ಬಂಟ್ವಾಳ : ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿ.ಸಿ ರೋಡ್-ಅಡ್ಡಹೊಳೆ ಚತುಷ್ಪಥ ಕಾಮಗಾರಿ ಭಾಗವಾಗಿ ನಿರ್ಮಿಸಿರುವ 2.1 ಕಿ.ಮೀ. ಉದ್ದದ ಕಲ್ಲಡ್ಕ ಮೇಲ್ಸೇತುವೆಯಲ್ಲಿ ಸೋಮವಾರದಿಂದ ಏಕಮುಖ ಸಂಚಾರ ಕೊನೆಗೂ ಆರಂಭವಾಗಿದೆ.
ಮುಂಗಾರು ಚುರುಕುಗೊಂಡಿರುವ ಕಾರಣ ಮಂಗಳೂರು-ಬೆಂಗಳೂರು ಹೆದ್ದಾರಿಯಲ್ಲಿ ಬಿ.ಸಿ.ರೋಡ್-ಅಡ್ಡಹೊಳೆ ಚತುಷ್ಪಥ ರಸ್ತೆ ಕಾಮಗಾರಿಯಿಂದಾಗಿ ವಾಹನಗಳ ಸಂಚಾರಕ್ಕೆ ಅಡ್ಡಿ-ಆತಂಕ ಎದುರಾಗುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದಿವೆ. ಈ ಹಿನ್ನಲೆಯಲ್ಲಿ ಎಲ್ಲೆಲ್ಲಿ ಕಾಮಗಾರಿಯಿಂದ ವಾಹನಗಳ ಸಂಚಾರಕ್ಕೆ ತೊಂದರೆ ಎದುರಾಗಿದೆಯೋ ಅಲ್ಲೆಲ್ಲ ಸಮಸ್ಯೆಗಳಿಗೆ ತುರ್ತಾಗಿ ಸ್ಪಂದಿಸಿ ಜನರ ಓಡಾಟಕ್ಕೆ ತೊಂದರೆಯಾಗದಂತೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕೆಂದು ಕ್ಯಾ. ಚೌಟ ಅವರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಇತ್ತೀಚೆಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು.
ಮೇ 29ರಿಂದ ಹೆದ್ದಾರಿ ಪ್ರಾಧಿಕಾರವು ಮಾಣಿ ಬಳಿಯ ವೆಹಿಕಲ್ ಅಂಡರ್ ಪಾಸ್(ವಿಯುಪಿ) ಹಾಗೂ ಉಪ್ಪಿನಂಗಡಿ ಬಳಿಯ ವೆಹಿಕಲ್ ಅಂಡರ್ ಪಾಸ್ ದ್ವಿ ಪಥವನ್ನು ಸಂಚಾರಕ್ಕೆ ಮುಕ್ತಗೊಳಿಸಿದೆ. ಜೂ. 2ರಿಂದ ಕಲ್ಲಡ್ಕ ಪೇಟೆಯಲ್ಲಿರುವ ಮೇಲುರಸ್ತೆ(ಫ್ಲೈಓವರ್)ಯಲ್ಲಿ ಎಡಭಾಗವನ್ನು ವಾಹನಗಳ ಸಂಚಾರಕ್ಕೆ ತೆರವುಗೊಳಿಸಲಾಗಿದೆ.ಸುದೀರ್ಘ ಫ್ಲೈಓವರ್ ಇದು:
ಬಿ.ಸಿ.ರೋಡ್ ನಿಂದ ಅಡ್ಡಹೊಳೆವರೆಗೆ 64 ಕಿ.ಮೀ. ಉದ್ದದ ಹೆದ್ದಾರಿ ಕಾಮಗಾರಿಯನ್ನು 2017ರಲ್ಲಿ ಎಲ್ ಆಂಡ್ ಟಿ ಕಂಪನಿಗೆ 821 ಕೋಟಿ ರು.ಗಳಿಗೆ ವಹಿಸಲಾಗಿತ್ತು. ಹಲವು ಕಾರಣಕ್ಕೆ ವಿಳಂಬವಾಗಿ ಬಳಿಕ ಅರ್ಧದಲ್ಲೇ ಸ್ಥಗಿತಗೊಂಡಿತು.
