ಲಪಟಾಯಿಸಿದ್ದ 19.23 ಎಕರೆ ಜಮೀನು ಸರ್ಕಾರಕ್ಕೆ ವಾಪಸ್

KannadaprabhaNewsNetwork |  
Published : Oct 09, 2025, 02:01 AM IST
ಚಿಮ್ಮಡದಲ್ಲಿ ನಡೆದ ಭೂ ಮಾಫಿಯಾ ಪ್ರಕರಣದಲ್ಲಿ ಭಾಗಿಯಾದವರನ್ನು ಬಂಧಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರರವರಿಗೆ ಮನವಿ ಮನವಿ ಸಲ್ಲಿಸಿದ್ದ ಗ್ರಾಮಸ್ಥರು. | Kannada Prabha

ಸಾರಾಂಶ

ಮಹಾಲಿಂಗಪುರ ಸಮೀಪದ ಚಿಮ್ಮಡ ಗ್ರಾಮದ ಸರ್ಕಾರಿ ಗೋಮಾಳ ಖಾಸಗಿ ವ್ಯಕ್ತಿಗಳ ಹೆಸರಿಗೆ ಪರಭಾರೆಯಾಗಿದ್ದನ್ನು ವಿರೋಧಿಸಿ ಗ್ರಾಮದ ಪ್ರಮುಖರು ಹಾಗೂ ಗ್ರಾಮ ಪಂಚಾಯತಿ ಸದಸ್ಯರು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ ಪರಿಣಾಮ ಪರಭಾರೆಯಾಗಿದ್ದ ೧೯.೨೩ ಎಕರೆ ಜಮೀನು ಸರ್ಕಾರಕ್ಕೆ ಮರಳಿದೆ.

ಕನ್ನಡಪ್ರಭ ವಾರ್ತೆ ಮಹಾಲಿಂಗಪುರ

ಸಮೀಪದ ಚಿಮ್ಮಡ ಗ್ರಾಮದ ಸರ್ಕಾರಿ ಗೋಮಾಳ ಖಾಸಗಿ ವ್ಯಕ್ತಿಗಳ ಹೆಸರಿಗೆ ಪರಭಾರೆಯಾಗಿದ್ದನ್ನು ವಿರೋಧಿಸಿ ಗ್ರಾಮದ ಪ್ರಮುಖರು ಹಾಗೂ ಗ್ರಾಮ ಪಂಚಾಯತಿ ಸದಸ್ಯರು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ ಪರಿಣಾಮ ಪರಭಾರೆಯಾಗಿದ್ದ ೧೯.೨೩ ಎಕರೆ ಜಮೀನು ಸರ್ಕಾರಕ್ಕೆ ಮರಳಿದೆ.

ಗ್ರಾಮದ ವ್ಯಾಪ್ತಿಯಲ್ಲಿರುವ ಸರ್ವೆ ನಂ.೫೯/೧ರಲ್ಲಿನ ಸುಮಾರು ೧೯ ಎಕರೆ ೨೩ ಗುಂಟೆ ಜಮೀನು ಸರ್ಕಾರ ಜಾನುವಾರು ಮೇಯಿಸಲು ಗೋಮಾಳಕ್ಕೆ ಮೀಸಲಿರಿಸಿತ್ತು. ಈ ಜಮೀನಿಗೆ ದಾಖಲೆಗಳಲ್ಲಿ ಗುರುಚರಣ (ಸರ್ಕಾರಿ ಜಮೀನು) ಎಂದು ನೋಂದಣಿಯಾಗಿದೆ. ಈ ಭಾಗದಲ್ಲಿ ಬಹುತೇಕ ಗೋಮಾಳ ಜಾಗಗಳಿಗೆ ಗುರುಚರಣ ಎಂದೇ ದಾಖಲಾಗಿವೆ. ಇದನ್ನೇ ದುರುಪಯೋಗಪಡಿಸಿಕೊಂಡ ಶಿವಮೊಗ್ಗದ ಶ್ರೀ ಗುರುಚರಣ ಬಿನ್ ಮುರುಳಪ್ಪ ಎನ್ನುವ ವ್ಯಕ್ತಿ ೧೪-೮-೨೦೨೫ರಂದು ಶಿವಮೊಗ್ಗದ ಉಪನೊಂದಣಾಧಿಕಾರಿ ಕಚೇರಿಯಲ್ಲಿ ತಮ್ಮ ಹೆಸರಿಗೆ ಮುಕ್ತಾರ ಪತ್ರ (ಜಿಪಿಎ) ಮಾಡಿಕೊಂಡಿದ್ದರು.ನಂತರ ೨೬-೮-೨೦೨೫ರಂದು ಮುಕ್ತಾರ ಪತ್ರದನ್ವಯ ಮುಧೋಳ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಮುಧೋಳ ತಾಲೂಕಿನ ಮುಗಳಖೋಡದ ಶ್ರೀಶೈಲ ದುಂಡಪ್ಪ ಪಶ್ಚಾಪೂರ ಅವರ ಹೆಸರಿಗೆ ಖರೀದಿ ನೋಂದಣಿ ಮಾಡಿದ್ದರು. ಸರ್ಕಾರಿ ಜಮೀನು ಕಬಳಿಸುತ್ತಿರುವ ಭೂಗಳ್ಳರನ್ನು ಹಾಗೂ ಪ್ರಕರಣದಲ್ಲಿ ಭಾಗಿಯಾದ ಉಪ ನೋಂದಣಾಧಿಕಾರಿ, ದಸ್ತು ಬರಹಗಾರ ಹಾಗೂ ಪ್ರಕರಣಕ್ಕೆ ಸಹಾಯ, ಸಹಕಾರ ನೀಡಿದ ಪ್ರತಿಯೊಬ್ಬರನ್ನು ತಕ್ಷಣವೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪೂರ, ಸಂಸದ ಪಿ.ಸಿ. ಗದ್ದಿಗೌಡರ, ಜಿಲ್ಲಾಧಿಕಾರಿ ಸಂಗಪ್ಪ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಸಿಧ್ಧಾರ್ಥ ಗೊಯಲ್‌ ಅವರಿಗೆ ಗ್ರಾಮಸ್ಥರು ಮನವಿ ಸಲ್ಲಿಸಿ ಒತ್ತಾಯಿಸಿದ್ದರು.

