ತರೀಕೆರೆ, ಅಜ್ಜಂಪುರ ತಾಲೂಕಿನ 10,000 ಸಾವಿರ ರೈತರಿಗೆ ಗ್ರೂಪ್ ಟಾಕ್ ಮೂಲಕ ಕೃಷಿ ಮಾಹಿತಿ
ಕನ್ನಡಪ್ರಭ ವಾರ್ತೆ, ತರೀಕೆರೆರಾಗಿ ಮತ್ತು ಮುಸುಕಿನ ಜೋಳ ಬೆಳೆವಿಮೆಗೆ ನೋಂದಾಯಿಸಿಕೊಳ್ಳಲು ಆ.16 ಕೊನೆ ದಿನವಾಗಿದ್ದು, ಅಜ್ಜಂಪುರ ಮತ್ತು ತರೀಕೆರೆ ರೈತರು ಕೂಡಲೇ ಹತ್ತಿರದ ನಾಗರೀಕ ಸೇವಾ ಕೇಂದ್ರ ಅಥವಾ ಬ್ಯಾಂಕ್ ಗೆ ಭೇಟಿ ನೀಡಿ ರಾಗಿಗೆ ಎಕರೆಗೆ ರು.340 ಮತ್ತು ಮುಸುಕಿನ ಜೋಳಕ್ಕೆ ರು.452 ಪ್ರೀಮಿಯಮ್ ಪಾವತಿಸಲು ಸಹಾಯಕ ಕೃಷಿ ನಿರ್ದೇಶಕ ಲೋಕೇಶಪ್ಪ ತಿಳಿಸಿದರು.
ತರೀಕೆರೆ ಮತ್ತು ಅಜ್ಜಂಪುರ ತಾಲೂಕಿನ ಅನ್ನದಾತರಿಗೆ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ನಡೆದ ಗ್ರೂಪ್ ಟಾಕ್ ಮುಖಾಂತರ ರೈತರಿಗೆ ಸದ್ಯದ ಪರಿಸ್ಥಿತಿಯಲ್ಲಿ ವಿವಿಧ ಕೃಷಿ ಬೆಳೆಗಳ ನಿರ್ವಹಣೆ, ಕೃಷಿ ಇಲಾಖೆ ವಿವಿಧ ಯೋಜನೆಗಳ ಬಗ್ಗೆ ಬಗ್ಗೆ ಎರಡೂ ತಾಲೂಕಿನ 10,000 ರೈತರಿಗೆ ಮಾಹಿತಿ ನೀಡಲಾಯಿತು.ತಡವಾಗಿ ಬಿತ್ತನೆ ಮಾಡಿದ ಮುಸುಕಿನ ಜೋಳದಲ್ಲಿ ನೀರು ನಿಂತಿದ್ದರೆ ತಕ್ಷಣವೇ ಬಸಿಗಾಲುವೆ ಮಾಡಿ ನೀರು ಹೊರಕ್ಕೆ ಹಾಕಬೇಕು. ಕುಂಠಿತ ಬೆಳವಣಿಗೆಯಾದ ಕೃಷಿ ಮತ್ತು ತೋಟಗಾರಿಕೆ ಬೆಳೆಗಳಿಗೆ 19:19:19 ನೀರಿನಲ್ಲಿ ಕರಗುವ ರಸ ಗೊಬ್ಬರ ಮತ್ತು ಲಘು ಪೋಷಕಾಂಶ ದ್ರಾವಣವನ್ನು 5 ಮಿ ಲೀ. ಪ್ರತಿ ಲೀಟರ್ ನೀರಿಗೆ ಬೆರೆಸಿ ಬೆಳೆಗಳ ಮೇಲೆ ಸಿಂಪಡಣೆ ಮಾಡಲು ತಿಳಿಸಿದರು.
