ಕನ್ನಡಪ್ರಭವಾರ್ತೆ ಪುತ್ತೂರು:
ಕರಾವಳಿ ಭಾಗದಲ್ಲಿ ಬಿಟ್ಟು ಬಿಟ್ಟು ಸುರಿಯುವ ಮಳೆಯಿಂದಾಗಿ ಹೆಚ್ಚಾಗಿ ಡೆಂಘೀ ಸಂಬಂಧಿತ ಜ್ವರ ಕಾಣಿಸಿಕೊಳ್ಳುತ್ತವೆ. ಇದೀಗ ಪುತ್ತೂರು ಮತ್ತು ಕಡಬ ತಾಲೂಕಿನಲ್ಲಿ ಕಾಣಿಸಿಕೊಂಡಿರುವ ಡೆಂಘೀ ಪ್ರಕರಣಗಳಲ್ಲಿ ಎಲ್ಲ ರೋಗಿಗಳು ಮಂಗಳೂರಿನ ಆಸ್ಪತ್ರೆಗಳಲ್ಲಿ ಚಿಕಿತ್ಸೆಯನ್ನ ಪಡೆದುಕೊಳ್ಳುತ್ತಿದ್ದಾರೆ. ಆದರೆ ಆಧಾರ್ ಕಾರ್ಡ್ ವಿಳಾಸದ ಪ್ರಕಾರ ಅವರು ಪುತ್ತೂರು ಮತ್ತು ಕಡಬ ತಾಲೂಕಿಗೆ ಒಳಪಟ್ಟವರಾಗಿದ್ದಾರೆ. ಹಾಗಾಗಿ ಈ ಡೆಂಘೀ ಪ್ರಕರಣ ಪುತ್ತೂರು ಮತ್ತು ಕಡಬ ವ್ಯಾಪ್ತಿಗೆ ಒಳಪಡುತ್ತವೆ.
ಈಗಾಗಲೇ ಕಡಬ ಮತ್ತು ಪುತ್ತೂರು ತಾಲೂಕಿನ ಸಮುದಾಯ ಆರೋಗ್ಯ ಕೇಂದ್ರ ಹಾಗೂ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ಇದರಲ್ಲಿ ಹೆಚ್ಚಾಗಿ ಬೆಂಗಳೂರಿನಲ್ಲಿ ಡೆಂಘೀ ಪಾಸಿಟಿವ್ ಕಾಣಿಸಿಕೊಂಡ ರೋಗಿಗಳು ಬಂದು ಇಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬೆಂಗಳೂರಿನಿಂದ ಬಂದಂತಹ ಡೆಂಘೀ ರೋಗಿಗಳ ತೀವ್ರತೆ ಹೆಚ್ಚಾಗಿದೆ. ಆದರೆ ಊರಿನ ಕೆಲವು ಡೆಂಘೀ ಪ್ರಕರಣದ ರೋಗಿಗಳ ತೀವ್ರತೆ ತುಂಬಾ ಕಡಿಮೆ ಇದೆ. ಈವರೆಗೆ ಯಾವುದೇ ಡೆಂಘೀ ಸಾವಿನ ಪ್ರಕರಣ ವರದಿಯಾಗಿಲ್ಲ.ಪುತ್ತೂರು ತಾಲೂಕಿನಲ್ಲಿ ಖಚಿತವಾದ ೭ ಡೆಂಘೀ ಪ್ರಕರಣಗಳು ಇವೆ. ಉಳಿದಂತೆ ವೈರಲ್ ಫೀವರ್ಗೆ ಸಂಬಂಧಪಟ್ಟದ್ದಾಗಿವೆ. ಉಪ್ಪಿನಂಗಡಿ ನಗರ ಭಾಗಗಳಲ್ಲೂ ೩೫ ಡೆಂಘೀ ಪ್ರಕರಣಗಳು ಪತ್ತೆಯಾಗಿವೆ. ಜನರು ಆದಷ್ಟು ಮನೆ ಪಕ್ಕ ನೀರು ಶೇಖರಣೆಯಾಗದಂತೆ ನೋಡಿಕೊಳ್ಳಬೇಕು. ಇದಕ್ಕಾಗಿ ಈಗಾಗಲೇ ಬೇರೆ ಬೇರೆ ಅಧಿಕಾರಿಗಳನ್ನು ನೇಮಿಸಿ ಮಾಹಿತಿ ನೀಡುವ ಕೆಲಸ ಆರಂಭಿಸಿದ್ದೇವೆ ಎಂದು . ಈ ಮೂಲಕ ಡೆಂಗ್ಯೂ ಜ್ವರ ನಿಯಂತ್ರಣದ ಬಗ್ಗೆ ಪ್ರಯತ್ನ ನಡೆಸಲಾಗುತ್ತಿದೆ ಎಂದು ಆರೋಗ್ಯಾಧಿಕಾರಿ ಡಾ. ದೀಪಕ್ ರೈ ತಿಳಿಸಿದ್ದಾರೆ.