹಾಕಿ ಪುಟ್ಟರಾಜರ ಭಾವಚಿತ್ರವಿಟ್ಟು ಪೂಜೆ ಸಲ್ಲಿಸಿ ಪುಟ್ಟಯ್ಯಜ್ಜನವರ ಸ್ಮರಣೆ ಮಾಡಿದರು. ರಾಜೀವಗಾಂಧಿನಗರ ಗೆಳೆಯರ ಬಳಗ, ಗದಗ-ಬೆಟಗೇರಿ ನಗರಸಭೆ, ಟ್ಯಾಗೋರ ರಸ್ತೆಯಲ್ಲಿರುವ ಆದರ್ಶ ಗಜಾನನ ಸಮಿತಿ, ನಗರದ ಪುಟ್ಟಯ್ಯಜ್ಜ ವೃತ್ತದ ಬಳಿ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳಿಂದ ಪುಟ್ಟರಾಜ ಕವಿ ಗವಾಯಿಗಳರವರ ಆರಾಧನೆ ಕಾರ್ಯಕ್ರಮ ಹಾಗೂ ಮಹಾ ಅನ್ನಸಂತರ್ಪಣೆ ಜರುಗುದವು.

ಜನಮಾನಸದಲ್ಲಿ ಅಜರಾಮರ: ಮಾ.3, 1914ರಲ್ಲಿ ಅವಿಭಜಿತ ಧಾರವಾಡ ಜಿಲ್ಲೆಯ ಹಾನಗಲ್ಲ ತಾಲೂಕಿನ ದೇವರ ಹೊಸಪೇಟೆ ಗ್ರಾಮದಲ್ಲಿ ರೇವಣಯ್ಯ ಮತ್ತು ಸಿದ್ದಮ್ಮ ದಂಪತಿಗೆ ಜನಿಸಿದ ಪುಟ್ಟರಾಜರು ಬಾಲ್ಯದಲ್ಲಿಯೇ ತಮ್ಮ ದೃಷ್ಟಿಯನ್ನು ಕಳೆದುಕೊಂಡರು. ಜನ ಮಾನಸದಲ್ಲಿ ಅಜರಾಮರವಾಗಿರುವ ಪುಟ್ಟರಾಜ ಗವಾಯಿಗಳು 96ನೇ ವಯಸ್ಸಿನಲ್ಲಿ ಲಿಂಗೈಕ್ಯರಾದರು. ಅವರು ಬದುಕಿದ್ದರೆ 111 ವರ್ಷ ತುಂಬಿರುತ್ತಿತ್ತು. ಅವರ ಜ್ಞಾನ ಕೇವಲ ಸಂಗೀತ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ತ್ರಿಭಾಷಾ ವಿದ್ವಾಂಸರಾಗಿದ್ದ ಗವಾಯಿಗಳು ಸಾರಂಗಿ, ಪಿಟೀಲು, ವೀಣೆ, ಮ್ಯಾಂಡೋಲಿನ್, ಸರೋದ್, ತಬಲಾ, ಹಾಮೋರ್ನಿಯಂ, ಸಿತಾರ್ ನುಡಿಸುತ್ತಿದ್ದರು. ಸಾಹಿತ್ಯ ಸಂಗೀತ, ಅಧ್ಯಾತ್ಮಕ್ಕೆ ಸಂಬಂಧಿಸಿದಂತೆ ಒಟ್ಟು 80 ಕೃತಿಗಳು ರಚಿಸಿದ್ದಾರೆ. ಸಂಗೀತ ಸೇವೆಯ ಜೊತೆ ಅವರು ಸ್ವತಃ 35 ನಾಟಕಗಳನ್ನು ರಚಿಸಿದ್ದಾರೆ.

PREV

Recommended Stories

ಉತ್ಪನ್ನ ಗುಣಮಟ್ಟ ಹೆಚ್ಚಿಸಿ ರಫ್ತು ಏರಿಸಿ: ರೆಡ್ಡಿ
ಪ್ಯಾರಾ ಥ್ರೋ ಬಾಲ್: ರಾಜ್ಯ ಮಹಿಳಾ ತಂಡಕ್ಕೆ ಟ್ರೋಫಿ