2021ರಲ್ಲಿ 64 ಕಿ.ಮೀ. ಉದ್ದದ ಹೆದ್ದಾರಿಯನ್ನು 49 ಕಿ.ಮೀ ಹಾಗೂ 15 ಕಿ.ಮೀ. ಎಂದು ವಿಭಾಗಿಸಿ ಕೆಎನ್ಆರ್ ಕನ್ಸ್ಟ್ರಕ್ಷನ್ಸ್ ಹೈದರಾಬಾದ್ ಹಾಗು ಎಂ. ಔತಡೆ ಪ್ರೈ. ಲಿ. ಮಹಾರಾಷ್ಟ್ರ ಕಂಪನಿಗಳಿಗೆ ಗುತ್ತಿಗೆ ನೀಡಲಾಯಿತು. ಅಲ್ಲಿಂದ ಕಾಮಗಾರಿಗೆ ವೇಗ ದೊರಕಿತು. ಪಾಣೆಮಂಗಳೂರು, ಮೆಲ್ಕಾರ್, ಮಾಣಿ, ನೆಕ್ಕಿಲಾಡಿ, ಉಪ್ಪಿನಂಗಡಿ ಜಂಕ್ಷನ್, ಉಪ್ಪಿನಂಗಡಿ ಸುಬ್ರಹ್ಮಣ್ಯ ಕ್ರಾಸ್, ನೆಲ್ಯಾಡಿ, ಪೆರಿಯಶಾಂತಿಗಳಲ್ಲಿ ಓವರ್ ಪಾಸ್ ಮೇಲ್ಸೇತುವೆ ಹಾಗೂ ಕಲ್ಲಡ್ಕದಲ್ಲಿ 2.1 ಕಿ.ಮೀ. ಉದ್ದದ ಫ್ಲೈಓವರ್ ನಿರ್ಮಾಣ ಕಾಮಗಾರಿ ಏಕಕಾಲದಲ್ಲಿ ಆರಂಭಗೊಂಡಿತು.
ಕಲ್ಲಡ್ಕದ ಪೂರ್ಲಿಪ್ಪಾಡಿಯಿಂದ ಕೃಷ್ಣಕೋಡಿಯವರೆಗೆ ಒಟ್ಟು 2.1 ಕಿ.ಮೀ. ಉದ್ದರ ಈ ಮೇಲ್ಸೇತುವೆಯಲ್ಲಿ 70 ಪಿಲ್ಲರ್ ಗಳಿವೆ. ಒಂದರಿಂದ ಇನ್ನೊಂದಕ್ಕೆ 30 ಮೀಟರ್ ಅಂತರವಿದ್ದು, ಒಟ್ಟು 72 ಸ್ಪಾನ್ ಗಳ ಫ್ಲೈಓವರ್ ಇದಾಗಿದೆ.ಜೂನ್ ಕೊನೆಯೊಳಗೆ ಫ್ಲೈಓವರ್ ಗೆ ಸಂಬಂಧಪಟ್ಟ ಎಲ್ಲ ಕಾಮಗಾರಿ ಮುಕ್ತಾಯಗೊಳ್ಳುವ ನಿರೀಕ್ಷೆ ಇದೆ
ಉದ್ಘಾಟನೆಯ ವಿಡೀಯೋ ಭಾರಿ ವೈರಲ್
ಸೋಮವಾರ ಬೆಳಗ್ಗಿನಿಂದಲೇ ಕಲ್ಲಡ್ಕ ಮೇಲ್ಸೇತುವೆ ಮೇಲೆ ವಾಹನ ಸಂಚಾರ ಆರಂಭಗೊಂಡಿದ್ದು, ನೂತನ ಸೇತುವೆಯ ಮೇಲಿನ ಪ್ರಥಮಸಂಚಾರವನ್ನು ಹಲವು ವಾಹನ ಸವಾರರು, ಚಾಲಕರು, ಪ್ರಯಾಣಿಕರು ವಿಡಿಯೋ ಚಿತ್ರೀಕರಣ ನಡೆಸಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದು, ಕಲ್ಲಡ್ಕದ ಫ್ಲೈ ಓವರ್ ಉತ್ತಮ ವಿಚಾರಕ್ಕೆ ವೈರಲ್ ಆಗಿದೆ.
