2 ಪುಂಡಾನೆ ಸೆರೆ ಕಾರ್ಯಾಚರಣೆಗೆ ಅನುಮತಿ

KannadaprabhaNewsNetwork | Published : Dec 18, 2024 12:47 AM

ಸಾರಾಂಶ

ಚನ್ನಪಟ್ಟಣ: ತಾಲೂಕಿನ ರೈತರ ಪಾಲಿಗೆ ಕಂಟಕಪ್ರಾಯವಾಗಿರುವ ಪುಂಡಾನೆಗಳ ಸೆರೆ ಕಾರ್ಯಾಚರಣೆಗೆ ಅನುಮತಿ ದೊರೆತಿದ್ದು, 2 ಪುಂಡಾನೆಗಳ ಸೆರೆ ಕಾರ್ಯಾಚರಣೆ ಶೀಘ್ರದಲ್ಲೇ ಆರಂಭಗೊಳ್ಳಲಿದೆ.

ಚನ್ನಪಟ್ಟಣ: ತಾಲೂಕಿನ ರೈತರ ಪಾಲಿಗೆ ಕಂಟಕಪ್ರಾಯವಾಗಿರುವ ಪುಂಡಾನೆಗಳ ಸೆರೆ ಕಾರ್ಯಾಚರಣೆಗೆ ಅನುಮತಿ ದೊರೆತಿದ್ದು, 2 ಪುಂಡಾನೆಗಳ ಸೆರೆ ಕಾರ್ಯಾಚರಣೆ ಶೀಘ್ರದಲ್ಲೇ ಆರಂಭಗೊಳ್ಳಲಿದೆ.

ಈ ಕುರಿತು ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ(ವನ್ಯಜೀವಿ) ಮತ್ತು ಮುಖ್ಯ ವನ್ಯಜೀವಿ ಪರಿಪಾಲಕರು ಡಿ.16ರಂದು ಆದೇಶ ಹೊರಡಿಸಿದ್ದು, ಚನ್ನಪಟ್ಟಣ ವಲಯದಲ್ಲಿ ಉಪಟಳ ನೀಡುತ್ತಿರುವ 6 ಆನೆಗಳ ಪೈಕಿ 2 ಪುಂಡಾನೆಗಳನ್ನು ಸೆರೆಹಿಡಿದು ಆನೆ ಶಿಬಿರಕ್ಕೆ ಸ್ಥಳಾಂತರಿಸುವಂತೆ ಆದೇಶ ಹೊರಡಿಸಿದ್ದಾರೆ. 1972ರ ವನ್ಯಜೀವಿ ರಕ್ಷಣಾ ಕಾಯ್ದೆಗಳಿಗೆ ಉಲ್ಲಂಘನೆಯಾಗದಂತೆ ಆನೆ ಸೆರೆ ಕಾರ್ಯಾಚರಣೆ ನಡೆಸುವಂತೆ ಉಲ್ಲೇಖಿಸಿದ್ದಾರೆ.

ಆನೆಗಳ ದಾಂಗುಡಿ:

ಚನ್ನಪಟ್ಟಣ ವಲದಯಲ್ಲಿ ಸುಮಾರು 25ರಿಂದ 30 ಆನೆಗಳು ಓಡಾಡುತ್ತಿವೆ. ಇವುಗಳಲ್ಲಿ ಕೆಲವು ತೆಂಗಿನಕಲ್ಲು, ಚಿಕ್ಕಮಣ್ಣುಗುಡ್ಡೆ, ನರಿಕಲ್ಲುಗುಡ್ಡೆ ಅರಣ್ಯ ಪ್ರದೇಶದಲ್ಲಿ ಓಡಾಡುತ್ತಿದ್ದು, ಕಾಡಂಚಿನ ಗ್ರಾಮಗಳಲ್ಲಿ ಬೆಳೆದ ತೆಂಗು, ಭತ್ತ, ರಾಗಿ, ಮಾವು, ಬಾಳೆ ಬೆಳೆಗಳನ್ನು ಧ್ವಂಸ ಮಾಡುತ್ತಿವೆ. ಇದರಿಂದ ಕಂಗೆಟ್ಟ ರೈತರು ಸಾಕಷ್ಟು ಬಾರಿ ಪ್ರತಿಭಟನೆ ನಡೆಸಿದ್ದಾರೆ.

