ಕನ್ನಡಪ್ರಭ ವಾರ್ತೆ ಕಲಬುರಗಿ
ಈ ನಿರ್ಣಯದಂತೆ ಮುಂದಿನ ದಿನಗಳಲ್ಲಿ 2.7 ಟಿಎಂಸಿ ನೀರು ಜಲಾಶಯದಿಂದ ಕಾಲುವೆಗಳಿಗೆ ಹರಿದು ಬರಲಿದ್ದು ಇದು ಮೆಣಸಿನಕಾಯಿ ಬೆಳೆಗೆ ಅನುಕೂಲವಾಗಲಿದೆ.
ನಾರಾಯಣಪುರ ಹಾಗೂ ಆಲಮಟ್ಟಿ ಜಲಾಶಯಗಳಿಂದ ಕಾಲುವೆಗಳಿಗೆ ಹರಿಸಲು ನಿರ್ಧಾರ ಕೈಗೊಂಡು ಕಾಂಗ್ರೆಸ್ ಸರಕಾರ ನುಡಿದಂತೆ ನಡೆದಿದೆ. ಸಂಕಷ್ಟದ ಸಮಯದಲ್ಲಿಯೂ ರೈತರ ಕೈ ಹಿಡಿದಿದೆ. ಕಾಂಗ್ರೆಸ್ ಸರ್ಕಾರ ಸದಾಕಾಲ ರೈತ ಸ್ನೇಹಿ ಎಂಬುದಕ್ಕೆ ಈ ನಿರ್ಣಯವೇ ಕನ್ನಡಿ ಹಿಡಿದಿದೆ ಎಂದು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (ಕೆಕೆಆರ್ಡಿಬಿ) ಅದ್ಯಕ್ಷರು, ಜೇವರ್ಗಿ ಶಾಸಕರಾಗಿರುವ ಡಾ. ಅಜಯ್ ಧರ್ಮಸಿಂಗ್ ಎಂದು ಹೇಳಿದ್ದಾರೆ.ಪತ್ರಿಕಾ ಹೇಳಿಕೆ ನೀಡಿರುವ ಡಾ. ಅಜಯ್ ಸಿಂಗ್ ಅವರು ಬರಗಾಲದ ಸಂಕಷ್ಟ ಸಂದರ್ಭದಲ್ಲಿಯೂ ಆಲಮಟ್ಟಿ ಹಾಗೂ ನಾರಾಯಣಪೂರ ಜಲಾಶಯದಿಂದ ಕಾಲುವೆಗಳಗೆ ನೀರು ಹರಿಸುವ ನಿರ್ಣಯ ಕೈಗೊಂಡು ರೈತರ ಪರವಾಗಿ ನಿಂತಿರುವ ರಾಜ್ಯದ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಈ ಸಂದರ್ಭದಲ್ಲಿ ಅಭಿನಂದಿಸಿದ್ದಾರೆ.
ಇದೇ ಸಮಯದಲ್ಲಿ ಕಳೆದ ವರ್ಷಕ್ಕೆ ಜಲಾಶಯಗಳಲ್ಲಿನ ನೀರಿನ ಸಂಗ್ರಹಕ್ಕೆ ಹೋಲಿಸಿದಾಗ ಈ ವರ್ಷ ಪ್ರಸಕ್ತ ಶೇ. 50 ರಷ್ಟು ಸಂಗ್ರಹ ಕಡಿಮೆ ಇದೆ. ಮುಂಬರುವ ಬೇಸಿಗೆಯಲ್ಲಿ ಜನ- ಜಾನುವಾರು ಕುಡಿಯುವ ನೀರಿಗೆ ಜಲಾಯದಲ್ಲಿ ನೀರು ಸಂಗ್ರಹಿಸಿಡುವುದು ಅಗತ್ಯವಾಗಿದೆ.
ಜೇವರ್ಗಿ ಮತಕ್ಷೇತ್ರದಲ್ಲಿ ಬರುವ ಇಂಡಿ, ಜೇವರ್ಗಿ, ಮುಡಬೂಳ್ ಶಾಖಾ ಕಾಲುವೆಗಳಿಗೆ ಇನ್ನೇನು ಕೃಷ್ಣೆಯ ನೀರು ಹರಿದು ಬರಲಿದ್ದು ಈ ಕಾಲುವೆಗಳ ಇಕ್ಕೆಲಗಳಲ್ಲಿರುವ ರೈತರು ನೀರಿನ ಸದ್ಬಳಕೆಗೆ ಮುಂದಾಗಬೇಕು. ಪರಸ್ಪರ ಸಹಕಾರದಿಂದ ನೀರನ್ನು ಪಡೆದು ಮೆಣಸಿನಕಾಯಿ ಬೆಳೆ ಉತ್ಪನ್ನ ಪಡೆಯಬೇಕು.
ಬೆಳೆ ಸಂರಕ್ಷಣೆಗೆ ನೀರನ್ನು ಪಡೆಯಲು ರೈತರೆಲ್ಲರೂ ನೀರಾವರಿ ಇಲಾಖೆ ಅಧಿಕಾರಿಗಳ ಜೊತೆ ಪರಸ್ಪರ ಸಹಕಾರದಿಂದ ವರ್ತಿಸಬೇಕು ಎಂದು ಡಾ. ಅಜಯ್ ಧರಂಸಿಂಗ್ ಅವರು ರೈತ ಸಮೂಹವನ್ನು ಕೋರಿದ್ದಾರೆ.