ರೈತ ಸಂಪರ್ಕ ಕೇಂದ್ರದಲ್ಲಿ ರಾಗಿಯ ಎಂ.ಎಲ್.365 ತಳಿ ಬೀಜ ಲಭ್ಯವಿದ್ದು 5 ಕೆ.ಜಿಗೆ ರು. 235 ವಂತಿಕೆ ನೀಡಿ ಖರೀದಿಸಿ ರಾಗಿ ಬಿತ್ತನೆ ಮಾಡಬೇಕು, ಲಕ್ಕವಳ್ಳಿ ಹೋಬಳಿಯಲ್ಲಿ ಭತ್ತದ ನಾಟಿ ಆರಂಭವಾಗಲಿದ್ದು, ನಾಟಿ ಮಾಡಲು ಶೇ 3 ರಷ್ಟು ಬೆವಿಸ್ಟಿನ್ ದ್ರಾವಣದಲ್ಲಿ ಸಸಿಗಳನ್ನು ಅದ್ದಿ, ನಾಟಿ ಮಾಡಿದಾಗ ಮುಂದೆ ಬರುವ ರೋಗಗಳನ್ನು ತಡೆಯಬಹುದು ಎಂದು ವಿವರಿಸಿದರು. ರೈತ ಸಂಪರ್ಕ ಕೇಂದ್ರದ ಸಹಾಯಧನದಲ್ಲಿ ಹಸಿರೆಲೆ ಬೀಜ ಗೊಬ್ಬರ, ವಿವಿಧ ಕೀಟನಾಶಕಗಳು, ಜೈವಿಕ ಗೊಬ್ಬರ, ಜೈವಿಕ ಕೀಟನಾಶಕ ಮತ್ತು ಲಘು ಪೋಷಾಕಾಂಶ ದೊರೆಯುತ್ತವೆ. ರೈತರು ಈ ಸದುಪಯೋಗ ಪಡೆಯಬೇಕು. ಪ್ರಧಾನ ಮಂತ್ರಿ ಕೃಷಿ ಸಿಂಚಯಿ ಯೋಜನೆಯಡಿ ನೋಂದಾಯಿಸಿದ ಎಲ್ಲಾ ರೈತರು ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ವಯ ಇಕೆವೈಸಿ ಮಾಡಿಸಬೇಕು. ಸಾಮಾನ್ಯ ಸೇವಾಕೇಂದ್ರದಲ್ಲಿ ಬಯೋಮೆಟ್ರಿಕ್ ಮೂಲಕ ಹಾಗೂ ಫೇಸ್ ಅಥೆಂಟಿಕೇಶನ್ ಮೊಬೈಲ್ ಅಪ್ಲಿಕೇಶನ್ ಮೂಲಕ ಇಕೆವೈಸಿ ಮಾಡಿಸ ಬಹುದು ಎಂದು ತಿಳಿಸಿದರು. ಪಿಎಂಕಿಸಾನ್ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಕೆಲವೊಂದು ಭೂದಾಖಲೆ ಸಮಸ್ಯೆಯಿಂದ ಕಂತುಗಳನ್ನು ತಡೆ ಹಿಡಿದಿದ್ದರೆ ಅಂತವರು ಸಂಬಂದಪಟ್ಟ ರೈತ ಸಂಪರ್ಕ ಕೇಂದ್ರಗಳನ್ನು ಭೇಟಿ ಮಾಡಿ ಪರಿಹಾರ ಕಂಡುಕೊಳ್ಳಬಹುದೆಂದು ತಿಳಿಸಿದರು. ಗ್ರೂಪ್ ಟಾಕ್ ನಲ್ಲಿ ಇಲ್ಲಾ ಹೋಬಳಿ ಕೃಷಿ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಜರಿದ್ದು, ರೈತರ ವಿವಿಧ ಪ್ರಶ್ನೆಗಳಿಗೆ ಸಹಾಯಕ ಕೃಷಿ ನಿರ್ದೇಶಕರು ಉತ್ತರಿಸಿ ಬೆಳೆ ನಿರ್ವಹಣೆ ಬಗ್ಗೆ ತಿಳಿಸಲಾಯಿತು.ತರೀಕೆರೆ ಉಪವಿಭಾಗದ ಉಪ ಕೃಷಿ ನಿರ್ದೇಶಕಿ ಹಂಸವೇಣಿ ಬೆಳೆ ಸಮೀಕ್ಷೆ ಬಗ್ಗೆ ವಿವರವಾಗಿ ಗ್ರೂಪ್ ಟಾಕ್ ನಲ್ಲಿ ಮಾತನಾಡಿ ನಮ್ಮ ಬೆಳೆ ನಮ್ಮ ಹಕ್ಕು ಶೀರ್ಷಿಕೆಯಡಿ ರೈತರು ಬೆಳೆ ಸಮೀಕ್ಷೆ 2024-25ನ್ನು ಗೂಗಲ್ ಪ್ಲೇ ಸ್ಟೋರ್ನಲ್ಲಿ ಡೌನ್ ಲೋಡ್ ಮಾಡಿಕೊಂಡು ಬೆಳೆ ಸಮೀಕ್ಷೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು. ತಾಂತ್ರಿಕ ಅಧಿಕಾರಿ ಶಿವಶಂಕರ್ ಎಂ.ವಿ ಇತರರು ಹಾಜರಿದ್ದರು.3ಕೆಟಿಆರ್.ಕೆ.5ಃತರೀಕೆರೆ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಗ್ರೂಪ್ ಟಾಕ್ ಮುಖಾಂತರ ರೈತರಿಗೆ ಕೃಷಿ ಇಲಾಖೆಯಿಂದ ವಿವಿಧ ಕೃಷಿ ಬೆಳೆಗಳ ನಿರ್ವಹಣೆ ಬಗ್ಗೆ ಕೃಷಿ ನಿರ್ದೇಶಕ ಲೋಕೇಶಪ್ಪ ಮಾಹಿತಿ ನೀಡಿದರು. ಉಪ ಕೃಷಿ ನಿರ್ದೇಶಕರಾದ ಹಂಸವೇಣಿ, ಕೃಷಿ ಅಧಿಕಾರಿ ಶಿವಪ್ರಸಾದ್ ಇದ್ದಾರೆ.