ಇತ್ತೀಚೆಗೆ ಚನ್ನಪಟ್ಟಣ ಶಾಸಕ ಯೋಗೇಶ್ವರ್ ರಾಮನಗರದ ವಲಯ ಅರಣ್ಯಾಧಿಕಾರಿಗಳ ಕಚೇರಿಯಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳ ಸಭೆ ನಡೆಸಿ ಆನೆ ಸೆರೆ ಕಾರ್ಯಾಚರಣೆಗೆ ಕ್ರಮ ವಹಿಸುವಂತೆ ಸೂಚಿಸಿದ್ದರು. ಇದರ ಬೆನ್ನಲ್ಲೆ ಆನೆ ಸೆರೆ ಕಾರ್ಯಾಚರಣೆಗೆ ಅನುಮತಿ ನೀಡಲಾಗಿದೆ.

ವಾಪಸಾದ ಮಖ್ನಾ, ಟಸ್ಕರ್:

ಈ ಹಿಂದೆ 2022 ಹಾಗೂ 2023ರಲ್ಲಿ ಎರಡು ಬಾರಿ ಆನೆ ಸೆರೆ ಕಾರ್ಯಾಚರಣೆ ನಡೆಸಿ ಮೂರು ಆನೆಗಳನ್ನು ಸೆರೆ ಹಿಡಿಯಲಾಗಿತ್ತು. ಒಂದು ಮಖ್ನಾ, ಟಸ್ಕರ್ ಹಾಗೂ ಇನ್ನೊಂದು ಆನೆಯನ್ನು ಸೆರೆಹಿಡಿದು ಸ್ಥಳಾಂತರಿಸಲಾಗಿತ್ತು. ಇವುಗಳಲ್ಲಿ ಮಖ್ನಾ ಹಾಗೂ ಟಸ್ಕರ್ ಮತ್ತೆ ಚನ್ನಪಟ್ಟಣ ವಲಯಕ್ಕೆ ಹಿಂದಿರುಗಿ ದಾಂಗುಡಿ ಶುರು ಮಾಡಿತ್ತು. ಮತ್ತೆ ಕಾಡಿಗೆ ಹಿಮ್ಮೆಟ್ಟಿಸಿದರೂ ಸಹ ಕಾಡಂಚಿನ ಗ್ರಾಮಗಳಲ್ಲಿ ಉಪಟಳ ಕೊಡುತ್ತಿತ್ತು. ಜತೆಗೆ ಚನ್ನಪಟ್ಟಣದ ಅರ್ಜುನ, ಗವಿರಂಗ, ದೊಡ್ಡಾನೆ, ಬಿ.ವಿ.ಹಳ್ಳಿ ಗುಂಡ ಆನೆಗಳೂ ಬೆಳೆಗಳನ್ನು ನಾಶ ಮಾಡುತ್ತಿವೆ. ಹೆಚ್ಚು ಉಪಟಳಕಾರಿ 2 ಪುಂಡಾನೆಗಳ ಸೆರೆ ಹಿಡಿಯಲು ಮಾತ್ರ ಅನುಮತಿ ನೀಡಲಾಗಿದೆ.

ಅಭಿಮನ್ಯು ಆನೆಯನ್ನು ಹೊರತುಪಡಿಸಿ ಪುಂಡಾನೆ ಸೆರೆ ಕಾರ್ಯಾಚರಣೆಯ ಆನೆಗಳ ತಂಡ-1 ಅನ್ನು ಆನೆ ಸೆರೆ ಕಾರ್ಯಾಚರಣೆಗೆ ಬಳಸಿಕೊಳ್ಳುವಂತೆ ಸೂಚಿಸಿಲಾಗಿದೆ. 1972ರ ವನ್ಯಜೀವಿ ರಕ್ಷಣಾ ಕಾಯ್ದೆಗೆ ಉಲ್ಲಂಘನೆಯಾಗದಂತೆ ಸರ್ಕಾರದ ನಿರ್ದೇಶನ ಹಾಗೂ ಪ್ರಮಾಣಿತ ಕಾರ್ಯವಿಧಾನಗಳನ್ನು ಕಟ್ಟುನಿಟ್ಟು ಪಾಲನೆ ಹಾಗೂ ಮುಂಜಾಗ್ರತಾ ಕ್ರಮ ವಹಿಸುವಂತೆ ಆದೇಶದಲ್ಲಿ ತಿಳಿಸಲಾಗಿದೆ.

ಪೊಟೊ೧೭ಸಿಪಿಟಿ೨,೩:

ಚನ್ನಪಟ್ಟಣದಲ್ಲಿ ಈ ಹಿಂದೆ ಸೆರೆಹಿಡಿದಿದ್ದ ಪುಂಡಾನೆಗಳು.

Share this article