ಕನ್ನಡಪ್ರಭ ವಾರ್ತೆ ಉಡುಪಿ
ಭಾರತೀಯ ಜ್ಞಾನ ಪರಂಪರೆಯ ಬಗ್ಗೆ ಚಿಂತನಮಂಥನ ನಡೆಯುವ ಈ ಸಮ್ಮೇಳನದಲ್ಲಿ ದೇಶದ 16ಕ್ಕೂ ಹೆಚ್ಚು ಸಂಸ್ಕೃತ ವಿವಿಗಳ ಕುಲಪತಿಗಳು, ಪ್ರಾಚಾರ್ಯರು, ಪ್ರಾಧ್ಯಾಪಕರು ಮತ್ತು ದೇಶದಾದ್ಯಂತದಿಂದ ಬಂದಿರುವ ಸುಮಾರು 200 ಮಂದಿ ಭಾಗವಹಿಸಲಿದ್ದಾರೆ.
ಪರ್ಯಾಯ ಪುತ್ತಿಗೆ ಮಠ ಮತ್ತು ನವದೆಹಲಿಯ ಕೇಂದ್ರೀಯ ಸಂಸ್ಕೃತ ವಿವಿಗಳ ಸಹಯೋಗದಲ್ಲಿ ನಡೆಯುವ ಈ ಸಮ್ಮೇಳನದ ಉದ್ಘಾಟನೆಗೆ ಮೊದಲು ಬೆಳಗ್ಗೆ 9 ಗಂಟೆಗೆ ವಿವಿಧ ಮಠಾಧೀಶರು ಭಾಗವಹಿಸುವ ಶೋಭಾಯಾತ್ರೆ ನಡೆಯಲಿದೆ.ಇಂದು ಮೊದಲ ದಿನ ಭಗವದ್ಗೀತೆಯ ಬಗ್ಗೆ, ನಾಳೆ 25ರಂದು ಭಾರತೀಯ ಭಾಷೆಗಳ ಬಗ್ಗೆ, 26ರಂದು ಭಾರತೀಯ ಜ್ಞಾನ ಪರಂಪರೆಯ ಬಗ್ಗೆ 20ಕ್ಕೂ ಹೆಚ್ಚು ಗೋಷ್ಠಿಗಳು ನಡೆಯಲಿದ್ದು, 300 ಮಂದಿ ವಿವಿಧ ವಿದ್ವಾಂಸರು ಭಾಗವಹಿಸಲಿದ್ದಾರೆ. ಗೋಷ್ಠಿಗಳಿಗೆ ರಾಜಾಂಗಣ, ಗೀತಾಮಂದಿರ, ಸಂಸ್ಕೃತ ಕಾಲೇಜು, ರಾಘವೇಂದ್ರ ಮಠಗಳಲ್ಲಿ ವ್ಯವಸ್ಥೆ ಮಾಡಲಾಗಿದೆ.
ರಾತ್ರಿಯೇ ಬಾಬಾ ಆಗಮನ: ಪ್ರಾಚ್ಯ ವಿದ್ಯಾ ಸಮ್ಮೇಳನದ ಉದ್ಘಾಟನೆಗೆ ಆಗಮಿಸಿದ ಬುಧವಾರ ರಾತ್ರಿಯೇ ಯೋಗಗುರು ಬಾಬಾ ರಾಮದೇವ್ ಮತ್ತಿತರ ಗಣ್ಯರನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಪರ್ಯಾಯ ಮಠದ ವತಿಯಿಂದ ಭವ್ಯವಾಗಿ ಸ್ವಾಗತಿಸಲಾಯಿತು.
ಯೋಗಮಾತೆಯರು ರಾಮ್ ದೇವ್ ಅವರಿಗೆ ಆರತಿಯನ್ನು ಬೆಳಗಿದರು. ಶ್ರೀಮಠದ ಪರವಾಗಿ ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನಾಚಾರ್ಯ ಅವರು ವೇದಘೋಷಗಳ ನಡುವೆ ರಾಮ್ ದೇವ್ ಅವರಿಗೆ ಮಾಲಾರ್ಪಣೆ ಮಾಡಿ ಸ್ವಾಗತಿಸಿದರು. ಉದ್ಯಮಿ ಶಾಂತೀಶ್ ಶೆಟ್ಟಿ, ರಾಘವೇಂದ್ರ ಭಟ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.