ಕುದೂರು: ವಿಳಾಸ ಕೇಳುವ ನೆಪದಲ್ಲಿ ಒಂದೇ ದಿನ ಮೂವರು ಮಹಿಳೆಯರಿಂದ ಚಿನ್ನದ ಸರ ಕಸಿದು ಪರಾರಿಯಾಗಿದ್ದ ಮೂವರನ್ನು ಬಂಧಿಸಿ 17.50 ಲಕ್ಷ ರುಪಾಯಿ ಮೌಲ್ಯದ 112 ಗ್ರಾಂ 3 ಚಿನ್ನದ ಸರಗಳನ್ನು ಕುದೂರು ಠಾಣೆ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳಲ್ಲಿ ಅಯ್ಯನ್ಗಾರಿ ವಸಂತಿ 6 ಪ್ರಕರಣ ಹಾಗೂ ಉಳಿದ ಮೂವರು 3 ಪ್ರಕರಣಗಳಲ್ಲಿ ಭಾಗಿಯಾಗಿದ್ದರು. ಬೆಂಗಳೂರು ನಗರ, ಮಂಡ್ಯ, ತುಮಕೂರು ಜಿಲ್ಲೆಗಳ ಠಾಣೆಗಳ ಪ್ರಕರಣಗಳಲ್ಲಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆ ಮರೆಸಿಕೊಂಡಿದ್ದ ಆರೋಪಿ ಅಯ್ಯನ್ ಗಾರಿ ವಸಂತಿ ವಿರುದ್ಧ ವಾರೆಂಟ್ ಎಲ್ಪಿಆರ್ ಬಾಕಿ ಇದೆ. ಉಳಿದಂತೆ ಮೂವರು ಆರೋಪಿಗಳ ವಿರುದ್ಧ ಕುದೂರು ಠಾಣೆಯಲ್ಲಿ ಮೂರು ಪ್ರಕರಣ ದಾಖಲಾಗಿದೆ.
ಸರಗಳ್ಳತನ: 2026ರ ಮಾರ್ಚ್ 3ರಂದು ಮೀನಾಕ್ಷಿ ಎಂಬುವರು ಕಳ್ಳಿಪಾಳ್ಯದ ಭಕ್ತ ಮುನೇಶ್ವರ ಸ್ವಾಮಿ ರಥೋತ್ಸವಕ್ಕೆ ಹೋಗುತ್ತಿದ್ದಾಗ, ಸ್ವಲ್ಪ ದೂರದಲ್ಲಿ ಕಾರಿನಲ್ಲಿ ಬಂದ ಮಹಿಳೆ ವಿಳಾಸ ಕೇಳುವ ನೆಪದಲ್ಲಿ ಮೀನಾಕ್ಷಿ ಕೊರಳಲ್ಲಿದ್ದ 40 ಗ್ರಾಂ ಚಿನ್ನದ ಸರ ಕಸಿದು ಪರಾರಿಯಾಗಿದ್ದರು. ಮತ್ತೊಂದು ಪ್ರಕರಣದಲ್ಲಿ ಶಿವಮ್ಮ ಕಳ್ಳಿಪಾಳ್ಯ ದೇವಸ್ಥಾನಕ್ಕೆ ವಾಜರಹಳ್ಳಿ ರಸ್ತೆಯಲ್ಲಿ ಬರುವಾಗ ಮೂವರು ವಿಳಾಸ ಕೇಳುವ ನೆಪದಲ್ಲಿ ಆಕೆಯಿಂದ 40 ಗ್ರಾಂ ಚಿನ್ನದ ಸರ ಕಸಿದುಕೊಂಡು ಹೋಗಿದ್ದರು.ಇನ್ನೊಂದು ಪ್ರಕರಣದಲ್ಲಿ ಗಂಗನರಸಮ್ಮ ಎಂಬುವರು ಕಳ್ಳಿಪಾಳ್ಯ ದೇವಸ್ಥಾನಕ್ಕೆ ತೆರಳುತ್ತಿದ್ದಾಗ ಮಣ್ಣಿಗನಹಳ್ಳಿ ರಸ್ತೆಯಲ್ಲಿ ಬಂದ ಮೂವರು ವಿಳಾಸ ಕೇಳುವ ನೆಪದಲ್ಲಿ ಆಕೆಯಿಂದ 32 ಗ್ರಾಂ ಚಿನ್ನದ ಸರ ಕಸಿದು ಪರಾರಿಯಾಗಿದ್ದರು.ಒಂದೇ ದಿನದಲ್ಲಿ ಮೂರು ಕಡೆ ಸರಗಳ್ಳತನ ಪ್ರಕರಣಗಳನ್ನು ಎಸ್ಪಿ ಶ್ರೀನಿವಾಸ್ಗೌಡ, ಎಎಸ್ಪಿ ರಾಜೇಂದ್ರ, ಡಿವೈಎಸ್ಪಿ ರವಿ ಮಾರ್ಗದರ್ಶನದಲ್ಲಿ ಕುದೂರು ಠಾಣೆ ಆರಕ್ಷಕ ನಿರೀಕ್ಷಕ ಎಂ.ಚಂದ್ರಶೇಖರ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು.
ಕಾರ್ಯಾಚರಣೆಯಲ್ಲಿ ಕುದೂರು ಠಾಣೆ ಪಿಎಸ್ಐ ಕೃಷ್ಣಮೂರ್ತಿ ತಿಪ್ಪಯ್ಯ, ಮುಖ್ಯಪೇದೆಗಳಾದ ಸೂರ್ಯಕುಮಾರ್ , ಮಾರುತಿ ಕುಮಾರ್, ಶಿವರಾಜು, ದರ್ಶನ, ರಾಜೇಶ್, ಪೇದೆಗಳಾದ ಮಹದೇವಶೆಟ್ಟಿ, ಅಭಿಷೇಕ್, ಶರತ್, ಸತೀಶ್, ನಾಗರಾಜು, ಸಂತೋಷ್ ಕುಮಾರ್, ದೀಪಕ್ ಕುಮಾರ್, ಮಹಿಳಾ ಪೇದೆಗಳಾದ ಸುಜಾತಾ, ಶೃತಿ, ಲಕ್ಷ್ಮಿ ಇಳಗೇರ್ , ಮಹಾಲಕ್ಷ್ಮಿ, ಠಾಣೆ ಸಿಬ್ಬಂದಿಗಳಾದ ಕುಮಾರಸ್ವಾಮಿ, ಸುಭಾಷ್ , ಶೈಲಜಾರಾಣಿ, ತಾವರೆಕೆರೆ ಠಾಣೆ ಸಿಬ್ಬಂದಿ ಹೇಮಂತ್ ಕುಮಾರ್ , ಜಿಲ್ಲಾ ತಾಂತ್ರಿಕ ವಿಭಾಗದ ಸಿಬ್ಬಂದಿ ಮಹದೇವಯ್ಯ ಪಾಲ್ಗೊಂಡಿದ್ದರು.
7ಕೆಆರ್ ಎಂಎನ್ 5.ಜೆಪಿಜಿಕುದೂರು ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ವಶ ಪಡಿಸಿಕೊಂಡಿರುವ ಚಿನ್ನದ ಸರ.