ಕನ್ನಡಪ್ರಭ ವಾರ್ತೆ ಕುಶಾಲನಗರ
ಕುಶಾಲನಗರದ ಕೈಗಾರಿಕೋದ್ಯಮಿಗಳ ಮತ್ತು ವೃತ್ತಿ ನಿರತರ ವಿವಿಧೋದ್ದೇಶ ಸಹಕಾರ ಸಂಘ 2023 -24 ರಲ್ಲಿ 412.71 ಕೋಟಿ ರು. ವಾರ್ಷಿಕ ವ್ಯವಹಾರ ನಡೆಸಿದ್ದು ರು. 3.04 ಕೋಟಿ ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷ ಟಿ.ಆರ್.ಶರವಣಕುಮಾರ್ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸಕ್ತ ಸಾಲಿನಲ್ಲಿ ಸಾಲ ವಸೂಲಾತಿ ಶೇ.95.12 ರಷ್ಟು ಆಗಿದೆ. 2022-23ನೇ ಸಾಲಿನಲ್ಲಿ 1305 ಸದಸ್ಯರಿಂದ ರು.3.45 ಕೋಟಿ ಪಾಲು ಬಂಡವಾಳ ಸಂಗ್ರಹಿಸಿದ್ದು, ಸದರಿ 1355 ಸದಸ್ಯರನ್ನು ಹೊಂದಿದೆ ಎಂದರು.
ಸಂಸ್ಥೆಯಿಂದ ವನಸಿರಿ ಯೋಜನೆಯಡಿ ವಿವಿಧ ಸ್ಥಳಗಳಲ್ಲಿ 500ಕ್ಕೂ ಹೆಚ್ಚು ಗಿಡ ನೆಡುವ ಯೋಜನೆ ರೂಪಿಸಲಾಗಿದೆ. ಕಳೆದ 2 ವರ್ಷಗಳಿಂದ ಹಲವು ಗಿಡಗಳನ್ನು ನೆಟ್ಟು ಬೆಳಸಲಾಗಿದೆ. ಕೂಡ್ಲೂರು ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಅಬಾಕಸ್ ಪುಸ್ತಕ ಮತ್ತು ಸಾಮಾಗ್ರಿಗಳನ್ನು ನೀಡಲು 40 ಸಾವಿರ ರು. ವೆಚ್ಚ ಮಾಡಲಾಗಿದೆ ಎಂದು ತಿಳಿಸಿದರು.ಸಂಘವು ಸಾಮಾಜಿಕ ಕೆಲಸಗಳಲ್ಲಿ ಕೈಜೋಡಿಸುವ ನಿಟ್ಟಿನಲ್ಲಿ ಕುಶಾಲನಗರ ಸರ್ಕಾರಿ ಪದವಿಪೂರ್ವ ಕಾಲೇಜು, ಸರ್ಕಾರಿ ಪ್ರೌಢಶಾಲೆ ಶಿಕ್ಷಕರುಗಳ ಕೋರಿಕೆಯಂತೆ ಎರಡು ಕಡೆಗಳಲ್ಲಿ ಅಂದಾಜು 4 ಲಕ್ಷ ವೆಚ್ಚದಲ್ಲಿ ಕಂಪ್ಯೂಟರ್ ಲ್ಯಾಬ್ ಸ್ಥಾಪಿಸಲು ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ, ಸದ್ಯದಲ್ಲಿ ಈ ಯೋಜನೆ ಅನುಷ್ಠಾನಗೊಳ್ಳಲಿದೆ ಎಂದು ತಿಳಿಸಿದರು.ವಾರ್ಷಿಕ ಮಹಾಸಭೆ :ಸಂಘದ 2023 -24 ನೇ ಸಾಲಿನ ವಾರ್ಷಿಕ ಮಹಾಸಭೆ ಭಾನುವಾರ ಬೆಳಗ್ಗೆ 11 ಗಂಟೆಗೆ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ. ಶೇ.25 ಡಿವಿಡೆಂಡ್ ನೀಡಲಾಗುತ್ತ ಎಂದು ಈ ಸಂದರ್ಭ ತಿಳಿಸಿದರು.
ಉಪಾಧ್ಯಕ್ಷ ಜೋಸೆಫ್ ವಿಕ್ಟರ್ ಸೊನ್ಸ್, ನಿರ್ದೇಶಕರಾದ ಎಂ.ಎಂ.ಶಾಹಿರ್, ಎನ್.ಇ.ಶಿವಪ್ರಕಾಶ್, ಎಂ.ವಿ.ನಾರಾಯಣ, ವಿ.ಸಿ.ಅಮೃತ್, ಎಲ್.ನವೀನ್, ಕೆ.ಪಿ.ಶರತ್, ಕವಿತಾ, ಕೃತಿಕಾ ಪೊನ್ನಪ್ಪ, ಕೀರ್ತಿ ಲಕ್ಷ್ಮಿ, ಕೆ ಎನ್ ಸುರೇಶ್, ಆರ್.ಕೆ.ನಾಗೇಂದ್ರ ಬಾಬು, ಸಿಇಒ ಬಿ.ಡಿ.ಶ್ರೀಜೇಶ್ ಮತ್ತು ವ್ಯವಸ್ಥಾಪಕ ಆರ್.ರಾಜು ಇದ್ದರು.