- ಮಲ್ಲಂದೂರು ಹೊನ್ನಮೇಶ್ವರಿ ದೇವಸ್ಥಾನದಲ್ಲಿ ಅರಣ್ಯಾಧಿಕಾರಿಗೆ ಬೀಳ್ಕೊಡಿಗೆ ಸಮಾರಂಭದಲ್ಲಿ ಮೆಚ್ಚುಗೆ
ಕಳೆದ 16 ವರ್ಷದಿಂದ ಮಡಬೂರು ವೃತ್ತದ ಉಪ ವಲಯ ಅರಣ್ಯಾಧಿಕಾರಿಯಾಗಿದ್ದ ಸಂಜೀವ ದೇವಾಡಿಗ ಅವರು ವೃತ್ತಿಯಲ್ಲಿ ಪ್ರಾಮಾಣಿಕತೆ ಮೈಗೂಡಿಸಿಕೊಂಡಿದ್ದು 25 ಹೆಕ್ಟೇರ್ ಗಿಂತಲೂ ಹೆಚ್ಚು ನೆಡತೋಪು ಬೆಳೆಸಿದ್ದಾರೆ ಎಂದು ಮಲ್ಲಂದೂರು ಹೊನ್ನಮ್ಮೇಶ್ವರಿ ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ಎಂ.ಎನ್.ಶಂಕರನಾರಾಯಣ ತಿಳಿಸಿದರು.
ಭಾನುವಾರ ಮಲ್ಲಂದೂರಿನ ಹೊನ್ನಮ್ಮೇಶ್ವರಿ ದೇವಸ್ಥಾನದಲ್ಲಿ ಮಲ್ಲಂದರಿನ ಹೊನ್ನಮ್ಮೇಶ್ವರಿ ಗ್ರಾಮ ಅರಣ್ಯ ಸಮಿತಿ ಹಾಗೂ ಗ್ರಾಮಸ್ಥರಿಂದ ವರ್ಗಾವಣೆಗೊಂಡ ಮಡಬೂರು ವೃತ್ತದ ಉಪ ವಲಯ ಅರಣ್ಯಾಧಿಕಾರಿ ಸಂಜೀವ್ ದೇವಾಡಿಗ ಹಾಗೂ ವನ ಪಾಲಕ ರವಿಕುಮಾರ್ ಅವರಿಗೆ ಏರ್ಪಡಿಸಿದ್ದ ಬೀಳ್ಕೊಡಿಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂಜೀವ್ ದೇವಾಡಿಗ ಅವರ ಅವಧಿಯಲ್ಲಿ ಯಾವುದೇ ಕಾಡಿಗೆ ಬೆಂಕಿ ಬೀಳದಂತೆ ಎಚ್ಚರಿಕೆ ವಹಿಸಿದ್ದರು. ಅವರ ಸಮರ್ಥ ಕಾರ್ಯವೈಖರಿಯಿಂದ ಗ್ರಾಮಸ್ಥರ ಹಾಗೂ ಅರಣ್ಯ ಇಲಾಖೆ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಸಂಜೀವ ದೇವಾಡಿಗ ಅವರು ಅರಣ್ಯ ಇಲಾಖೆ ಕಾನೂನು ಪಾಲಿಸುವ ಜೊತೆಗೆ ಗ್ರಾಮಸ್ಥರ ಜೊತೆ ಮಾನವೀಯತೆಯಿಂದಲೂ ನಡೆದುಕೊಂಡಿದ್ದರು. ಮುಂದಿನ ಅವಧಿಯಲ್ಲಿ ಅವರಿಗೆ ಬಡ್ತಿ ಸಿಕ್ಕಿ ಇನ್ನಷ್ಟು ಉತ್ತಮ ಹುದ್ದೆ ಪಡೆಯಲಿ. ಉತ್ತಮ ವ್ಯಕ್ತಿತ್ವ ಹೊಂದಿರುವ ಸಂಜೀವ್ ದೇವಾಡಿಗ ಅವರು ಮುಂದೆ ಕಾರ್ಯ ನಿರ್ವಹಿಸುವ ಅವಧಿಯಲ್ಲೂ ಉತ್ತಮ ಹೆಸರು ಪಡೆಯಲಿ ಎಂದು ಆಶಯ ವ್ಯಕ್ತಪಡಿಸಿದರು.ಅಲ್ಲದೆ ವರ್ಗಾವಣೆಗೊಂಡ ವನಪಾಲಕ ರವಿಕುಮಾರ್ ಸಹ 6 ವರ್ಷ ಇಲ್ಲಿ ಕೆಲಸ ಮಾಡಿ ವರ್ಗಾವಣೆಗೊಂಡಿದ್ದಾರೆ. ಅವರು ಸಹ ಗ್ರಾಮಸ್ಥರೊಂದಿಗೆ ಉತ್ತಮ ಒಡನಾಟ ಇಟ್ಟುಕೊಂಡಿದ್ದರು ಎಂದು ಸ್ಮರಿಸಿದರು.
ಗ್ರಾಮಸ್ಥರಾದ ಮಧುಕರ್ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಸಭೆಯಲ್ಲಿ ಗ್ರಾಪಂತಿ ಅಧ್ಯಕ್ಷೆ ರೇಖಾ,ಗ್ರಾಮದ ಹಿರಿಯರಾದ ಎಂ.ಎಸ್.ನಾಗೇಂದ್ರ, ಎಂ.ಎನ್.ಲಕ್ಷ್ಮೀನಾರಾಯಣ, ಎಂ.ಎನ್.ಸುರೇಶ್, ನೂತನ ಉಪವಲಯ ಅರಣ್ಯಾಧಿಕಾರಿ ಪರಮೇಶ್ವರ್, ನೂತನ ವನಪಾಲಕ ತಬರೇಜ್, ಗ್ರಾಮಸ್ಥರಾದ ಕೆ.ಕೆ. ನರಸಿಂಹಮೂರ್ತಿ, ಕೆ.ಕೆ.ರಮೇಶ್, ಅರೆಕುಡಿಗೆ ರವಿ, ಕೇಶವ, ಎಂ.ಕೆ.ಮೋಹನ,ದಿನೇಶ್ ಕ್ಯಾಜಿಗೆ ಸ್ವಾಗತಿಸಿದರು. ಕೆ.ಕೆ.ರಮೇಶ್ ಕಾರ್ಯಕ್ರಮ ನಿರೂಪಿಸಿದರು. ಹಂಪಿನಮನೆ ಮಹೇಶ್ ವಂದಿಸಿದರು.