ನಗರದಲ್ಲಿ ಡ್ರಗ್ಸ್ ದಂಧೆಯಲ್ಲಿ ತೊಡಗಿದ್ದ ಇಬ್ಬರು ಹೋಟೆಲ್ ಕಾರ್ಮಿಕರು ಸೇರಿ ಐವರನ್ನು ಪ್ರತ್ಯೇಕವಾಗಿ ಮಲ್ಲೇಶ್ವರ ಹಾಗೂ ಅಶೋಕನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ನಗರದಲ್ಲಿ ಡ್ರಗ್ಸ್ ದಂಧೆಯಲ್ಲಿ ತೊಡಗಿದ್ದ ಇಬ್ಬರು ಹೋಟೆಲ್ ಕಾರ್ಮಿಕರು ಸೇರಿ ಐವರನ್ನು ಪ್ರತ್ಯೇಕವಾಗಿ ಮಲ್ಲೇಶ್ವರ ಹಾಗೂ ಅಶೋಕನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೇರಳ ಕಾಸರಗೋಡು ಮೂಲದ ಹಮ್ಜಾ ಮಹಮದ್, ಮಹಮದ್ ಯಾಸಿರ್, ಅಫ್ರಾನ್, ಕೊಡಗು ಜಿಲ್ಲೆಯ ಸಬಿತ್ ಹಾಗೂ ಶ್ರೀನಾಥ್ ಬಂಧಿತರು. ಆರೋಪಿಗಳಿಂದ 2.56 ಕೋಟಿ ರು.ಮೌಲ್ಯದ 3.6 ಕೆಜಿ ಹೈಡ್ರೋ ಗಾಂಜಾ ಜಪ್ತಿ ಮಾಡಲಾಗಿದೆ.
ಹಲವು ದಿನಗಳಿಂದ ಹೊರರಾಜ್ಯಗಳಲ್ಲಿ ಕಡಿಮೆ ಬೆಲೆಗೆ ಹೈಡ್ರೋ ಗಾಂಜಾ ಖರೀದಿಸಿ ನಗರಕ್ಕೆ ತಂದು ಈ ಐವರು ಮಾರಾಟ ಮಾಡುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದು ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೋಟೆಲ್ ಕೆಲಸಗಾರರು:
ಡ್ರಗ್ಸ್ ದಂಧೆಯಲ್ಲಿ ತೊಡಗಿದ್ದಪ್ರತಿಷ್ಠಿತ ಹೋಟೆಲ್ ಇಬ್ಬರು ಕೆಲಸಗಾರರು ಸೇರಿದಂತೆ ಮೂವರು ಮಲ್ಲೇಶ್ವರ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಕೇರಳ ಮೂಲದ ಅಫ್ರಾನ್, ಕೊಡಗಿನ ಶ್ರೀನಾಥ್ ಹಾಗೂ ಸಬಿತ್ ಬಂಧಿತರಾಗಿದ್ದು, ಆರೋಪಿಗಳಿಂದ 16.24 ಲಕ್ಷ ರು ಮೌಲ್ಯದ 464 ಗ್ರಾಂ ಹೈಡ್ರೋ ಗಾಂಜಾ ಜಪ್ತಿಯಾಗಿದೆ. ಹೊರ ರಾಜ್ಯದಿಂದ ಗಾಂಜಾ ತಂದು ನಗರದಲ್ಲಿ ಆರೋಪಿಗಳು ಮಾರುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಅಶೋಕನಗರ ಪೊಲೀಸರು ನಡೆಸಿದ ಮತ್ತೊಂದು ಕಾರ್ಯಾಚರಣೆಯಲ್ಲಿ ಕೇರಳ ಮೂಲದ ಹಮ್ಜಾ ಮಹಮದ್ ಹಾಗೂ ಯಾಸಿರ್ ಬಂಧಿತರಾಗಿದ್ದಾರೆ. ಈ ಆರೋಪಿಗಳಿಂದ 1.12 ಕೋಟಿ ರು ಬೆಲೆಯ 3.2 ಕೆಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.