ಕಂದಾಯ ಇಲಾಖೆಯಿಂದ ಹೊನ್ನೇಕೊಡಿಗೆ ಸಂಪರ್ಕ ಸೇತುವೆ ಸಮೀಪದ ಜಾಗ ಮಂಜೂರು
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರತಾಲೂಕಿನಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸಲು ನಿಗಮಕ್ಕೆ ನೂತನವಾಗಿ ನಿರ್ಮಾಣವಾಗುತ್ತಿರುವ ಹೊನ್ನೇಕೊಡಿಗೆ ಸಂಪರ್ಕ ಸೇತುವೆ ಸಮೀಪ 3 ಎಕರೆ ಜಾಗವನ್ನು ಕಂದಾಯ ಇಲಾಖೆ ಹಸ್ತಾಂತರ ಮಾಡಿದೆ ಎಂದು ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಶ್ರೀನಿವಾಸ್ ತಿಳಿಸಿದರು.
ಭಾನುವಾರ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ,ಈಗಾಗಲೇ ಅಂದಾಜು 35 ಕೋಟಿ ರುಪಾಯಿ ವೆಚ್ಚದ ಹೊನ್ನೇಕೊಡಿಗೆ ಸಂಪರ್ಕ ಸೇತುವೆಯ ಕಾಮಗಾರಿ ಭರದಿಂದ ನಡೆಯುತ್ತಿದೆ.ಸೇತುವೆ ಸಮೀಪದಲ್ಲೇ ಪ್ರವಾಸಿಗರಿಗಾಗಿ 3 ಎಕ್ರೆ ಜಾಗ ಗುರುತಿಸಿದ್ದು ಈ ಜಾಗದಲ್ಲಿ ರೆಸಾರ್ಟ್, ಹೋಟೆಲ್, ಟ್ರೀ ಪಾರ್ಕ್, ನೇಚರ್ ಪಾರ್ಕ್ ಉದ್ಯಾನವನ,ಕಾಟೇಜ್ ನಿರ್ಮಿಸಲಾಗುವುದು. ಸಮೀಪದಲ್ಲೇ ಭದ್ರಾ ಹಿನ್ನೀರು ನಿಂತಿರುವುದರಿಂದ ಪ್ರವಾಸಿಗರಿಗೆ ಜಲ ಕ್ರೀಡೆ, ಬೋಟ್ ವ್ಯವಸ್ಥೆ ಕಲ್ಪಿಸಲಾಗುವುದು.ಬೇಸಿಗೆಯಲ್ಲಿ ನೀರು ಕಡಿಮೆಯಾಗುವ ಸಾದ್ಯತೆ ಇರುವುದರಿಂದ ಚೆಕ್ ಡ್ಯಾಂ ನಿರ್ಮಿಸಿ ನೀರು ಸಂಗ್ರಹ ಮಾಡಲಾಗುವುದು. ಶಾಸಕರು ಈ ಬಗ್ಗೆ ಗಮನ ನೀಡಬೇಕು. ಈಗಾಗಲೇ ಸ್ಥಳಕ್ಕೆ ಆರ್ಕೆಟಿಕ್ ಇಂಜಿನಿಯರ್, ಶಾಸಕರು ಸ್ಥಳ ಪರಿಶೀಲನೆ ಮಾಡಿದ್ದಾರೆ ಎಂದರು.ಮೇ ತಿಂಗಳಲ್ಲಿ ಸೇತುವೆ ಉದ್ಘಾಟನೆ
ಮೇ ತಿಂಗಳಲ್ಲಿ 35 ಲಕ್ಷ ರುಪಾಯಿ ವೆಚ್ಚದ ಹೊನ್ನೇಕೊಡಿಗೆ ಸಂಪರ್ಕ ಸೇತುವೆ ಉದ್ಘಾಟಿಸಲಾಗುವುದು.ಮುಖ್ಯ ಮಂತ್ರಿ ಸಿದ್ದರಾಮಯ್ಯ ಆಗಮಿಸಿ ಉದ್ಘಾಟಿಸಲಿದ್ದಾರೆ.3 ಜನ ಮಂತ್ರಿಗಳು ಆಗಮಿಸಲಿದ್ದಾರೆ. ಈ ಹಿಂದೆ ಕಡಹಿನಬೈಲು ಏತ ನೀರಾವರಿ ಯೋಜನೆಯ ಉದ್ಘಾಟನೆ ಹಾಗೂ ಹೊನ್ನೇಕೊಡಿಗೆ ಸಂಪರ್ಕ ಸೇತುವೆ ಶಂಕುಸ್ಥಾಪನೆ ಹಾಗೂ ಪ್ರವಾಸಿ ಮಂದಿರದ ಉದ್ಘಾಟನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಿದ್ದರು ಎಂದರು.ಬಾಕ್ಸ್
ರಾಜ್ಯ ನವೀಕರಿಸಬಹುದಾದ ಇಂಧನ ಅಭಿವೃದ್ದಿ ನಿಗಮದ ಅಧ್ಯಕ್ಷ ಟಿ.ರಾಜೇಗೌಡ ಸುದ್ದಿಗಾರರೊಂದಿಗೆ ಮಾತನಾಡಿ, ಕಂದಾಯ ಸಚಿವ ಕೃಷ್ಣ ಬೈರೇಗೌಡ ಸರ್ಕಾರಿ ಜಾಗದಲ್ಲಿ ಮನೆ ಕಟ್ಟಿಕೊಂಡವರಿಗೆ ಕಂದಾಯ ವಿಧಿಸುವಂತೆ ಆದೇಶ ಮಾಡಿದ್ದಾರೆ. ಈ ಆದೇಶದಿಂದ ಶೃಂಗೇರಿ ಕ್ಷೇತ್ರದಲ್ಲಿ ಸರ್ಕಾರಿ ಜಾಗದಲ್ಲಿ ಮನೆ ಕಟ್ಟಿಕೊಂಡಿರುವ 5 ಸಾವಿರ ಜನರಿಗೆ ಉಪಯೋಗವಾಗಿದೆ. ಶೃಂಗೇರಿ ಕ್ಷೇತ್ರದ 5 ಸಾವಿರ ಮನೆಗಳಿಗೆ ಯಾವುದೇ ದಾಖಲೆಗಳಿರಲಿಲ್ಲ.ಕಂದಾಯ ಸಹ ಇರಲಿಲ್ಲ. ಕಂದಾಯ ಸಚಿವರ ಈ ಆದೇಶದಿಂದ ಮುಂದೆ ಗ್ರಾಮ ಪಂಚಾಯಿತಿಯವರು ಕಂದಾಯ ವಿಧಿಸಲಿದ್ದಾರೆ.ಇದರಿಂದ ಸರ್ಕಾರಿ ಜಾಗದಲ್ಲಿ ಮನೆ ಕಟ್ಟಿಕೊಂಡು ವಾಸ ಮಾಡುತ್ತಿರುವ ಜನರಿಗೆ ಮುಂದೆ ದಾಖಲೆ ಸಿಕ್ಕಿ ಮೂಲ ಸೌಕರ್ಯ ಪಡೆಯಲು ಅನುಕೂಲವಾಗಿದೆ ಎಂದರು.ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತಶೆಟ್ಟಿ, ಮಾಜಿ ಸದಸ್ಯ ಸುನೀಲ್ ಇದ್ದರು.