ಹೂವಿನಹಡಗಲಿ : ಮಲ್ಲಿಗೆ ನಾಡಿನ ಬಾಲಕಿ ಸಹನಾ ಪಟಿಗೆ ಬೀದರ್ ತೋಟಗಾರಿಕೆ ಕಾಲೇಜಿನಲ್ಲಿ ಬಿಎಸ್ಸಿ ಹಾನ್ಸ್ ತೋಟಗಾರಿಕೆ ಓದಿ ಒಟ್ಟು 17 ಚಿನ್ನದ ಪದಕ ಮುಡಿಗೇರಿಸಿಕೊಂಡು ತಾಲೂಕಿಗೆ ಕೀರ್ತಿ ತಂದಿದ್ದಾಳೆ. 2021 ರಿಂದ 2025ನೇ ಶೈಕ್ಷಣಿಕ ಸಾಲಿನಲ್ಲಿ ಪದವಿ ಪೂರೈಸಿ ಈ ಸಾಧನೆ ಮಾಡಿದ್ದಾಳೆ.
ಹೂವಿನಹಡಗಲಿ ತಾಲೂಕಿನ ಹೊಳಲು ಗ್ರಾಮದ ಮಂಜುನಾಥ ಪಟಿಗೆ ಟೈಲರ್ ಕೆಲಸ ಮಾಡಿಕೊಂಡು, ತನ್ನ ಮೂರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುತ್ತಿದ್ದಾರೆ. ಅದರಲ್ಲಿ ಮೊದಲ ಪುತ್ರಿ ಸಹನಾ ಪಟಿಗೆ ಉತ್ತಮ ಅಭ್ಯಾಸ ಮಾಡಿ ಎಂಟು ಕಾಲೇಜು ಒಳಗೊಂಡಿರುವ ವಿಶ್ವವಿದ್ಯಾಲಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾಳೆ. ವಿವಿ ಹಾಗೂ ವಿವಿಧ ಟ್ರಸ್ಟ್ಗಳಿಂದ ನೀಡುವ 17 ಚಿನ್ನದ ಪದಕ ಪಡೆದು ಮಲ್ಲಿಗೆ ನಾಡಿಗೆ ಕೀರ್ತಿ ತಂದಿದ್ದಾಳೆ.
ಇಂಡೋ ಅಮೇರಿಕನ್ ಹೈಬ್ರಿಡ್ ಬೀಜ ನಿಗಮ, ಬಾಲಚಂದ್ರ ನಾನೈ ಗಣಪತಿ ಮೆಮೋರಿಯಲ್ ಟ್ರಸ್ಟ್, ಮ್ಯಾಕ್ಸ್ ವರ್ತ್ ಅರ್ಚಡ್ ಲಿಮಿಟೆಡ್, ಎಲ್.ಎ.ಜಿ.ಎಸ್ ಫೌಂಡೇಷನ್, ಶ್ರೀಮತಿ ಶಿವಲಿಂಗವ್ವ ವಿರುಪಾಕ್ಷಪ್ಪ ಹಾಲಪ್ಪನವರ, ಶ್ರೀಬಸವನಗೌಡ ಐಯಪ್ಪಗೌಡ ಪಾಟೀಲ್ ಟ್ರಸ್ಟ್, ಡಿ.ಶ್ರೀಮತಿ ನೀಲವ್ವ ಶಿವಲಿಂಗಪ್ಪ ಶಿರೋಳ, ಡಾ. ಎಸ್.ಎ ಪಾಟೀಲ್, ಮಾಜಿ ಉಪಕುಲಪತಿ ಯುಎಸ್ಎ ಧಾರವಾಡ, ದಿ.ಡಾ. ಪ್ರದೀಪ ಬಾಲಕೃಷ್ಣ ರಾವ್ ಪಾಟೀಲ್, ದಿ.ಸುಮ ಎಸ್. ದಂಡಿನ್ ಮೆಮೋರಿಯಲ್, ದಿ.ವಿಶ್ವನಾಥ ಕಟ್ಟೆ ಮೆಮೋರಿಯಲ್, ದಿ.ರಾಜೇಶ್ವರಿ ವಿಶ್ವನಾಥ ಕಟ್ಟೆ ಮೆಮೋರಿಯಲ್, ದಿ.ದಶರಥ ರಾವ್ ಕೋರ್ಟಕಿ ಆ್ಯಂಡ್ ಈರಮ್ಮ ಕೋರ್ಟಕಿ ಎಂಬ ಪ್ರತಿಷ್ಠಿತ ಟ್ರಸ್ಟ್ ವತಿಯಿಂದ ನೀಡುವ ಚಿನ್ನದ ಪದಕಗಳನ್ನು ಪಡೆದಿದ್ದಾಳೆ.
ಸಹನಾ ಪಟಿಗೆ ಹೊಳಲು ಗ್ರಾಮದ ಸ್ವಾಮಿ ವಿವೇಕಾನಂದ ಸರ್ಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಅಭ್ಯಾಸ ಮಾಡಿದ್ದಾಳೆ. 2017ನೇ ಸಾಲಿನ ಎಸ್ಎಸ್ಎಲ್ಸಿಯಲ್ಲಿ ಬಳ್ಳಾರಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದು ಗ್ರಾಮಕ್ಕೆ ಕೀರ್ತಿ ತಂದಿದ್ದಳು. ಸತತ ಪರಿಶ್ರಮದ ಓದು, ಸಾಧಿಸುವ ಛಲಹೊಂದಿರುವ ಈಕೆ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಿ ಎಲ್ಲರಿಗೂ ಮಾದರಿಯಾಗಿದ್ದಾಳೆ. ಸಹನಾಗೆ ಹಲವಾರು ಸಂಘ-ಸಂಸ್ಥೆಗಳು ಪ್ರಶಸ್ತಿ ಪುರಸ್ಕಾರ ನೀಡಿ ಗೌರವಿಸಿದ್ದಾರೆ.
ಬಾಲಕಿಯಾಗಿದ್ದಾಗ ಓದಿನ ಕಡೆಗೆ ಹೆಚ್ಚು ಆಸಕ್ತಿ ಹೊಂದಿ ನಿನ್ನ ಸಾಧನೆ ಮಾಧ್ಯಮದಲ್ಲಿ ಪ್ರಕಟವಾಗಬೇಕೆಂಬ ಆಶಯವನ್ನು ನನ್ನ ತಂದೆ ಹೊಂದಿದ್ದರು. ಅದರಂತೆ ನಾನು ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಟಾಪರ್ ಆಗಿದ್ದೆ, ಈಗ ಕಾಲೇಜಿನಲ್ಲಿ ಅಧಿಕ ಅಂಕ ಗಳಿಸಿ 17 ಚಿನ್ನದ ಪದಕ ಪಡೆಯಲು ತಂದೆಯು ಪ್ರೇರಣೆಯಾಗಿದ್ದಾರೆ ಎನ್ನುತ್ತಾರೆ ಸಹನಾ.