ನಂತರ ನಡೆದ ಬೆಳವಣಿಗೆಯಲ್ಲಿ ಜಮೀನು ಪರಭಾರೆ ಮಾಡಿಕೊಂಡಿದ್ದ ಶಿವಮೊಗ್ಗದ ಶ್ರೀ ಗುರುಚರಣ ಬಿನ್ ಮುರುಳಪ್ಪ ಹಾಗೂ ಶ್ರೀಶೈಲ ದುಂಡಪ್ಪ ಪಶ್ಚಾಪೂರ ಅವರು ಮಾಡಿಕೊಂಡಿದ್ದ ಎಲ್ಲಾ ವ್ಯವಹಾರ ರದ್ದುಪಡಿಸಿ ಅವರ ಮೇಲೆ ಪ್ರಕರಣ ದಾಖಲಿಸಿ, ಜಮೀನನ್ನು ಮರಳಿ ಸರ್ಕಾರದ ಹೆಸರಿಗೆ ನೋಂದಾಯಿಸಿದ್ದು, ಪರೀಷ್ಕೃತ ಪಹಣಿಪತ್ರ ಇಂದು ಸಾರ್ವಜನಿಕಗೊಳಿಸಲಾಗಿದೆ.

ಮನವಿಗೆ ಸ್ಪಂದಿಸಿ ಗ್ರಾಮಸ್ಥರಿಗೆ ಜಮೀನು ಮರಳಿ ಸಿಗುವಂತೆ ಮಾಡಿದ ಸಚಿವರು, ಸಂಸದರು, ಅಧಿಕಾರಿಗಳಿಗೆ ಗ್ರಾ.ಪಂ. ಅಧ್ಯಕ್ಷೆ ಬಂಗಾರೆವ್ವ ಜಾಲಿಕಟ್ಟಿ ಮಾಜಿ ಅಧ್ಯಕ್ಷ ಶಂಕರ ಬಟಕುರ್ಕಿ, ಪರಪ್ಪಾ ಪಾಲಭಾವಿ, ಬೀರಪ್ಪ ಹಳೆಮನಿ, ಬಸವರಾಜ ಕುಂಚನೂರ, ವಿಜಯಕುಮಾರ ಪೂಜಾರಿ, ಮನೋಜ ಹಟ್ಟಿ, ಬಾಳೆಶ ಬ್ಯಾಕೋಡ, ಮಹಾಂತೇಶ ಜಾಲಿಕಟ್ಟಿ, ಸುರೇಶ ಪೂಜಾರಿ, ನಾಗಪ್ಪ ಆಲಕನೂರ, ಪ್ರಭು ಗೋವಿಂದಗೋಳ, ಯಮನಪ್ಪ ಮಾದರ, ಹಣಮಂತ ಬಜಂತ್ರಿ ಸೇರಿದಂತೆ ಗ್ರಾಮದ ಪ್ರಮುಖರು ಅಭಿನಂದಿದ್ದು, ಪ್ರಕರಣದಲ್ಲಿ ಭಾಗಿಯಾಗಿರುವ ವ್ಯಕ್ತಿಗಳನ್ನು ಬಂಧಿಸಿ ಶಿಕ್ಷೆಗೊಳಪಡಿಸಿ, ಇಂತಹ ಪ್ರಕರಣ ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಂಗವಿಕಲತೆ ನಿರ್ಮೂಲನೆಗೆ ತಪ್ಪದೇ ಪಲ್ಸ್ ಪೋಲಿಯೋ ಲಸಿಕೆ ಹಾಕಿಸಿ
ಕಾಂಗ್ರೆಸ್ಸಿನಿಂದ ಉ.ಕ.ಕ್ಕೆ ಹೆಚ್ಚು ಅನ್ಯಾಯ-ಸಂಸದ ಬೊಮ್ಮಾಯಿ