ಚಾಮರಾಜನಗರ: ತಾಲೂಕಿನಲ್ಲಿ ಗುರುವಾರ ಬಿರುಗಾಳಿ ಸಹಿತ ಬಿದ್ದ ಸಾಧಾರಣ ಮಳೆಗೆ 25 ಎಕರೆ ಪ್ರದೇಶದಲ್ಲಿ ಬಾಳೆ ಗಿಡ ಹಾಗೂ ವಿವಿಧ ಗ್ರಾಮಳಲ್ಲಿ ಮೂರು ಮನೆಗಳಿಗೆ ಹಾನಿಯಾಗಿದೆ.
ತಾಲೂಕಿನ ಸಮೀಪದ ಅಜ್ಜಿಪುರ ಮತ್ತು ನಾಗಣ್ಣನಗರ, ಜಿಆರ್ ನಗರದಲ್ಲಿ ಗುರುವಾರ ಬಿರುಗಾಳಿ ಸಹಿತ ಬಿದ್ದ ಸಾಧಾರಣ ಮಳೆಗೆ ಕಟಾವಿಗೆ ಬಂದಿದ್ದಂತ ಲಕ್ಷಾಂತರ ರು. ಬೆಲೆಬಾಳುವ ಬಾಳೆ ಬೆಳೆ ನೆಲ ಕಚ್ಚಿದೆ. ಜಿ ಆರ್ ನಗರ ಹಾಗೂ ದೊಮ್ಮನ ಗದ್ದೆ ನಾಗಣ್ಣ ನಗರದಲ್ಲಿ ಒಟ್ಟು ಮೂರು ಮನೆಗಳಿಗೆ ಹಾನಿಯಾಗಿದೆ.ಗುರುವಾರ ಸಂಜೆ ಬಾರಿ ಬಿರುಗಾಳಿಯಿಂದ ಅಜ್ಜಿಪುರ ಗ್ರಾಮದ ಪಚ್ಚೇಗೌಡನ ದೊಡ್ಡಿ ವಿವಿಧ ರೈತರ ಜಮೀನುಗಳಲ್ಲಿ ಬಾಳೆಫಸಲು, 11 ಎಕರೆ ಜಿಆರ್ ನಗರ ತೋಟದ ಜಮೀನುಗಳಲ್ಲಿ ಬೆಳೆಯಲಾಗಿದ್ದ 10 ಎಕರೆ ಬಾಳೆ ಫಸಲು, ನಾಗಣ್ಣ ನಗರದಲ್ಲಿ ರೈತರ ಜಮೀನುಗಳಲ್ಲಿ 5 ಎಕರೆ ಬಾಳೆ ಬಾರಿ ಬಿರುಗಾಳಿಗೆ ನೆಲ ಕಚ್ಚಿದೆ.
ಕಂದಾಯ ಇಲಾಖೆಯ ಗ್ರಾಮ ಲೆಕ್ಕಾಧಿಕಾರಿ ವಿನೋದ್ ವಿವಿಧ ಗ್ರಾಮಗಳಲ್ಲಿ ಭಾರಿ ಬಿರುಗಾಳಿಯಿಂದ ರೈತರ ಜಮೀನುಗಳಲ್ಲಿ ಹಾನಿಯಾಗಿರುವ ಪ್ರದೇಶಗಳಿಗೆ ಭೇಟಿ ನೀಡಿ ರೈತರಿಂದ ಮಾಹಿತಿ ಪಡೆದು ಸರ್ಕಾರದಿಂದ ಸಿಗುವ ಪ್ರಕೃತಿ ವಿಕೋಪದಡಿ ಬೆಳೆ ಹಾನಿ ಪರಿಹಾರ ನೀಡಲು ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ರೈತರಿಗೆ ಭರವಸೆ ನೀಡಿದರು.ಕಂದಾಯ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆ ಸರ್ವೆ ನಡೆಸಿ ರೈತರ ಜಮೀನುಗಳಲ್ಲಿ ಬಾರಿ ಬಿರುಗಾಳಿಗೆ ಹಾನಿಯಾಗಿರುವ ಬಗ್ಗೆ ಮತ್ತು ಈ ಭಾಗದಲ್ಲಿ ಮನೆಗಳಿಗೂ ಹಾನಿಯಾಗಿ ಲಕ್ಷಾಂತರ ರು. ನಷ್ಟ ಉಂಟಾಗಿದೆ ಕೂಡಲೇ ಜಿಲ್ಲಾಡಳಿತ ಪ್ರಕೃತಿ ವಿಕೋಪದಡಿ ರೈತರಿಗೆ ಸಿಗುವ ಸೂಕ್ತ ಪರಿಹಾರವನ್ನು ತುರ್ತಾಗಿ ನೀಡಬೇಕು ಈ ನಿಟ್ಟಿನಲ್ಲಿ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಗಮನಹರಿಸಿ ತುರ್ತಾಗಿ ಕ್ರಮ ಕೈಗೊಳ್ಳಬೇಕೆಂದು ರೈತ ಸಂಘಟನೆ ಒತ್ತಾಯಿಸಿದೆ.