ಬೆಳಗ್ಗೆ 10.30ಕ್ಕೆ ಫ್ಲೈ ಓವರ್ ನ ಆರಂಭಿಕ ಭಾಗವಾದ ಪೂರ್ಲಿಪಾಡಿಯಲ್ಲಿ ಸೇರಿದ ಕಲ್ಲಡ್ಕದ ನಾಗರಿಕರು, ಹಿರಿಯ ಮುಂದಾಳು, ಕಲ್ಲಡ್ಕ ಶ್ರೀರಾಮ ವಿದ್ಯಾಸಂಸ್ಥೆಗಳ ಸಂಸ್ಥಾಪಕ ಕಲ್ಲಡ್ಕ ಡಾ.ಪ್ರಭಾಕರ್ ಭಟ್ ನೇತೃತ್ವದಲ್ಲಿ ಒಟ್ಟು ಸೇರಿ ಪ್ಲೈ ಓವರ್ ಸಂಚಾರವನ್ನು ಸ್ವಾಗತಿಸಿದ್ದಾರೆ.
ಮಾಜಿ ಶಾಸಕರಾದ ಎ.ರುಕ್ಮಯ ಪೂಜಾರಿ, ಕೆ.ಪದ್ಮನಾಭ ಕೊಟ್ಟಾರಿ, ಬಂಟ್ವಾಳ ಬಿಜೆಪಿ ಮಂಡಲ ಅಧ್ಯಕ್ಷ ಚೆನ್ನಪ್ಪ ಆರ್.ಕೋಟ್ಯಾನ್, ವಿಠಲ ನಾಯ್ಕ, ಹಿರಣ್ಮಯಿ, ಯತೀನ್ ಪೂಜಾರಿ, ಕಂಪೆನಿಯ ಪಿ.ಎಮ್.ಮಹೇಂದ್ರ ಸಿಂಗ್, ಎ.ಜಿ.ಎಮ್ ರೋಹಿತ್ ರೆಡ್ಡಿ ಡಿಎಮ್ ರಘನಾಥ ರೆಡ್ಡಿ, ಡೆಪ್ಯುಟಿ ಪ್ರಾಜೆಕ್ಟ್ ಮ್ಯಾನೇಜರ್ ಅಯ್ಯಪ್ಪ ಸ್ವಾಮಿ, ಜನಾರ್ಧನ ಬೊಂಡಾಲ, ಶಂಭು ಕೋರ್ಯ, ಲೋಕಾನಾಂದ, ಸುರೇಶ್ ಶೆಟ್ಟಿ, ಚಂದ್ರ ಶೇಖರ ಟೈಲರ್, ಪೂವಪ್ಪ, ಚಿತ್ತರಂಜನ್, ಸುಜಿತ್ ಕೊಟ್ಟಾರಿ, ಸತೀಶ್ ಕುಮಾರ್ ಶಿವಗಿರಿ, ತಿರುಮಲೇಶ್ ಭಟ್, ಗೋಪಾಲ ಶೆಣೈ, ನಾಗೇಶ್ ಕಲ್ಲಡ್ಕ,ಮಾದವ ಸಾಲ್ಯಾನ್,ಸನತ್ ರವಿಕುಮಾರ್, ಕೂಸಪ್ಪ ಮತ್ತಿತರರು ಇದ್ದರು.